Friday 31 October 2014

dhammapada/yamaka vagga/1:8/the story of sariputta and moggalana


ಯೋಗ್ಯ ಗ್ರಹಿಕೆಯು ಸತ್ಯದೆಡೆಗೆ ಕೊಂಡೊಯ್ಯುತ್ತದೆ
ಅಸಾರವಾದುದರಲ್ಲಿ ಅವರು ಸಾರವನ್ನು ಕಲ್ಪಿಸುವರು, ಸಾರವಾದುದರಲ್ಲಿ ಅವರು ಅಸಾರವನ್ನು ಕಾಣುವರು. ಯಾರು ಇಂತಹ ತಪ್ಪು ಯೋಚನೆಗಳಲ್ಲಿ ಆನಂದಿಸುವರೋ ಅವರು ಎಂದಿಗೂ ಸಾರವನ್ನು ಸಾಕ್ಷಾತ್ಕರಿಸಲಾರರು (11)
ಯಾವುದು ಸಾರವೋ ಅದನ್ನು ಸಾರವಾಗಿಯೇ ಅವರು ಪರಿಗಣಿಸುವರು, ಯಾವುದು ಅಸಾರವೋ ಅವರು ಅಸಾರವಾಗಿಯೇ ಪರಿಗಣಿಸುತ್ತಾರೆ. ಯಾರು ಈ ರೀತಿಯಲ್ಲಿ ಯೋಗ್ಯ ಚಿಂತನೆಯಿಂದಾಗಿ ಅವರ ಸಾರದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.        (12)
ಗಾಥ ಪ್ರಸಂಗ 1:8
ಸತ್ಯವನ್ನು ಸಾಕ್ಷಾತ್ಕರಿಸುವುದು ಅತಿ ಕಷ್ಟಕರ (ಉಪತಿಸ್ಸ ಮತ್ತು ಕೋಲಿತ)

                ರಾಜಗೃಹದ ಸಮೀಪ ಉಪತಿಸ್ಸ ಮತ್ತು ಕೋಲಿತ ಎಂಬ ಹಳ್ಳಿಗಳಿದ್ದವು. ಉಪತಿಸ್ಸ ಹಳ್ಳಿಯಲ್ಲಿ ರೂಪಸಾರಿ ಎಂಬ ಬ್ರಾಹ್ಮಣಿಗೆ ಮತ್ತು ಕೋಲಿತ ಹಳ್ಳಿಯಲ್ಲಿನ ಮೊಗ್ಗಲಿ ಎಂಬ ಬ್ರಾಹ್ಮಣಿಗೆ ಏಕಕಾಲದಲ್ಲಿ 10 ತಿಂಗಳ ಬಳಿಕ ಗಂಡು ಮಕ್ಕಳು ಹುಟ್ಟಿದವು. ರೂಪಸಾರಿ ಬ್ರಾಹ್ಮಣಿಯ ಮಗನಿಗೆ ಉಪತಿಸ್ಸನೆಂದು ಹಾಗೆಯೇ ಮೊಗ್ಗಲಿಯ ಮಗನಿಗೆ ಕೊಲಿತ ಎಂದು ಹೆಸರಿಟ್ಟರು. ಆ ಎರಡು ಕುಟುಂಬಗಳಿಗೆ ಏಳು ತಲೆಮಾರಿನಿಂದ ಮಿತ್ರತ್ವವಿತ್ತು. ಆದ್ದರಿಂದ ಸಹಜವಾಗಿಯೇ ಇವರೀರ್ವರಲ್ಲಿ ಗಾಢ ಸ್ನೇಹವಿತ್ತು. ಇಬ್ಬರೂ ಎಲ್ಲಾ ಕಲೆ ಮತ್ತು ಶಾಸ್ತ್ರಗಳಲ್ಲಿ ಪ್ರಾವಿಣ್ಯತೆ ಪಡೆದರು. ಬಾಲ್ಯದಿಂದಲೇ ನಾಯಕತ್ವ ಗುಣಗಳಿಂದ ಈರ್ವರೂ ಕೂಡಿದ್ದರು. ಬಾಲ್ಯದಲ್ಲೇ 500 ಜನ ಹಿಂಬಾಲಿಕರಿಂದ ಕೂಡಿದ್ದರು.
                ರಾಜಗೃಹದಲ್ಲಿ ಪರ್ವತದ ಮೇಲಿನ ಹಬ್ಬವನ್ನು ಆಚರಿಸಲಾಗುತ್ತಿತ್ತು. ಇಬ್ಬರಿಗೂ ಮೆತ್ತನೆಯ ಮಂಚವನ್ನು ಸಿದ್ಧಪಡಿಸಿದ್ದರು. ಹೀಗೆ ಅವರು ಹಬ್ಬದ ವಿನೋದಗಳನ್ನು ನೋಡುತ್ತಾ ಇದ್ದರು, ಆನಂದ ಅನುಭವಿಸುತ್ತಾ ಇದ್ದರು. ಆಗ ಹಬ್ಬಗಳು ಕೆಲವು ವಾರ ನಡೆಯುತ್ತಿತ್ತು. ಎರಡು ಅಥವಾ ಮೂರು ದಿನದ ನಂತರ ಅವರಿಗೆ ಆನಂದ ಸಿಗಲಿಲ್ಲ. ಇಡೀ ಹಬ್ಬವೆಲ್ಲಾ ಮಕ್ಕಳ ಆಟದಂತೆ ಗೋಚರಿಸಿತು. ಜೊತೆಗೆ ಪ್ರಾಪಂಚಿಕ ಸುಖವು ಅವರಿಗೆ ಕ್ಷಣಿಕವಾಗಿ, ದಡ್ಡತನದ ಸುಖದಂತೆ ಕಂಡುಬಂದಿತ್ತು. ಅವರ ಪ್ರಜ್ಞಾ ವಿಕಾಸವಾಗಿತ್ತು. ಅವರು ಕ್ಷಣಿಕವಾದ ಭೌತಿಕತೆಯಲ್ಲಿ ರಮಿಸಲು ಬಂದಿರಲಿಲ್ಲ. ನಾವು ಏಕೆ ಇದನ್ನು ನೋಡಬೇಕು? ನೂರು ವರ್ಷಗಳು ಕಳೆದನಂತರ ಈ ಎಲ್ಲಾ ಜನಗಳು ಕಣ್ಮರೆಯಾಗುತ್ತಾರೆ. ಇಂದ್ರೀಯ ಸುಖಗಳು ಎಂದಿಗೂ ತೃಪ್ತಿನೀಡಲಾರವು. ಆದ್ದರಿಂದ ನಾವು ವಿಮುಕ್ತಿಯ ಹಾದಿಯನ್ನು ಹುಡುಕಬೇಕು ಎಂದು ಚಚರ್ಿಸಿಕೊಂಡರು.
                ನಂತರ ಅವರು ಗುರುವಿಗಾಗಿ ಹುಡುಕಾಡಲಾರಂಭಿಸಿದರು. ಗುರು ಸಿಕ್ಕನಂತರ ಮತ್ತೊಬ್ಬರಿಗೆ ಅದನ್ನು ತಿಳಿಸುವುದೆಂದು ನಿರ್ಧರಿಸಿದರು. ಮೊದಲಿಗೆ ಸಂಜಯನೆಂಬ ಋಷಿಯ ಬಳಿ ದೀಕ್ಷೆ ತೆಗೆದುಕೊಂಡರು ಮತ್ತು ಗೃಹಸ್ಥತನದಿಂದ ಮುಕ್ತರಾದರು. ಕೆಲಕಾಲದಲ್ಲೇ ಗುರುವಿನ ಹಂತಕ್ಕೆ ಏರಿದರು. ಗುರುವಿನ ಬಳಿಗೆ ಬಂದು ಗುರುವೇ ನೀವು ಅರಿತದ್ದು ಇಷ್ಟೇಯೇ ಅಥವಾ ಇನ್ನೂ ಇದೆಯೇ? ಎಂದು ಕೇಳಿದರು. ಅದಕ್ಕೆ ಸಂಜಯರು ಅಷ್ಟೇ, ಈಗ ನಿಮಗೆ ಗೊತ್ತಿರುವಷ್ಟೇ ನನಗೂ ತಿಳಿಸಿದೆ ಎಂದು ಉತ್ತರಿಸಿದರು. ಅವರ ಪ್ರಾವಿಣ್ಯತೆ ಹೇಗಿತ್ತೆಂದರೆ ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ಯಾರಿಗೂ ಸಾಧ್ಯವಿರಲಿಲ್ಲ, ಆದರೆ ಇವರು ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೂ ಅವರಿಗೆ ನಿಜವಾದ ಜ್ಞಾನ ಸಿಕ್ಕಿದೆ ಎನಿಸಿರಲಿಲ್ಲ. ಆದ್ದರಿಂದ ಯೋಗ್ಯ ಗುರುವಿಗೆ ಹುಡುಕಾಡುತ್ತಿದ್ದರು.
                ಒಂದುದಿನ ಪಂಚವಗರ್ಿಯ ಭಿಕ್ಷುಗಳಲ್ಲಿ ಒಬ್ಬರಾದ ಅಸ್ಸಜಿಯನ್ನು ಉಪತಿಸ್ಸರವರು ಕಂಡರು ಮತ್ತು ಹೀಗೆಂದರು: ಶಾಂತ ಮತ್ತು ಸುಪ್ರಶಾಂತವಾಗಿದೆ ನಿಮ್ಮ ಎಲ್ಲಾ ಇಂದ್ರೀಯಗಳು. ಸ್ವಚ್ಛ, ಶುಭ್ರ ಮತ್ತು ಸ್ಪಷ್ಟವಾಗಿದೆ ನಿಮ್ಮ ಚರ್ಮದ ಕಾಂತಿ. ಏತಕ್ಕಾಗಿ ನೀವು ಜಗವ ತೊರೆದಿರಿ? ಮತ್ತು ನಿಮ್ಮ ಗುರುಗಳು ಯಾರು? ಮತ್ತು ಯಾವ ಸಿದ್ಧಾಂತವನ್ನು ನೀವು ಪಾಲಿಸುತ್ತಿರುವಿರಿ? ಎಂದು ಪ್ರಶ್ನಿಸಿದರು. ಅದಕ್ಕೆ ಅಸಜ್ಜಿಯವರು ಹೀಗೆ ಉತ್ತರಿಸಿದರು ಸೋದರ, ನಾನಿನ್ನು ಹೊಸಬ. ಭಿಕ್ಷುವಾಗಿ ಬಹಳ ದಿನ ಕಳೆದಿಲ್ಲ. ಈಗತಾನೇ ಬುದ್ಧರ ಧಮ್ಮ ಮತ್ತು ವಿನಯವನ್ನು ಆರಂಭಿಸಿದ್ದೇನೆ. ಆಗ ಉಪತಿಸ್ಸರವರು ಹೀಗೆ ಸಿಂಹನಾದ ಮಾಡಿದರು ನಾನು ಉಪತಿಸ್ಸ, ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಹೇಳಿರಿ, ಅದು ಸಂಕ್ಷಿಪ್ತವಾಗಿ ಇರಲಿ ಅಥವಾ ವಿವರವಾಗಿ ಇರಲಿ. ಅದರ ಅರ್ಥವನ್ನು ನಾನು ನೂರು ಹಾದಿಯಲ್ಲಿ ಅಥವಾ ಸಾವಿರ ವಿಧದಲ್ಲಿ ಅರ್ಥಮಾಡಿಕೊಳ್ಳುವೆ ಎಂದರು.
                ಆಗ ಅಸ್ಸಜಿಯು ಹೀಗೆ ಹೇಳಿದರು ಕಾರಣಗಳಿಂದ ಉಂಟಾಗುವ ಎಲ್ಲಾ ಆಗುಹೋಗುಗಳ ಕಾರಣವನ್ನು ತಥಾಗತರು ಹೇಳಿದ್ದಾರೆ ಮತ್ತು ಹಾಗೆಯೇ ಅವುಗಳ ನಿರೋಧವನ್ನು ಸಹಾ ಹೇಳಿದ್ದಾರೆ. ಇದೇ ಬುದ್ಧಭಗವಾನರ ಬೋಧನೆಯಾಗಿದೆ.
                ಆಗ ಮೊದಲ ಎರಡು ವಾಕ್ಯಗಳನ್ನು ಕೇಳಿದ ಕ್ಷಣವೇ ಉಪತಿಸ್ಸರಿಗೆ (ಸಾರಿಪುತ್ತರಿಗೆ) ಸೋತಪನ್ನ ಸ್ಥಿತಿಯು ಲಭಿಸಿತು. ನಂತರ ಸಾರಿಪುತ್ತರವರು ಬುದ್ಧಭಗವಾನರು ಎಲ್ಲಿ ವಿಹರಿಸುತ್ತಿದ್ದಾರೆಂದು ಕೇಳಿಕೊಂಡು (ಕೋಲಿತ) ಮೊಗ್ಗಲಾನರಲ್ಲಿ ಬಂದು ಅಸ್ಸಜಿಯವರು ಹೇಳಿದ ನಾಲ್ಕು ವಾಕ್ಯಗಳ ಗಾಥೆ ಹೇಳಿದರು. ಕೇಳಿದ ಕ್ಷಣವೇ ಮೊಗ್ಗಲಾನರವರು ಸಹಾ ಸೋತಪನ್ನರಾದರು. ಆಗ ಇಬ್ಬರೂ ಸಹ ಆನಂದಿತರಾದರು. ಅವರು ಈ ವಿಷಯವನ್ನು ತಮ್ಮ ಹಿಂದಿನ ಗುರುವಾದ ಸಂಜಯರಿಗೆ ಹೇಳಿದರು. ಆದರೆ ಸಂಜಯರಿಗೆ ಆ ಮಹಾಜ್ಞಾನದ ಆಳದ ಅರಿವು ಉಂಟಾಗಲಿಲ್ಲ. ಬದಲಾಗಿ ಅವರಿಗೆ ತಮ್ಮ ಹೆಚ್ಚು ಶಿಷ್ಯರನ್ನು ಒಳಗೊಂಡ ಸಮೂಹವನ್ನು ಬಿಟ್ಟು ಬುದ್ಧರ ಬಳಿಗೆ ಬಂದು ಶಿಷ್ಯವೃತ್ತಿ ಮಾಡಲು ಅಹಂಕಾರ ಅಡ್ಡಿಯಾಯಿತು. ಆದರೂ ಸಂಜಯರಿಗೆ ಬುದ್ಧರ ಸರ್ವಜ್ಞತೆಯ ಮೌಲ್ಯ ಅರಿವಾಯಿತು. ಆಗ ಅವರು ಪ್ರಶ್ನಿಸಿದರು. ಈ ಭೂಮಿಯಲ್ಲಿ ಜ್ಞಾನಿಗಳು ಹೆಚ್ಚಾಗಿರುವೋ ಅಥವಾ ಮೂರ್ಖರು ಹೆಚ್ಚಾಗಿರುವರೋ? ಆಗ ಸಾರಿಪುತ್ತರು ಮೂರ್ಖರು ಹೆಚ್ಚಾಗಿದ್ದಾರೆ ಎಂದು ಹೇಳಿದರು. ಹಾಗಾದರೆ ಜ್ಞಾನಿಗಳು ಬುದ್ಧರ ಬಳಿಗೆ ಹೋಗಲಿ ಮತ್ತು ದಡ್ಡರು ನನ್ನಲ್ಲಿಗೆ ಬರಲಿ ಎಂದು ಸಂಜಯರು ಹೇಳಿದರು.

                ನಂತರ ಸಾರಿಪುತ್ತ ಮತ್ತು ಮೊಗ್ಗಲಾನರು ಬುದ್ಧರ ಬಳಿಗೆ ಹೋದರು. ಆಗ ಅವರ ಜೊತೆಯಲ್ಲಿ ಸಂಜಯನ ಅರ್ಧದಷ್ಟು ಶಿಷ್ಯರು ಜೊತೆ ಸೇರಿದರು. ನಂತರ ಬುದ್ಧರ ಬಳಿಗೆ ಬಂದು ಸಂಘದಲ್ಲಿ ಸೇರಿದರು. ಅಂದಿನಿಂದ ಅವರ ಹೆಸರು ಸಾರಿಪುತ್ತ ಮತ್ತು ಮೊಗ್ಗಲಾನ ಎಂದೇ ಖಾತ್ರಿಯಾಯಿತು. ಮೊಗ್ಗಲಾನರವರು ಸಂಘ ಸೇರಿದ 7ನೇ ದಿನದಂದು ಅರಹಂತರಾದರು. ಸಾರಿಪುತ್ತರು 15ನೇ ದಿನಕ್ಕೆ ಅರಹಂತರಾದರು. ಬುದ್ಧ ಭಗವಾನರು ಸಹಾ ಇವರಿಗೆ ಅಗ್ರಶ್ರಾವಕರೆಂದು ಘೋಷಿಸಿದರು. ನಂತರ ಸಾರಿಪುತ್ತ ಮತ್ತು ಮೊಗ್ಗಲಾನರವರು ಸಂಜಯರು ಬುದ್ಧರ ಬಳಿಗೆ ಬರಲು ನಿರಾಕರಿಸಿದ್ದನ್ನು ತಿಳಿಸಿದರು. ಆಗ ಬುದ್ಧರು ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment