Saturday 15 November 2014

dhammapada/yamakavagga/1:13/sumanadevi's story

ಪುಣ್ಯವಂತರು ಸದಾ ಸುಖಿಯಾಗಿರುತ್ತಾರೆ
ಇಲ್ಲಿ ಆನಂದವಾಗಿರುತ್ತಾನೆ, ಮುಂದೆ ಪರಲೋಕದಲ್ಲೂ ಆನಂದವಾಗಿರುತ್ತಾನೆ, ಪುಣ್ಯವಂತನು ಉಭಯಸ್ಥಿತಿಗಳೆರಡರಲ್ಲೂ ಆನಂದದಿಂದಿರುತ್ತಾನೆ. ನಂತರ ಸುಗತಿಯಲ್ಲಿ ಸೇರಿ ಅಲ್ಲಿ ಇನ್ನೂ ಹೆಚ್ಚು ಆನಂದದಿಂದಿರುತ್ತಾನೆ.  (18)

ಗಾಥ ಪ್ರಸಂಗ 1:13
ಸುಮನದೇವಿಯ ಆನಂದ
                ಬುದ್ಧ ಭಗವಾನರಿಗೆ ಮತ್ತು ಅವರ ಸಂಘಕ್ಕೆ ಮಹಾ ಪೋಷಕರೆಂದರೆ ಮಹಾ ಉಪಾಸಕ ಅನಾಥಪಿಂಡಕ ಮತ್ತು ಮಹಾ ಉಪಾಸಿಕೆ ವಿಸಾಖ. ಅವರಿಬ್ಬರೂ ಪ್ರತ್ಯೇಕವಾಗಿ ಪ್ರತಿನಿತ್ಯ ಎರಡು ಸಾವಿರ ಭಿಕ್ಷುಗಳನ್ನು ಪೋಷಿಸುತ್ತಿದ್ದರು.
                ಅನಾಥಪಿಂಡಕನು ಶ್ರಾವತ್ತಿಯಲ್ಲಿದ್ದನು. ಆತನ ಮನೆಯಲ್ಲಿ ಭಿಕ್ಷುಗಳ ಪಾಲನೆಗೆ ಆತ ತನ್ನ ಹಿರಿಯ ಮಗಳಾದ ಮಹಾ ಸುಭದ್ರೆಗೆ ನೇಮಿಸಿದ್ದನು. ಆಕೆಯ ವಿವಾಹದ ನಂತರ ಚುಲ್ಲ ಸುಭದ್ರೆಗೆ ಆ ಮಹಾ ಕಾರ್ಯಕ್ಕೆ ನೇಮಿಸಿದನು. ಆಕೆಯ ವಿವಾಹದ ನಂತರ ಈ ಪುಣ್ಯಕಾರ್ಯಕ್ಕೆ ಆತ ತನ್ನ ಕಿರಿಯ ಮಗಳನ್ನು ನೇಮಿಸಿದನು ಆಕೆಯೇ ಸುಮನದೇವಿ. ಆಕೆಯ ಹಿರಿಯ ಅಕ್ಕಂದಿರಿಬ್ಬರು ಸೋತಪನ್ನರಾಗಿದ್ದರು. ಆದರೆ ಸುಮನದೇವಿಯು ಸಕದಾಗಾಮಿಯಾಗಿದ್ದಳು ಮತ್ತು ಆಕೆ ಅವಿವಾಹಿತಳಾಗಿಯೇ ಇದ್ದಳು.
                ಒಂದುದಿನ ಆಕೆಯು ತನ್ನ ತಂದೆಗೆ ಬೇಗ ಬರಲು ಸಂದೇಶ ಕಳುಹಿಸಿದಳು. ಅನಾಥಪಿಂಡಕ ಮಗಳೊಂದಿಗೆ ಹೀಗೆ ಕೇಳಿದನು
                ಏನು ಮಗು ಸುಮನ?
                ಏನು ಹೇಳಲಿ ತಮ್ಮ.
                ನೀನು ಅಸಂಬದ್ಧವಾಗಿ ಮಾತನಾಡುತ್ತಿರುವೆ ಮಗು.
                ನಾನು ಅಸಂಬದ್ಧವಾಗಿ ಮಾತಾಡುತ್ತಿಲ್ಲ ತಮ್ಮ.
                ನೀನೇನಾದರೂ ಭೀತಿಗೊಂಡಿರುವೆಯಾ ಮಗು?
                ಇಲ್ಲ ತಮ್ಮ ಎಂದು ಹೇಳಿ ಆಕೆ ಮೃತ್ಯವಶವಾದಳು.
                ಅನಾಥಪಿಂಡಕನಿಗೆ ಅಪಾರವಾದ ದುಃಖವಾಯಿತು. ಆತನು ಸೋತಪನ್ನನಾಗಿದ್ದ ರಿಂದ ಇನ್ನೂ ಶೋಕ ಗೆದ್ದಿರಲಿಲ್ಲ. ಆತನು ಅಂತ್ಯಕ್ರಿಯಾದಿಗಳನ್ನು ಮುಗಿಸಿ ಅತ್ತುಕೊಂಡು ಭಗವಾನರು ಇದ್ದಲ್ಲಿಗೆ ಬಂದನು. ಓ ಗೃಹಪತಿಯೆ, ಏಕೆ ಇಷ್ಟೊಂದು ಶೋಕ?
                ಭಗವಾನ್ ಇಂದು ನನ್ನ ಮಗಳು ಸುಮನ ತೀರಿಕೊಂಡಳು
                ಓಹ್ ಅನಾಥಪಿಂಡಕ, ಸಾವಂತು ಎಲ್ಲರಿಗೆ ನಿಶ್ಚಿತವಲ್ಲವೇ? ಅದಕ್ಕಾಗಿ ಏಕೆ ಚಿಂತಿಸುವೆ?
                ನನಗೆ ಗೊತ್ತು ಭಗವಾನ್, ಆದರೆ ನನ್ನ ಮಗಳು ಅತಿ ಲಜ್ಜಾಸಂಪನ್ನಳು, ಶೀಲವಂತಳು, ದಾನಿ, ಸಹೃದಯಿ, ಆದರೆ ನನಗೆ ದುಃಖದ ಅಂಶ ಏನೆಂದರೆ ಆಕೆ ಸಾಯುವಾಗ ಯೋಗ್ಯ ಪ್ರಜ್ಞಾದಿಂದ ಕೂಡಿರಲಿಲ್ಲ.
                ಅದು ಹೇಗೆ? ಆಕೆ ಸಾಯುವಾಗ ಏನೆಂದು ಹೇಳಿದಳು.
                ಅನಾಥಪಿಂಡಕನು ವಿವರಿಸಿದನು. ಆಗ ಭಗವಾನರು ಹೀಗೆ ಸಮಾಧಾನ ನೀಡಿದರು.
                ಓ ಅನಾಥಪಿಂಡಕ, ನಿನ್ನ ಮಗಳು ಅಸಂಬದ್ಧವಾಗಿ ಮಾತಾಡಲಿಲ್ಲ. ಆಕೆ ಸಕದಾಗಾಮಿಯಾಗಿದ್ದಳು. ನೀನು ಸೋತಪನ್ನನಾಗಿರುವುದರಿಂದ ಆಕೆಗಿಂತ ಕಿರಿಯನೇ ಸರಿ. ಈ ಅರ್ಥದಲ್ಲಿ ಆಕೆಯು ನಿನಗೆ ಈ ರೀತಿ ಮಾತನಾಡಿದ್ದಾಳೆ ಅಷ್ಟೇ. ಆಕೆ ಈಗ ದೇವಲೋಕದಲ್ಲಿದ್ದಾಳೆ.

                ಆಗ ಅನಾಥಪಿಂಡಕನಿಗೆ ಸಮಾಧಾನ ಮೂಡಿ ಅನಂತನಾದನು. ಆಕೆಯ ಸಂಬಂಧವಾಗಿ ಮೇಲಿನ ಗಾಥೆಯನ್ನು ಭಗವಾನರು ನುಡಿದರು.

No comments:

Post a Comment