Sunday 26 April 2015

dhammapada/dandavagga/10.11/sukhasamanera

ಸುಚಾರಿತ್ರ್ಯರು ತಮ್ಮನ್ನು ದಮಿಸಿಕೊಳ್ಳುತ್ತಾರೆ
ನೀರಗಂಟಿಯು ನೀರಿಗೆ ಮಾರ್ಗದರ್ಶನ ನೀಡುತ್ತಾರೆ. ಬಿಲ್ಲುಗಾರರು ಬಾಣಗಳಿಗೆ ನೇರಾಕಾರವನ್ನು ನೀಡುತ್ತಾರೆ. ಬಡಗಿಗಳು ಮರದ ತುಂಡಿಗೆ ರೂಪ ನೀಡುತ್ತಾರೆ ಹಾಗು ಸುಚಾರಿತ್ರವುಳ್ಳವರು ತಮ್ಮನ್ನು ದಮಿಸಿಕೊಳ್ಳುತ್ತಾರೆ.          (145)
ಗಾಥ ಪ್ರಸಂಗ 10:11
ಸುಖ ಸಮಣೇರನ ಸಾಧನೆ

                ಸುಖನೆಂಬ ಏಳನೆಯ ವಯಸ್ಸಿನ ಬಾಲಕನು ಪರಮಪೂಜ್ಯ ಸಾರಿಪುತ್ರರಲ್ಲಿ ಸಾಮಣೇರ ದೀಕ್ಷೆ ತೆಗೆದುಕೊಂಡಿದ್ದನು. ಆತನು ಸಂಘಕ್ಕೆ ಸೇರಿದ ಎಂಟನೆಯ ದಿನದಂದು ಸಾರಿಪುತ್ರರೊಡನೆ ಆಹಾರ ಸೇವನೆಗೆ ಹೊರಟಿದ್ದನು. ಆಗ ದಾರಿಯಲ್ಲಿ ಕೆಲವು ರೈತರು ಗದ್ದೆಗಳಿಗೆ ನೀರನ್ನು ಹಾಯಿಸುತ್ತಿದ್ದರು. ಇನ್ನೂ ಮುಂದೆ ಹೊರಟಾಗ ಬಿಲ್ಲುಗಾರರು ಬಾಣಗಳನ್ನು ನೇರ ಮಾಡುತ್ತಿದ್ದರು. ಮತ್ತಷ್ಟು ಮುಂದೆ ಹೊರಟಾಗ ಅಲ್ಲಿ ಬಡಗಿಗಳು ಮರದ ತುಂಡಿಗೆ ಚಕ್ರ ಇತ್ಯಾದಿ ಆಕಾರಗಳನ್ನು ನೀಡುತ್ತಿದ್ದರು.
                ಆಗ ಆ ಬಾಲಕನು ಸಾರಿಪುತ್ರರಲ್ಲಿ ಈ ಪ್ರಶ್ನೆ ಕೇಳಿದನು: ಭಂತೆ, ಈ ಜಡವಸ್ತುಗಳಿಗೆ ಒಬ್ಬ ಇದ್ದಲ್ಲಿಗೆ ನಿದರ್ೆಶಿಸಬಹುದೇ ಅಥವಾ ತನ್ನಿಚ್ಛೆಯಂತೆ ನಿಮರ್ಿಸಬಹುದೇ?
                ಓ ಸುಖ, ಮಾನವ ಅತಿ ಪ್ರಜ್ಞಾವಂತ, ಆತನು ತನ್ನಿಚ್ಛೆಯಂತೆ ಈ ಜಡವಸ್ತುಗಳಿಗೆಲ್ಲಾ ರೂಪಿಸಬಲ್ಲ, ನಿಮರ್ಿಸಬಲ್ಲ.
                ಆಗ ಆ ಬಾಲಕನು ಹೀಗೆ ಯೋಚಿಸಿದನು: ಬಾಹ್ಯದ ಜಡ ವಸ್ತುಗಳಿಗೆ ತನ್ನಿಷ್ಟದಂತೆ ಆಕಾರ ನೀಡಬಹುದಾದರೆ, ಆಂತರ್ಯದ ಮನಸ್ಸನ್ನು ಏಕೆ ನನ್ನ ಇಷ್ಟದಂತೆ ರೂಪಿಸಬಾರದು? ದೊಂಬರಾಟದವರು ಶರೀರವನ್ನು ಪಳಗಿಸುವಂತೆ ಏತಕ್ಕಾಗಿ ನಾನು ನನ್ನ ಮನಸ್ಸನ್ನು ಪಳಗಿಸಬಾರದು? ನಾನು ನನ್ನ ಮನಸ್ಸನ್ನು ಈ ಕ್ಷಣದಿಂದಲೇ ಪ್ರಶಾಂತವಾಗಿ ನಿಮರ್ಿಸುವೆನು. ಅಷ್ಟೇ ಅಲ್ಲ, ಮನಸ್ಸಿನ ಎಲ್ಲ ಕ್ರಿಯೆಗಳನ್ನು ಗಮನಿಸಿ, ಜ್ಞಾನ ಗಳಿಸುವೆನು ಎಂದು ನಿರ್ಧರಿಸಿದನು.
                ಹೀಗಾಗಿ ಆ ಬಾಲಕನು ವಿಹಾರಕ್ಕೆ ಹಿಂತಿರುಗಲು ಅನುಮತಿ ಬೇಡಿದನು. ನಂತರ ಅಲ್ಲಿ ಸಾಧನೆ ಆರಂಭಿಸಿದನು.
                ಅದೇದಿನ ಮುಂಜಾನೆ ಬುದ್ಧ ಭಗವಾನರು ತಮ್ಮ ಗಂಧಕುಟೀರದಲ್ಲಿ ಇಂದು ಯಾರ್ಯಾರು ಜ್ಞಾನವನ್ನು ಗಳಿಸುವರು ಎಂದು ಅನ್ವೇಷಿಸಿದಾಗ ಅವರಿಗೆ ಸುಖ ಕಾಣಿಸುತ್ತಾನೆ. ಆಗ ಭಗವಾನರಿಗೆ ಇಂದು ಆತನು ಅರಹಂತನೇ ಆಗುವನು ಎಂದು ಖಚಿತವಾಯಿತು. ಆತನಿಗೆ ಸಹಾಯ ಮಾಡಲೆಂದು ಭಗವಾನರು ಆತನ ಕೋಣೆಯತ್ತ ಬಂದರು. ಏಕೆಂದರೆ ಆ ಸಮಯದಲ್ಲಿ ಸಾರಿಪುತ್ರರು ಆ ಬಾಲಕನಿಗೆ ಆಹಾರ ನೀಡಲೆಂದು ಬರುತ್ತಿದ್ದರು. ಆ ವೇಳೆಗಾಗಲೇ ಆ ಬಾಲಕನು ಮೂರು ಲೋಕೋತ್ತರ ಫಲಗಳನ್ನು ಪ್ರಾಪ್ತಿಮಾಡಿಯಾಗಿತ್ತು. ಇನ್ನು ಅರಹಂತ ಆಗುವುದು ಬಾಕಿಯಿತ್ತು. ಸಾರಿಪುತ್ರರು ಆಗ ಅಡ್ಡಿಪಡಿಸಿದರೆ ಮುಂದೆ ಅರಹಂತನಾಗಲು ಬಹಳ ಸಮಯ ಬೇಕಾಗುತ್ತಿತ್ತು. ಆದ್ದರಿಂದಾಗಿ ಭಗವಾನರು ಬಾಗಿಲಲ್ಲೇ ಸಾರಿಪುತ್ರನಿಗೆ ನಾಲ್ಕು ಪ್ರಶ್ನೆಗಳನ್ನು ಹಾಕಿದರು. ಆಗ ಪೂಜ್ಯ ಸಾರಿಪುತ್ರರು ನಾಲ್ಕು ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಆ ಬಾಲಕನು ಅರಹತ್ವವನ್ನು ಸಾಧಿಸಿಬಿಟ್ಟನು.
                ಈಗ ಭಗವಾನರು ಸಾರಿಪುತ್ರರಿಗೆ ಸಾರಿಪುತ್ರ, ಈಗ ಆ ಬಾಲಕನಿಗೆ ಆಹಾರ ನೀಡು ಎಂದರು. ಅದೇವೇಳೆ ಆ ಬಾಲಕನು ಹೊರಬಂದು ಪೂಜ್ಯರಿಗೆ ವಂದಿಸಿದನು.
                ಸಂಜೆ ವೇಳೆ ಭಿಕ್ಷುಗಳು ಚಚರ್ಿಸುವಾಗ ಭಗವಾನರು ಅಲ್ಲಿಗೆ ಬಂದರು. ಆಗ ಭಿಕ್ಷುಗಳು ಹೀಗೆ ಪ್ರಶ್ನಿಸಿದರು. ಭಗವಾನ್ ಇಂದು ಹಗಲು ಉದ್ದವಾಗಿತ್ತು, ಸಂಜೆ ಮಂದವಾಗಿದೆ. ಆದರೆ ಆ ಬಾಲಕ ಆಹಾರ ತಿಂದನಂತರ, ಸೂರ್ಯನು ಪರಾಕಾಷ್ಠೆಯನ್ನು ನಮ್ಮ ಕಣ್ಣೆದುರಿನಲ್ಲಿಯೇ ವೇಗವಾಗಿ ದಾಟಿದನು.
                ಆಗ ಭಗವಾನರು ಇಂತೆಂದರು: ಭಿಕ್ಷುಗಳೇ, ಪುಣ್ಯಶಾಲಿಗಳು ಧ್ಯಾನದಲ್ಲಿ ನಿರತರಾಗಿರುವಾಗ ಇಂಥಹದು ಅದ್ಭುತ ಸದಾ ಸಂಭವಿಸುತ್ತದೆ. ಇಂದು ಸುಖ ಸಾಮಣೇರನು ರೈತರು ನೀರು ಹಾಯುವಿಕೆ, ಬಿಲ್ಲುಗಾರರು ಬಾಣವನ್ನು ನೇರವಾಗಿಸುವಿಕೆ ಮತ್ತು ಬಡಗಿಗಳು ಮರದಿಂದ ಆಕಾರ ರೂಪಿಸುವಂತೆ ಕಂಡು ಆತನು ತನ್ನನ್ನು ದಮಿಸಿಕೊಂಡು ಅರಹಂತನೇ ಆಗಿದ್ದಾನೆ ಎಂದು ಪ್ರಶಂಸಿಸಿ ಈ ಮೇಲಿನ ಗಾಥೆಯನ್ನು ನುಡಿದರು.



dhammapada/dandavagga/10.10/pilotikatissa

ಪಾಪಲಜ್ಜೆಯಿಂದ ಪಾಪವನ್ನು ತಡೆಗಟ್ಟಿ
ಲೋಕದಲ್ಲಿ ಪಾಪಲಜ್ಜೆಯಿಂದ ಕೂಡಿದಂತಹ ವಿನಯಸಂಪನ್ನನು ಅತಿವಿರಳ. ಅಂತಹವ ಉತ್ತಮ ಜಾತಿಯ ಕುದುರೆಯು ಚಾಟಿ ಏಟಿಗೆ ಅವಕಾಶ ನೀಡದೆ ಹೇಗೆ ಜೀವಿಸುವುದೋ ಹಾಗೇ ಪಾಪಲಜ್ಜೆಯಿಂದ ಕೂಡಿ ನಿಯಂತ್ರಿತನಾಗಿರುತ್ತಾನೆ ಹಾಗೂ ಆತನು ನಿಂದೆಗೆ ಅತೀತವಾಗಿರುತ್ತಾನೆ.    (143)
ಅಶ್ವವು ಹೇಗೆ ಚಾಟಿ ಸೋಕಿದ ಕೂಡಲೇ ಜಾಗೃತವಾಗುವುದೋ ಹಾಗೆಯೇ ನೀವು ಸಹಾ ಶ್ರದ್ಧೆಯಿಂದ, ಶೀಲದಿಂದ, ವೀರ್ಯದಿಂದ (ಪ್ರಯತ್ನ), ಸಮಾಧಿಯಿಂದ, ಧಮ್ಮ ಪರೀಕ್ಷೆಯಿಂದ, ವಿದ್ಯೆ ಮತ್ತು ಆಚರಣೆ ಸಂಪನ್ನತೆಯಿಂದ ಸದಾ ಸ್ಮೃತಿಯಿಂದ ಕೂಡಿ ಈ ಮಹಾ ದುಃಖದಿಂದ ಪಾರಾಗಿ. (144)
ಗಾಥ ಪ್ರಸಂಗ 10:10
ಭಿಕ್ಷುಕನಿಗೂ ಭಿಕ್ಷುವಿಗೂ ಇರುವ ಅಂತರ

                ಒಂದುದಿನ ಪರಮಪೂಜ್ಯ ಆನಂದರವರು ಶ್ರಾವಸ್ತಿಯಲ್ಲಿ ನಡೆಯುತ್ತಿರುವಾಗ ಭಿಕ್ಷೆ ಬೇಡುತ್ತಿದ್ದ ಯುವ ಭಿಕ್ಷುಕನನ್ನು ನೋಡಿದರು. ಅವರಿಗೆ ಕನಿಕರ ಉಂಟಾಗಿ ಭಿಕ್ಷು ಜೀವನದ ಉತ್ಕೃಷ್ಟತೆ ತಿಳಿಸಿದರು. ಆಗ ಆತನು ಸಮಣೇರನಾಗಲು ನಿರ್ಧರಿಸಿದನು. ಆಗ ಆ ಯುವಕನು ತನ್ನ ಹರಿದ ವಸ್ತ್ರಗಳನ್ನು ಮರವೊಂದಕ್ಕೆ ನೇತುಹಾಕಿ, ಭಿಕ್ಷಾ ತಟ್ಟೆಯನ್ನು ಮರದ ಟಿಸಿಲಿಗೆ ಸಿಕ್ಕಿಸಿ ನಂತರ ಸಮಣೇರನಾದನು. ಆತನಿಗೆ ಎಲ್ಲರೂ ಪಿಲೋತಿಕತಿಸ್ಸ ಎಂದು ಕರೆಯಲಾರಂಭಿಸಿದರು. ಭಿಕ್ಖುವಾದ ಮೇಲೆ ಆತನಿಗೆ ಆಹಾರ ಮತ್ತು ವಸ್ತ್ರಕ್ಕೆ ತೊಂದರೆಯಾಗಲಿಲ್ಲ. ಅವೆಲ್ಲಾ ಆತನಿಗೆ ಹೇರಳವಾಗಿ ಸಿಗುತ್ತಿತ್ತು. ಆದರೂ ಕೆಲವೊಮ್ಮೆ ಆತನಿಗೆ ಭಿಕ್ಷು ಜೀವನದಲ್ಲಿ ಬೇಸರ ಮೂಡುತ್ತಿತ್ತು. ಆಗ ಆತನು ಗೃಹಸ್ಥನಾಗಲು ಯೋಚಿಸುತ್ತಿದ್ದನು, ದ್ವಂದ್ವಕ್ಕೆ ಸಿಲುಕುತ್ತಿದ್ದನು. ಆಗ ಆತನು ತನ್ನ ಚಿಂದಿಬಟ್ಟೆ ಮತ್ತು ಪಾತ್ರೆ ಸಿಕ್ಕಿಸಿದ್ದಂತಹ ಮರದ ಬಳಿಗೆ ಬರುತ್ತಿದ್ದನು. ಹಾಗು ಆ ಮರದ ಬುಡದಲ್ಲಿ ಆತನು ತನ್ನಲ್ಲೇ ಹೀಗೆ ಪ್ರಶ್ನಿಸಿಕೊಳ್ಳುತ್ತಿದ್ದನು: ಓಹ್, ನೀನು ಎಂತಹ ನಾಚಿಕೆಗೆಟ್ಟವನು! ಎಲ್ಲ ನಿನಗೆ ತಿನ್ನಲು ಯಥೇಚ್ಛವಾಗಿ ದೊರೆತರೂ ಹಾಗು ಉತ್ತಮ ವಸ್ತ್ರಗಳು ದೊರೆತರೂ ಇಂತಹ ಉದಾತ್ತ ಜೀವನವನ್ನು ತೊರೆಯಲು ಬಯಸುವೆಯಾ? ನೀನು ಮತ್ತೆ ಬಯಕೆಗಳಿಂದ ಕೂಡಿ, ದರಿದ್ರ ಮನಸ್ಕನಾಗಿ ಭಿಕ್ಷೆ ಬೇಡುತ್ತ, ಅಸಂತೃಪ್ತಿಯುತವಾದ ಮನದಿಂದ ಕೂಡಿದವನಾಗಿ ಕೈಯಲ್ಲಿ ಭಿಕ್ಷೆಯ ತಟ್ಟೆಯನ್ನು ಹಿಡಿದು, ಚಿಂದಿ ವಸ್ತ್ರಗಳನ್ನು ಧರಿಸುವವನಾಗವುವೆಯಾ?! ಹೀಗೆ ಅತನು ತನ್ನಲ್ಲೇ ತನ್ನನ್ನು ಖಂಡಿಸುತ್ತ, ನಿಯಂತ್ರಿಸುತ್ತ, ಚಿತ್ತವನ್ನು ಶಾಂತಿಗೊಳಿಸುತ್ತ ವಿಹಾರಕ್ಕೆ ಮರಳುತ್ತಿದ್ದನು.
                ನಂತರ ಮೂರು ಅಥವಾ ನಾಲ್ಕು ದಿನಗಳ ನಂತರ ಪುನಃ ಗೃಹಸ್ಥನಾಗಲು ಬಯಸಿ, ಆ ಮರದೆಡೆಗೆ ಹೋಗಿ, ಪುನಃ ಗೃಹಸ್ಥನಾಗಲು ಬಯಸಿ, ಪುನಃ ಲಜ್ಜೆಪಡುತ್ತ, ಭಿಕ್ಷು ಜೀವನವನ್ನೇ ಆಯ್ಕೆ ಮಾಡುತ್ತ, ಪುನಃ ವಿಹಾರಕ್ಕೆ ಹಿಂತಿರುಗುತ್ತಿದ್ದನು. ಇದೇರೀತಿಯ ಪ್ರಕ್ರಿಯೆ ಹಲವುಬಾರಿ ನಡೆಯಿತು. ಕೆಲ ಭಿಕ್ಷುಗಳು ಆತನನ್ನು ಕುರಿತು ಏತಕ್ಕಾಗಿ ನೀನು ಆ ಚಿಂದಿಬಟ್ಟೆಯುಳ್ಳ ಮರದ ಬಳಿಗೆ ಹೋಗುವೆ? ಎಂದು ಪ್ರಶ್ನಿಸಿದಾಗ, ಆತನು ಹೀಗೆ ಉತ್ತರಿಸುತ್ತಿದ್ದನು: ನಾನು ನನ್ನ ಗುರುವಿನ ಬಳಿಗೆ ಹೋಗಿದ್ದೆನು.
                ಒಂದುದಿನ ಆತನು ತನ್ನ ಹಳೆಯ ವಸ್ತ್ರಗಳನ್ನೇ ಧ್ಯಾನದ ವಸ್ತುವಾಗಿಟ್ಟು ಧ್ಯಾನಿಸಲು ಆರಂಭಿಸಿದನು. ನಂತರ ಹಾಗೆಯೇ ಪಂಚಖಂದಗಳ ಸ್ವರೂಪ ಕಂಡನು. ಆತನಿಗೆ ಸ್ಪಷ್ಟವಾಗಿ ದೇಹ ಮತ್ತು ಮನಸ್ಸಿನ ರಾಶಿಯು ಅನಿತ್ಯತೆಯ ದುಃಖದ ಮತ್ತು ಅನಾತ್ಮತೆಯ ಬೆಳಕಿನಲ್ಲಿ ಸ್ಪಷ್ಟವಾಗಿ ಅರಿವಾಗಿ ಆತನು ಅರಹಂತನೇ ಆಗಿಬಿಟ್ಟನು. ಅರಹಂತನಾದ ಮೇಲೆ ಆತನ ಮನಸ್ಸು ಚಂಚಲವಾಗಲಿಲ್ಲ. ಆದ್ದರಿಂದ ಆತನು ಆ ಮರದ ಬಳಿಗೆ ಹೋಗಲಿಲ್ಲ. ಆಗ ಭಿಕ್ಷುಗಳು ಆತನಿಗೆ ಏತಕ್ಕಾಗಿ ಮರದ ಬಳಿಗೆ ಗುರುವಿನ ಹತ್ತಿರ ಹೋಗುತ್ತಿಲ್ಲ ಎಂದು ವಿಚಾರಿಸಿದಾಗ, ಆತನು ಯಾವಾಗ ನನಗೆ ಅವಶ್ಯಕತೆಯಿತ್ತೋ ಆಗ ಹೋಗಲೇಬೇಕಿತ್ತು, ಆದರೆ ಈಗ ಅಲ್ಲಿಗೆ ಹೋಗುವ ಅವಶ್ಯಕತೆಯೇ ಇಲ್ಲ ಎಂದು ದೃಢವಾಗಿ ಹೇಳಿಬಿಟ್ಟನು. ಆಗ ಅವರಿಗೆ ಈತನು ಸುಳ್ಳು ನುಡಿಯುತ್ತಿರಬಹುದೆಂದು ಭಾವಿಸಿ ಆತನನ್ನು ಬುದ್ಧರ ಬಳಿಗೆ ಕರೆತಂದರು. ಹಾಗು ಹೀಗೆ ನುಡಿದರು ಭಗವಾನ್! ಈ ಭಿಕ್ಷುವು ತಾನು ಅರಹತ್ವ ಸಾಧಿಸಿರುವುದಾಗಿ ಸುಳ್ಳು ನುಡಿಯುತ್ತಿರುವನು.

                ಆಗ ಭಗವಾನರು ಹೀಗೆ ನುಡಿದರು: ಭಿಕ್ಖುಗಳೇ ಪಿಲೊತಿಕತಿಸ್ಸನು ಸುಳ್ಳು ನುಡಿಯುತ್ತಿಲ್ಲ. ಆತನು ಸತ್ಯವನ್ನೇ ನುಡಿಯುತ್ತಿದ್ದಾನೆ. ಆತನು ಅರಹಂತನಾಗದಿದ್ದಾಗ ಆತನಿಗೆ ಗುರುವಿನ ಅವಶ್ಯಕತೆ ಬೇಕಾಗಿತ್ತು, ಅರಹಂತನಾದಮೇಲೆ ಗುರುವಿನ ಅವಶ್ಯಕತೆ ಬೇಕಿಲ್ಲ. ಇಲ್ಲಿ ಆತನ ಗುರು ಯಾರೆಂದರೆ ಸ್ವತಃ ಆತನೇ ಆಗಿದ್ದನು. ಆತನು ವಿಶ್ಲೇಷಿಸುತ್ತ, ಅರಿಯುತ್ತಾ, ಶುದ್ಧನಾಗಿದ್ದಾನೆ. ಸತ್ಯವನ್ನು ಅರಿತು ಅರಹಂತನಾಗಿದ್ದಾನೆ, ಆತನಿಗೆ ಈಗ ಗುರು ಬೇಕಿಲ್ಲ ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. 

dhammapada/dandavagga/10.9/santati

ಬಾಹ್ಯಸ್ವರೂಪದಿಂದಲೇ ಒಬ್ಬನು ಪವಿತ್ರನಾಗಲಾರ
ಅಲಂಕೃತನಾಗಿದ್ದೂ ಆತನು ಪರಮಶಾಂತಿಯಿಂದ ಜೀವಿಸಿದಾಗ, ಅಂತಹ ಶಾಂತನು ದಮಿಸಲ್ಪಟ್ಟವನು, ಮಾರ್ಗಗಳಲ್ಲಿ ಬ್ರಹ್ಮಚಾರಿಯು, ಸರ್ವಜೀವಿಗಳ ಹಿತಕ್ಕಾಗಿ ದಂಡಶಾಸ್ತ್ರಗಳನ್ನು ಪಕ್ಕಕ್ಕೆ ಇಟ್ಟವನು, ಅಂತಹವನು ನಿಜಕ್ಕೂ ಬ್ರಾಹ್ಮಣ, ಸಮಣ ಮತ್ತು ಭಿಕ್ಷುವೂ ಹೌದು.  (142)
ಗಾಥ ಪ್ರಸಂಗ 10:9
ಗೃಹಸ್ಥರು ನಿಬ್ಬಾಣವನ್ನು ಪಡೆಯಬಹುದು

                                ಭಗವಾನರು ಇದ್ದಾಗ ಬಹಳಷ್ಟು ಗೃಹಸ್ಥರು ನಿಬ್ಬಾಣವನ್ನು ಪಡೆದಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಈ ಕಥೆ.
                ಪಸೇನೆದಿ ರಾಜನ ಬಳಿ ಸಂತತಿ ಎಂಬ ಮಂತ್ರಿಯಿದ್ದನು. ಆತನು ರಾಜ್ಯದಲ್ಲಿ ಎದ್ದಿದ್ದ ದಂಗೆಯನ್ನು ಅಡಗಿಸಿದನು. ರಾಜ್ಯದಲ್ಲಿ ಶಾಂತಿಯನ್ನು ನೆಲೆಸಲು ಸಹಾಯಕ ನಾದನು. ರಾಜನು ಇದರಿಂದ ಸಂತುಷ್ಟನಾಗಿ ಆತನಿಗೆ ಮೌಲ್ಯಯುತ ಬಹುಮಾನಗಳಿಂದ ಸತ್ಕರಿಸಿದನು. ಜೊತೆಗೆ ಆತನಿಗೆ ನರ್ತಕಿಯೊಬ್ಬಳನ್ನು ನೀಡಿ ಕಳುಹಿಸಿದನು. ಆತನು ಪಾನಮತ್ತನಾಗಿ ಆನಂದದಿಂದ ಕೂಡಿದ್ದನು. ನಂತರ ನದಿಯಲ್ಲಿ ಸ್ನಾನ ಮಾಡಲು ಹೊರಟನು. ದಾರಿಯಲ್ಲಿ ಬುದ್ಧರನ್ನು ಕಂಡು ಬಾಗಿ ವಂದಿಸಿದನು. ಆಗ ಬುದ್ಧಭಗವಾನರು ಆನಂದನೊಂದಿಗೆ ಮುಗುಳ್ನಗೆ ಬೀರಿ ಹೀಗೆಂದರು ಆನಂದ ಈತನು ಇಂದೇ ನನ್ನನ್ನು ಭೇಟಿಯಾಗಿ, ಧಮ್ಮವನ್ನು ಆಲಿಸಿ, ಅರಹಂತನಾಗಿ ಹಾಗೆಯೇ ಪರಿನಿಬ್ಬಾಣ ಗಳಿಸುವನು.
                ಸಂತತಿ ಮತ್ತು ಇನ್ನಿತರರು ಹಗಲೆಲ್ಲಾ ಸಂತೋಷದಿಂದ ಕಾಲಕಳೆದರು. ಸಂಜೆ ನರ್ತಕಿಯು ನಾಟ್ಯವಾಡುತ್ತ ಬಳಲಿಕೆ ಮತ್ತು ಹೃದಯಾಘಾತದಿಂದ ಹಾಗೆ ಕುಸಿದಳು. ನಂತರ ಸತ್ತಳು, ಮಂತ್ರಿ ಸಂತತಿಗೆ ದುಃಖವು ತಡೆಯಲಾರದೆ ಬುದ್ಧರ ನೆನಪು ಬಂದು ಅವರಲ್ಲಿಗೆ ಬಂದನು. ಆಗ ಬುದ್ಧರು ಆತನಿಗೆ ಸಮಾಧಾನಿಸಿದರು ಓ ಮಗು, ನೀನು ಸರಿಯಾದ ಸ್ಥಳದಲ್ಲೇ ಬಂದಿದ್ದಿಯೇ ಒಬ್ಬನು ಜನ್ಮ ಪುನರ್ಜನ್ಮಗಳಲ್ಲಿ ಸಾವಿನಿಂದ ಶೋಕಿಸುವ ಕಣ್ಣೀರು ಅಳೆಯಲಾಗುವುದಿಲ್ಲ. ಅದು ಸಪ್ತ ಸಮುದ್ರವನ್ನು ಮೀರಿಸುತ್ತದೆ ಎಂದು ಹೇಳಿ ನಂತರ ಈ ಬೋಧನೆ ನೀಡುತ್ತಾರೆ.
                ಈ ಹಿಂದೆ ನೀನು ಬಯಕೆಗಳಲ್ಲಿ ಅಂಟಿದ್ದೀಯೆ, ಅವುಗಳಿಂದ ಹೊರಬಾ, ಭವಿಷ್ಯದಲ್ಲಿಯೂ ಸಹಾ ಆ ಅಂಟುವಿಕೆಯು ನಿನ್ನನ್ನು ಗುಲಾಮನನ್ನಾಗಿ ಮಾಡದಿರಲಿ, ವರ್ತಮಾನದಲ್ಲಿಯೂ ನಿನ್ನಲ್ಲಿ ಯಾವುದೇ ಅಂಟುವಿಕೆ ಸುಳಿದಾಡದಿರಲಿ (ಇಲ್ಲದಿರಲಿ), ಬಯಕೆ ಮತ್ತು ಭಾವೋದ್ರೇಕಗಳಿಂದ ಬುಡಸಮೇತ ಮುಕ್ತನಾಗು ಮತ್ತು ನೀನು ಆಗ ನಿಬ್ಬಾಣವನ್ನು ಅರ್ಥಮಾಡಿಕೊಳ್ಳುವೆ. ಈ ಧಮ್ಮದ ಆಲಿಸುವಿಕೆಯಿಂದ ಅರಹಂತನಾದನು. ಹಾಗೆಯೇ ತನ್ನ ಆಯು ವೀಕ್ಷಿಸಿ ಭಗವಾನರಿಂದ ಅಪ್ಪಣೆ ಪಡೆದು ಪರಿನಿಬ್ಬಾಣ ಪ್ರಾಪ್ತಿಮಾಡಿದನು.

                ಅರಹಂತನಾದ್ದರಿಂದಾಗಿ ಆತನಿಗೂ ಸ್ಥೂಪ ಕಟ್ಟಿಸಲಾಯಿತು. ಭಿಕ್ಷುಗಳಿಗೆ ಆತನು ಮಂತ್ರಿಯಾಗಿದ್ದು, ಮಂತ್ರಿವೇಶದಲ್ಲಿ ಅಲಂಕೃತನಾಗಿದ್ದ. ಹೇಗೆ ಅರಹಂತನಾದನು ಎಂಬ ಸಂಶಯ ಬಂದಾಗ ಭಗವಾನರು ಈ ಗಾಥೆ ನುಡಿದರು.

Saturday 25 April 2015

dhammapada/dandavagga/10.8/bahubhaandika

ದೇಹದಂಡನೆಯಿಂದ ಮುಕ್ತನಾಗಲಾರ
ನಗ್ನವಾಗಿ ಓಡಾಡುವುದರಿಂದಾಗಲಿ, ಜಟೆ ಬಿಡುವುದರಿಂದಾಗಲಿ, ಕೊಳಕಾಗಿರುವುದರಿಂದಾಗಲಿ, ಉಪವಾಸ ಮಾಡುವುದರಿಂದಾಗಲಿ, ಬರಿನೆಲದ ಮೇಲೆ ಮಲಗುವುದರಿಂದಾಗಲಿ, ಹಿಮ್ಮಡಿ ಮೇಲೆ ಕುಳಿತು ದೇಹದಂಡಿಸುವುದರಿಂದಾಗಲಿ, ಧೂಳು ಮತ್ತು ಭಸ್ಮಗಳನ್ನು ಬಳಿದುಕೊಳ್ಳುವುದರಿಂದಾಗಲಿ, ಸಂಶಯದಿಂದ ಮುಕ್ತನಾಗಲಾರ, ಆ ಮರ್ತನು ಶುದ್ಧನಾಗಲಾರ.         (141)
ಗಾಥ ಪ್ರಸಂಗ 10:8
ಬಹೂಭಾಂಡಿಕನ ಕಥೆ

                ಶ್ರಾವಸ್ತಿಯಲ್ಲಿ ಶ್ರೀಮಂತನೊಬ್ಬನಿದ್ದನು. ಆತನ ಪ್ರಿಯ ಪತ್ನಿಯು ತೀರಿಹೋದಾಗ ಉಂಟಾದ ಸ್ಮಶಾನ ವೈರಾಗ್ಯದಿಂದಾಗಿ ಆತನು ಭಿಕ್ಷುವಾಗಲು ನಿರ್ಧರಿಸಿದನು. ಆದರೆ ಸಂಘಕ್ಕೆ ಪ್ರವೇಶಿಸುವ ಬಹುದಿನಗಳ ಮುಂಚೆಯೇ, ಆತನು ವಿಹಾರವೊಂದನ್ನು ಕಟ್ಟಿಸಿದನು. ಅದರಲ್ಲಿ ಅಡುಗೆಮನೆ, ಉಗ್ರಾಣ ಎಲ್ಲವನ್ನೂ ನಿಮರ್ಿಸಿದನು. ಆತನು ಅಲ್ಲಿ ಪೀಠೋಪಕರಣಗಳು, ಅಡುಗೆ ಪಾತ್ರೆಗಳು ಹೇರಳವಾಗಿ ಅಕ್ಕಿ, ತೈಲ, ಬೆಣ್ಣೆ, ಇತ್ಯಾದಿಗಳನ್ನು ಸಂಗ್ರಹಿಸಿದನು. ಆತನಿಗೆ ಬೇಕಾದ ತಿಂಡಿಗಳನ್ನು ತನ್ನ ಅಡುಗೆಯ ದಾಸರಿಂದ ಮಾಡಿಸಿ ತಿನ್ನುತ್ತಿದ್ದನು. ಹೀಗೆ ಆತನು ಭಿಕ್ಷುವಾದರೂ ಸುಖ ಸೌಕರ್ಯದಿಂದ ಜೀವಿಸುತ್ತಿದ್ದನು. ಏಕೆಂದರೆ ಆತನಲ್ಲಿ ಹಲವಾರು ಸಾಮಗ್ರಿಗಳಿದ್ದವು. ಆದ್ದರಿಂದಾಗಿ ಆತನಿಗೆ ಎಲ್ಲರೂ ಬಹೂಭಾಂಡಿಕ ಎಂದು ಕರೆಯತೊಡಗಿದರು. ಹೀಗಾಗಿ ಭಿಕ್ಷುಗಳು ಶ್ರೀಮಂತ ಜೀವನ ನಡೆಸುವ ಆತನನ್ನು ಬುದ್ಧರ ಬಳಿಗೆ ಕರೆದುಕೊಂಡು ಬಂದರು. ನಂತರ ದೂರು ನೀಡಿದರು. ಆಗ ಭಗವಾನರು ಓ ಮಗುವೇ, ನಾನು ಸರಳ ಜೀವನದ ಬಗ್ಗೆ ಬೋಧಿಸಿರಲಿಲ್ಲವೇ? ಏತಕ್ಕಾಗಿ ಇಷ್ಟೆಲ್ಲಾ ಆಸ್ತಿ ಜೊತೆಗೆ ತುಂಬಿರುವೆ?
                ಅಷ್ಟು ಕೇಳಿದ ಕೂಡಲೇ ಕ್ರುದ್ಧನಾದ ಆ ಭಿಕ್ಷುವು ಮೇಲಂಗಿಯನ್ನು ಸಹಾ ಎಸೆದು ನಿಮ್ಮಿಷ್ಟದಂತೆ ಹೀಗಿರಲೇ ಎಂದನು.
                ಆಗ ಭಗವಾನರು ಆತನಿಗೆ ಹೀಗೆ ನುಡಿದರು: ಓ ನನ್ನ ಪುತ್ರನೇ, ಈ ಜನ್ಮಕ್ಕಿಂತ ಹಿಂದಿನ ಜನ್ಮದಲ್ಲಿ ನೀನು ಪ್ರೇತವಾಗಿದ್ದೆ. ನೀನು ಪ್ರೇತವಾಗಿರಲು ನಿನ್ನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿ ಇತ್ತು. ಆದರೆ ಈಗ ನೀನು ನನ್ನ ಶಾಸನದಲ್ಲಿದ್ದೂ ಸಹಾ ಏತಕ್ಕಾಗಿ ಪಾಪಲಜ್ಜೆ ಮತ್ತು ಪಾಪಭೀತಿಯನ್ನು ವಸ್ತ್ರದ ಜೊತೆಗೆ ಎಸೆಯುತ್ತಿರುವೆ?

                ತಕ್ಷಣ ಆ ಭಿಕ್ಷುವಿಗೆ ತನ್ನ ತಪ್ಪು ಅರಿವಾಯಿತು. ಆತನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿಯು ಪುನಃ ಸ್ಥಾಪಿತವಾದವು. ಆಗ ಆತನು ಭಗವಾನರನ್ನು ಗೌರವದಿಂದ ಪೂಜಿಸಿ, ಕ್ಷಮೆಯಾಚಿಸಿದನು. ಆಗ ಭಗವಾನರು ಉತ್ತರಿಯವಿಲ್ಲದೆ (ಮೇಲಿನ ಚೀವರ) ನಿಲ್ಲುವುದರಿಂದಾಗಲಿ, ನಗ್ನವಾಗುವುದರಿಂದಾಗಲಿ, ಭಸ್ಮ ಬಳಿತದಿಂದಾಗಿ, ಜಟೆಯಿಂದ ಕೂಡಿರುವುದರಿಂದಾಗಲಿ, ನೆಲದ ಮೇಲೆ ಮಲಗುತ್ತಾ ಮತ್ತು ಆಸನಗಳನ್ನು ಹಾಕುತ್ತ ದೇಹ ದಂಡಿಸುವುದರಿಂದಾಗಲಿ ನೀನು ಪರಿಶುದ್ಧನಾಗಲಾರೆ. ಸಂಶಯಗಳೆಲ್ಲದರಿಂದ ವಿಮುಕ್ತನಾದಾಗಲೇ ನೀನು ಮಾರ್ಗದಲ್ಲಿ ಪ್ರವೇಶಿಸುತ್ತೀಯೆ ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು. ಆಗ ಬಹೂಭಾಂಡಿಕನು ಸೋತಪನ್ನನಾದನು.

dhammapada/dandavagga/10.7/moggalana

ನಿರಪರಾಧಿ ಮುಗ್ಧರಿಗೆ ಹಿಂಸಿಸುವವನು ಘೋರ ದುಃಖಕ್ಕೆ ಗುರಿಯಾಗುತ್ತಾನೆ
ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ.   (137)
ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ
ಹುಟ್ಟುತ್ತಾನೆ.         (138, 139, 140)
ಗಾಥ ಪ್ರಸಂಗ 10:7
ಪರಮಪೂಜ್ಯ ಮೊಗ್ಗಲ್ಲಾನರವರ ದುರಂತ




                ಕೋಲಿತ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ಸ್ತ್ರೀಯಾದ ಮೊಗ್ಗಲಿ ಎಂಬಾಕೆಯು ಪುತ್ರನಿಗೆ ಜನ್ಮವಿತ್ತಳು. ಆ ಮಗುವೇ ಮೊಗ್ಗಲಿಪುತ್ರ ಅಥವಾ ಮೊಗ್ಗಲಿಪುತ್ತ. ಆತನಿಗೆ ಇರುವ ಇನ್ನೊಂದು ಹೆಸರು ಕೋಲಿತ, ಅಂದರೆ ತನ್ನ ಹಳ್ಳಿಯ ಹೆಸರೇ ಆಗಿತ್ತು.
                ಈತನಿಗೆ ಇದ್ದ ಏಕೈಕ ಪ್ರಾಣ ಸ್ನೇಹಿತನೇ ಸಾರಿಪುತ್ತ ಅಥವಾ ಉಪತಿಸ್ಸ. ಒಂದುದಿನ ಅವರಿಬ್ಬರು ಬೆಟ್ಟದ ಮೇಲಿನ ಹಬ್ಬಕ್ಕೆ ಹೊರಟರು. ಅಲ್ಲಿ ಗಾನ, ಸಂಗೀತ, ನೃತ್ಯ, ನಾಟಕ ಇತ್ಯಾದಿಗಳಿಂದ ಕೂಡಿದ್ದ ಸುಖ ಭೋಗಗಳು ಹೇರಳವಾಗಿದ್ದವು. ಆದರೆ ಅವರಿಗೆ ಅತಿಯಾದ ಸುಖ ಸಹಿಸಲಾರದೆ, ಇಂದ್ರಿಯ ಸುಖದ ಆಚೆಯ ಸುಖಗಳಾದ ಸಮಾಧಿ ಮತ್ತು ವಿಮುಕ್ತಿಯನ್ನು ಅರಸಲು ಅವರು ಹೊರಟರು. (ಅದೇ ಸಮಯದಲ್ಲಿ ಸಿದ್ಧಾರ್ಥ ಬೋಧಿಸತ್ವರು ಯಸೋಧರೆಯನ್ನು ವಿವಾಹವಾಗಿದ್ದರು).
                ಇವರೀರ್ವರ ತ್ಯಾಗ ಕೇಳಿ ಕೆಲವು ಸ್ನೇಹಿತರು ಸಹಾ ಗೃಹತ್ಯಾಗ ಮಾಡಿ ಇವರೊಂದಿಗೆ ಕೂಡಿಕೊಂಡರು. ಆಗ ಆ ಸಮಯದಲ್ಲಿ ಜ್ಞಾನಿಯು ಹಾಗು ವಾಗ್ಮಿಯು ಆಗಿದ್ದಂತಹ ಸಂಜಯ ಸನ್ಯಾಸಿಯ ಬಳಿ ಶಿಷ್ಯರಾದರು. ಆದರೂ ಅವರಿಗೆ ಏನೋ ಕೊರತೆ ಕಾಡತೊಡಗಿತು. ಯೋಗ್ಯ ಗುರುವು ಸಿಗದ ಕಾರಣ, ಸಂಜಯನಲ್ಲಿಯೇ ಶಿಷ್ಯರಾಗಿದ್ದರು.
                ಕೆಲವು ವರ್ಷಗಳ ನಂತರ ಬೋಧಿಸತ್ತರು ಗೃಹತ್ಯಾಗ ಮಾಡಿ ನಂತರ ಬುದ್ಧರಾದ ಮೇಲೆ ಅವರ ಪಂಚವಗರ್ಿಯ ಶಿಷ್ಯರಲ್ಲಿ ಒಬ್ಬರಾದ ಅಸ್ಸಜಿಯನ್ನು ಸಾರಿಪುತ್ತರು ಕಂಡರು. ಅಸ್ಸಜಿಯಲ್ಲಿನ ಇಂದ್ರಿಯಗಳ ನಿವರ್ಿಕಾರತೆ, ಶಾಂತತೆ, ಏಕಾಗ್ರತೆ, ಆನಂದ, ಅಂಟದಿರುವಿಕೆ, ಅಕ್ಷೊಭ್ಯತೆ, ತೇಜಸ್ಸು ಸಾರಿಪುತ್ತರಿಗೆ ಆಕಷರ್ಿಸಿದವು. ಖಂಡಿತವಾಗಿಯೂ ಈತನು ಸತ್ಯ ಕಂಡಿರುವನು ಎಂದು ದೃಢೀಕರಿಸಿಕೊಂಡು, ಧಮ್ಮ ಬೋಧಿಸುವಂತೆ ಅಸ್ಸಜಿಯನ್ನು ಕೇಳಿಕೊಂಡರು. ಆದರೆ ಅಸ್ಸಜಿಯು ತಾನಿನ್ನೂ ಹೊಸಬ, ಬುದ್ಧರಷ್ಟು ಚೆನ್ನಾಗಿ ವಿವರಿಸಲಾರೆ ಎಂದಾಗ, ತಾವು ತಿಳಿದಿರುವಷ್ಟೇ ತಿಳಿಸಿ, ಧನ್ಯನಾಗುವೆ ಎಂದು ಸಾರಿಪುತ್ರ ತಿಳಿಸಿದಾಗ, ಅಸ್ಸಜಿಯು ಈ ಗಾಥೆ ನುಡಿಯುತ್ತಾರೆ.
                ಯಾವೆಲ್ಲಾ ಧಮ್ಮಗಳು ವಿಷಯಗಳು ಕಾರಣಗಳಿಂದ ಉದಯಿಸುತ್ತವೆಯೋ,
ಆ ಕಾರಣಗಳೆಲ್ಲವನ್ನು ತಥಾಗತರು ತಿಳಿಸಿಹರು,
ಹಾಗೆಯೇ ಅವೆಲ್ಲದರ ನಿರೊಧವನ್ನು ತಿಳಿಸಿದ್ದಾರೆ
ಮಹಾಸಮಣರಾದ ಬುದ್ಧ ಭಗವಾನರು.
                ಮೇಲಿನ ಎರಡು ವಾಕ್ಯಗಳನ್ನು ಕೇಳುತ್ತಿದ್ದಂತೆಯೇ, ಅವುಗಳ ಸಾರವನ್ನೆಲ್ಲಾ ತಕ್ಷಣ ಗ್ರಹಿಸಿದ ಸಾರಿಪುತ್ರ ಆ ಕ್ಷಣದಲ್ಲೇ ಸೋತಪನ್ನರಾದರು. ನಂತರ ಕೋಲಿತನನ್ನು ಭೇಟಿಮಾಡಿ ಆತನಿಗೆ ಈ ಗಾಥೆ ತಿಳಿಸಿದ ನಂತರದಲ್ಲೇ ಮೊಗ್ಗಲ್ಲಾನರವರು ಸಹಾ ಸೋತಪನ್ನರಾದರು.
                ನಂತರ ಇಬ್ಬರೂ ಬುದ್ಧ ಭಗವಾನರ ಶಿಷ್ಯರಾಗಲು ನಿರ್ಧರಿಸಿದರು. ತಮ್ಮ ಹಿಂದಿನ ಗುರುವಾದ ಸಂಜಯನಿಗೂ, ತಮ್ಮೊಂದಿಗೆ ಬರಲು ಒತ್ತಾಯಿಸಿದರು. ಆದರೆ ಅತನು ಒಪ್ಪದಿದ್ದಾಗ, ಅವರಿಬ್ಬರೇ ಬುದ್ಧರ ಬಳಿಗೆ ಹೋಗಲು ನಿರ್ಧರಿಸಿದಾಗ ಆಗ ಸಂಜಯನ ಅರ್ಧದಷ್ಟು ಶಿಷ್ಯರು ಇವರನ್ನು ಹಿಂಬಾಲಿಸಿದರು. ಎಲ್ಲರೂ ಸೇರಿ ರಾಜಗೃಹದ ವೇಳುವನಕ್ಕೆ ಬಂದರು. ಬನ್ನಿ ಭಿಕ್ಷುಗಳೇ ಎಂದು ಭಗವಾನರು ಅವರನ್ನು ಆಹ್ವಾನಿಸಿದರು. ಅವರು ಬೌದ್ಧ ಭಿಕ್ಷುಗಳಾದರು. ನಂತರ ಭಗವಾನರ ಬೋಧನೆಯಿಂದ ಸಾರಿಪುತ್ರರು ಅಂದೇ ಅರಹಂತರಾದರು. ಆದರೆ ಮೊಗ್ಗಲ್ಲಾನ ಎರಡು ವಾರದ ನಂತರ ಅರಹಂತರಾದರು. ಅಂದಿನಿಂದ ಅವರ ಹೆಸರು ಸಾರಿಪುತ್ತ ಮತ್ತು ಮೊಗ್ಗಲ್ಲಾನ ಎಂದೇ ಪ್ರಸಿದ್ಧಿಯಾಯಿತು.
                ಸಾರಿಪುತ್ತರು, ಬುದ್ಧರ ನಂತರ ಪ್ರಜ್ಞಾ ವಿಸ್ತಾರತೆಯಲ್ಲಿ ಅವರೇ ಎರಡನೆಯವರು. ಹಾಗೆಯೇ ಮೊಗ್ಗಲ್ಲಾನರವರು ಬುದ್ಧರ ನಂತರ ಅತೀಂದ್ರಿಯ ಶಕ್ತಿಯಲ್ಲಿ ಎರಡನೆಯವರು. ಹೀಗಾಗಿ ಇವರೀರ್ವರು ಇಡೀ ಸಂಘಕ್ಕೆ ಅಗ್ರ ಶ್ರಾವಕರಾಗಿದ್ದರು.
                ಇವರೀರ್ವರ ಬಗ್ಗೆ ಭಗವಾನರು ಸಹಾ ಹೀಗೆ ಪ್ರಶಂಸಿಸಿ, ಆದರ್ಶತೆಯ ಬಗ್ಗೆ ಹೊಗಳಿದ್ದಾರೆ:
                ಓ ಭಿಕ್ಷುಗಳೇ, ಸಾರಿಪುತ್ರ ಮತ್ತು ಮೊಗ್ಗಲ್ಲಾನರೊಂದಿಗೆ ಬೆರೆಯಿರಿ, ಅಂತಹವರ ಜೊತೆಯಲ್ಲಿಯೇ ಆನಂದಿಸಿ, ಅವರು ಪರಮಪ್ರಜ್ಞರಾದ ಭಿಕ್ಖುಗಳಾಗಿದ್ದಾರೆ ಮತ್ತು ಸಹ ಭಿಕ್ಷುಗಳ ಕಲ್ಯಾಣಕಾರರಾಗಿದ್ದಾರೆ.
                ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಶ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು. ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
                ನಂತರ ಅವರು ಅಲೆದಾಡುವ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು.
                ಆಗ ಮೊಗ್ಗಲ್ಲಾನರು ಕರಿಬಂಡೆಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಎರಡು ತಿಂಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು.
                ಆದರೆ ಯಾವಾಗ ಮೂರನೇ ತಿಂಗಳು ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.
                ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.
                ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?
                ಕರಿಬಂಡೆಯ ಬಳಿ.
                ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.
                ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.
                ತಕ್ಷಣ ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.
                ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತೆಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು.
                ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.
                ಭಿಕ್ಷುಗಳೇ, ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.
                ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.
                ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು.

                ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು. 

dhammapada/dandavagga/10.6/pythonpeta

ಮೂರ್ಖನಿಗೆ ಪಾಪ ಪರಿಣಾಮದ ಅರಿವಿಲ್ಲ
ಮೂರ್ಖನು ಪಾಪ ಮಾಡುವಾಗ, ಅವುಗಳ ಭೀಕರ ಪರಿಣಾಮ ಅರಿಯುವುದಿಲ್ಲ, ಅಂತಹ ದುಮರ್ೇಧನು (ದಡ್ಡನು) ಬೆಂಕಿಯಿಂದ ಆಹುತಿಯಾಗುವವನ ರೀತಿ ಯಾತನೆಗೆ ಗುರಿಯಾಗುತ್ತಾನೆ.  (136)
ಗಾಥ ಪ್ರಸಂಗ 10:6
ಹೆಬ್ಬಾವು ಆಕೃತಿಯ ಪ್ರೇತದ ಪ್ರಸಂಗ

                ಒಮ್ಮೆ ಪರಮಪೂಜ್ಯ ಮೊಗ್ಗಲ್ಲಾನರವರು, ಪೂಜ್ಯ ಲಕ್ಖಣರೊಂದಿಗೆ ಗೃದ್ಧಕೂಟ ಪರ್ವತದಿಂದ ಇಳಿಯುತ್ತಿದ್ದರು. ಆಗ ಅವರಿಗೆ ತಮ್ಮ ದಿವ್ಯದೃಷ್ಟಿಯಿಂದ 25 ಯೋಜನ ಉದ್ದದ ಹೆಬ್ಬಾವಿನ ಆಕೃತಿಯ ಪ್ರೇತವು ಕಂಡುಬಂದಿತು. ಆ ಹಾವಿನ ಆಕೃತಿಯ ಪ್ರೇತಕ್ಕೆ ಎಲ್ಲಾಕಡೆಗಳಿಂದ ಬೆಂಕಿಯು ಆವೃತವಾಗಿ ಅದು ಅತಿ ಯಾತನೆ ಅನುಭವಿಸುತ್ತಿತ್ತು. ಅದರ ಅವಸ್ಥೆಯನ್ನು ಕಂಡಂತಹ ಮೊಗ್ಗಲ್ಲಾನರವರು ವಿಷಾದದ ನಗೆ ಬೀರಿದರು. ಆಗ ಲಕ್ಖಣರವರು ಆ ವಿಷಾದದ ನಗೆಗೆ ಕಾರಣ ಕೇಲಿದರು. ಆಗ ಮೊಗ್ಗಲ್ಲಾನರು ಹಿಗೆ ಪ್ರತಿಕ್ರಿಯಿಸಿದರು: ಸೋದರ, ಈ ಪ್ರಶ್ನೆಗೆ ಉತ್ತರಿಸಲು ಇದು ಸಕಾಲವಲ್ಲ, ಬುದ್ಧರನ್ನು ಭೇಟಿಯಾಗುವವರೆಗೂ ಸುಮ್ಮನಿದ್ದು ನಂತರ ಪ್ರಶ್ನಿಸುವವನಾಗು.
                ನಂತರ ಅವರು ಬುದ್ಧರನ್ನು ಭೇಟಿ ಮಾಡಿದರು. ಆಗ ಪುನಃ ಲಕ್ಖನರವರು ವಿಷಾಧದ ನಗೆಗೆ ಕಾರಣ ಕೇಳಿದರು. ಆಗ ಮೊಗ್ಗಲ್ಲಾನರವರು ಹೀಗೆ ನುಡಿದರು: ಸೋದರನೇ, ಆ ಸ್ಥಳದಲ್ಲಿ ನಾನು ಪ್ರೇತವೊಂದನ್ನು ಕಂಡೆನು, ಅದರ ಸ್ವರೂಪ ಹೀಗಿತ್ತು. ಅಂತಹ ಪ್ರೇತವನ್ನೇ ನಾನು ಕಂಡಿರಲಿಲ್ಲ. ಅದಕ್ಕಾಗಿ ನಾನು ನಗೆ ಬೀರಿದೆನು.
                ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಿಜಕ್ಕೂ ಮೊಗ್ಗಲ್ಲಾನ ಅಂತಹ ಶಕ್ತಿಯನ್ನು ಹೊಂದಿಹನು. ಅವುಗಳ ಸದ್ಭಳಕೆಯನ್ನು ಸಹಾ ಮಾಡಲು ಬಲ್ಲನು. ಭಿಕ್ಷುಗಳೇ, ಮೊಗ್ಗಲ್ಲಾನನಷ್ಟೇ ಅಲ್ಲ, ನಾನು ಸಹಾ ಆ ಪ್ರೇತವನ್ನು ಕಂಡಿರುವೆನು. ಬೋಧಿವೃಕ್ಷದ ವಜ್ರಾಸನದಲ್ಲಿರುವಾಗ, ಈ ಪ್ರೇತವೇ ಅಲ್ಲಿಗೂ ಬಂದಿತ್ತು. ಅಲೌಕಿಕ ವಿಷಯಗಳಲ್ಲಿ ಶ್ರದ್ಧೆಯಿಲ್ಲದವರಲ್ಲಿ ಹೇಳಿದರೆ ನಂಬುವುದಿಲ್ಲ ಎಂದು ಅರಿತು, ನಾನು ಯಾರಲ್ಲಿಯೂ ಹೇಳಿರಲಿಲ್ಲ. ಈಗ ಮೊಗ್ಗಲ್ಲಾನರು ನೋಡಿರುವುದರಿಂದಾಗಿ ನಾನು ಸಕಾಲವೆಂದು ನಾನು ನುಡಿಯುತ್ತಿರುವೆ.

                ಆಗ ಭಿಕ್ಷುಗಳು ಆ ಪ್ರೇತದ ದುಃಸ್ಥಿತಿಗೆ ಕಾರಣ ವಿವರಿಸುವಂತೆ ಕೇಳಿಕೊಂಡರು. ಆಗ ಭಗವಾನರು ಆ ಪ್ರೇತದ ಪೂರ್ವಜನ್ಮದ ವೃತ್ತಾಂತ ತಿಳಿಸಿದರು. ಹಿಂದೆ ಕಸ್ಸಪ ಬುದ್ಧರ ಕಾಲದಲ್ಲಿ ಸುಮಂಗಲನೆಂಬ ಕೋಶಾಧ್ಯಕ್ಷನಿದ್ದನು. ಆತನು ಪರಮ ದಾನಿಯಾಗಿದ್ದನು. ಆತನು 20 ಉಸಭಗಳಷ್ಟು ವಿಶಾಲ ಸ್ಥಳದಲ್ಲಿ ಚಿನ್ನದ ಇಟ್ಟಿಗೆಗಳಿಂದಲೇ ನೆಲೆ ಹಾಸಿದನು. ಅಷ್ಟೇ ಮೊತ್ತದ ಮೌಲ್ಯದಷ್ಟು ವಿಹಾರವನ್ನು ನಿಮರ್ಿಸಿದನು. ಅಷ್ಟೇ ಮೌಲ್ಯದಷ್ಟು ಹಣ ಖಚರ್ು ಮಾಡಿ ವಿಹಾರದ ಭವ್ಯ ಆರಂಭಣೆ ಮಾಡಿಸಿ ಮಹತ್ ದಾನ ಮಾಡಿದನು. ಒಂದುದಿನ ಆತನು ಬುದ್ಧರಿಗೆ ಪೂಜಿಸಲೆಂದು ದಾರಿಯಲ್ಲಿ ಹೋಗುವಾಗ, ಕಳ್ಳನೊಬ್ಬನು ಕೆಸರಿನಲ್ಲಿದ್ದ ಪಾದಗಳೊಂದಿಗೆ ಹಾಗು ತಲೆಯ ಮೇಲೆ ಬಟ್ಟೆಗಳಿಂದ ಹೊದ್ದು ಅಡಗಿರುವುದನ್ನು ಕಂಡನು. ಆದರೆ ಆತನನ್ನು ಕಂಡು ಬೇಟೆಗಾರನೆಂದು ಭಾವಿಸಿದನು. ಆದರೆ ಕಳ್ಳನು ದ್ವೇಷಾಸೂಯೆಯಿಂದಾಗಿ ಕೋಶಾಧ್ಯಕ್ಷನ ಹೊಲವನ್ನು ಏಳುಬಾರಿ ಸುಟ್ಟುಹಾಕಿದನು. ಅಷ್ಟೇ ಅಲ್ಲ, ಕೋಶಾಧ್ಯಕ್ಷನ ದನಕರುಗಳ ಕಾಲುಗಳನ್ನು ಏಳುಬಾರಿ ಕತ್ತರಿಸಿದನು. ಅಷ್ಟಕ್ಕೂ ತೃಪ್ತನಾಗದೆ, ಕೋಶಾಧ್ಯಕ್ಷನು ಆನಂದಿಸುವುದು ಭಗವಾನರ ಗಂಧಕುಟೀರದಲ್ಲೇ ಎಂದು ತಿಳಿದು ಭಗವಾನರು ಇಲ್ಲದ ವೇಳೆ ಗಮನಿಸಿ ಅದನ್ನು ಸುಟ್ಟು ಹಾಕಿದನು. ಅಲ್ಲಿದ್ದ ಸಾಮಗ್ರಿಗಳನ್ನು ಒಡೆದು ಎಸೆದಿದ್ದನು. ಗಂಧ ಕುಟೀರವು ಸುಟ್ಟು ಭಸ್ಮವಾಗಿತ್ತು. ಈ ಕರ್ಮಫಲದಿಂದಾಗಿ ಆ ಕಳ್ಳನು ಸತ್ತು ಈ ರೀತಿ ಅಗ್ನಿಯ ಜ್ವಾಲೆಗಳಿಂದ ಆವೃತವಾದ ಪ್ರೇತವಾದನು. ಆ ಕೋಶಾಧ್ಯಕ್ಷನು ಆ ಕಳ್ಳನನ್ನು ಕ್ಷಮಿಸಿ, ಪುನ ಗಂಧಕುಟಿಯನ್ನು ನಿಮರ್ಿಸಿದನು. ಆ ಸಮಯದಲ್ಲಿ ಈ ಗಾಥೆಯನ್ನು ಭಗವಾನರು ನುಡಿದಿದ್ದರು.

dhammapada/dandavagga/10.5/visaaka

ಜರಾ ಮೃತ್ಯುಗಳು ಸವರ್ಾತ್ರಿಕವಾಗಿ ಕಾಡುತ್ತದೆ
ಹೇಗೆ ಗೋಪಾಲನು (ಗೋವುಗಳನ್ನು ಕಾಯುವವನು) ಗೋವುಗಳನ್ನು ಗೋಮಾಳಕ್ಕೆ ಅಟ್ಟುವನೋ ಹಾಗೇ ಜರಾ (ಮುಪ್ಪು) ಮತ್ತು ಮೃತ್ಯುಗಳು ಆಯು ಇರುವ ಜೀವಿಗಳನ್ನು ಜನ್ಮದಿಂದ ಜನ್ಮಕ್ಕೆ ಅಟ್ಟುತ್ತವೆ.          (135)
ಗಾಥ ಪ್ರಸಂಗ 10:5
ಸ್ತ್ರೀಯರ ಧಮ್ಮಪಾಲನೆಯ ಸಾಮಾನ್ಯ ಉದ್ದೇಶಗಳು


                ಭಗವಾನರು ಒಮ್ಮೆ ಪುಬ್ಬಾರಾಮ ವಿಹಾರದಲ್ಲಿ ನೆಲೆಸಿದ್ದರು. ಆಗ ವಿಶಾಖೆಯು ಉಪೋಸಥ ವ್ರತ ಆಚರಿಸಲು 500 ಸ್ತ್ರೀಯರೊಂದಿಗೆ ಬುದ್ಧರ ಬಳಿಗೆ ಬಂದು ಭಕ್ತಿಪೂರ್ವಕವಾಗಿ ವಂದಿಸಿ, ಪೂಜಿಸಿ, ಒಂದೆಡೆ ಕುಳಿತಳು. ಇತರ ಎಲ್ಲಾ ಸ್ತ್ರೀಯರು ಇದೇರೀತಿ ಗೌರವಿಸಿ ಕುಳಿತರು. ಅಂದು ಅಷ್ಠಾಂಗಶೀಲ ಪಾಲಿಸಿ, ದಾನನೀಡಿ, ಧ್ಯಾನದಲ್ಲಿಯೇ ನಿರತರಾಗಿ ಈಗ ಬುದ್ಧ ಭಗವಾನರ ದರುಶನಕ್ಕೆ ಬಂದಿದ್ದರು. ಅಲ್ಲಿ ಬರುವ ಮುನ್ನ ವಿಶಾಖೆಗೆ ಆ ಸ್ತ್ರೀಯರ ಧಮ್ಮಪಾಲನೆಯ ಉದ್ದೇಶ ಅರಿಯಬೇಕೆನ್ನುವ ಇಚ್ಛೆ ಉಂಟಾಯಿತು. ಆಕೆ ವೃದ್ಧ ಸ್ತ್ರೀಯರಿಗೆ ಧಮ್ಮಪಾಲನೆಯ ಉದ್ದೇಶ ಕೇಳಿದಳು. ಅದಕ್ಕೆ ಅವರು ಸುಗತಿ ಪ್ರಾಪ್ತಿಗೆ ಅಂತಹ ದಿವ್ಯಸುಖ ಪಡೆಯಲೆಂದೇ ತಾವು ಉಪೋಸಥ ಆಚರಿಸುತ್ತಿದ್ದೇವೆ ಎಂದರು. ನಂತರ ಆಕೆ ಮಧ್ಯಮ ವಯಸ್ಕರಿಗೆ ಅವರ ಧಮ್ಮಪಾಲನೆಯ ಉದ್ದೇಶ ಕೇಳಿದಳು. ಅದಕ್ಕೆ ಅವರು ಸವತಿಯರ ಕಾಟ, ಇನ್ನಿತರ ಗೃಹ ಸಮಸ್ಯೆಯಿಂದ ಪಾರಾಗಿ ಮನಶ್ಶಾಂತಿ ಗಳಿಸಲೆಂದು ಬಂದಿರುವೆವು ಎಂದರು. ನಂತರ ವಿಶಾಕೆಯು ನವ ವಿವಾಹಿತೆಯರಿಗೆ ಧಮ್ಮಪಾಲನೆಯ ಉದ್ದೇಶ ಹೇಳಿದಾಗ ಅವರು ಉತ್ತಮ ಪುತ್ರ ಸಂತಾನಕ್ಕಾಗಿ ಅಷ್ಠಾಂಗಶೀಲ ಇತ್ಯಾದಿ ಆಚರಿಸುತ್ತಿರುವೆವು ಎಂದಿದ್ದರು ಮತ್ತು ಕನ್ಯೆಯರಿಗೆ ಕೇಳಿದಾಗ ಅವರು ಉತ್ತಮ ಪತಿ ಹೊಂದಲು ಉಪೋಸಥ ವ್ರತ ಕೈಗೊಂಡಿರುವುದಾಗಿ ತಿಳಿಸಿದ್ದರು. ಬುದ್ಧರ ಮುಂದೆ ವಿಶಾಖೆಯು ಅವರೆಲ್ಲಾ ಬಯಕೆಯು ಕೈಗೂಡುವಂತೆ ಪ್ರಾಥರ್ಿಸಿದಳು. ನಂತರ ಧಮ್ಮಾಪಾಲನೆಯ ನಿಜವಾದ ಅರ್ಥವನ್ನು ಭಗವಾನರಲ್ಲಿ ಕೇಳಿದಳು. ಆಗ ಭಗವಾನರು ಜರಾ ಮೃತ್ಯುಗಳ ಭೀಕರತೆ ವಿವರಿಸಿ ಅದರಿಂದ ಪಾರಾಗುವುದಕ್ಕೆ ಎಂದು ನುಡಿದು ನಿಜವಾದ ಸುಖವು ತೃಷ್ಣಾರಹಿತರಾಗುವುದು ಎಂದು ತಿಳಿಸಿ ಈ ಮೇಲಿನ ಗಾಥೆಯನ್ನು ನುಡಿದರು.