Thursday 15 January 2015

dhammapada/appamada/2.9/tissa

ಜಾಗೃತನು ನಿಬ್ಬಾಣಕ್ಕೆ ಸಮೀಪ
ಯಾವ ಭಿಕ್ಷು ಎಚ್ಚರಿಕೆಯಲ್ಲಿ ಆನಂದಿಸುತ್ತಾನೋ ಮತ್ತು ಅಲಕ್ಷದಲ್ಲಿ ಭಯಪಡುತ್ತಾನೋ ಆತನು ಕೆಳಗೆ ಬೀಳುವುದಿಲ್ಲ. ಆತನು ನಿಬ್ಬಾಣಕ್ಕೆ ಸಮೀಪವಾಗಿರುತ್ತಾನೆ.        (32)

ಗಾಥ ಪ್ರಸಂಗ 2:9
ತಿಸ್ಸನ ಸಂತೃಪ್ತಿ ವಿಕಾಸ
                ನಿಗಮವಾಸಿ ತಿಸ್ಸ ಶ್ರಾವಸ್ತಿಯಲ್ಲಿ ಹುಟ್ಟಿ ಬೆಳೆದಂತಹವ, ಆದರೆ ಭಿಕ್ಷುವಾದ ನಂತರ ಆತನು ಅತಿ ಸರಳ ಜೀವನ ನಡೆಸುತ್ತಿದ್ದನು. ಆಹಾರಕ್ಕಾಗಿ ಆತನು ಹತ್ತಿರ ಹಳ್ಳಿಗೆ ಹೋಗುತ್ತಿದ್ದನು. ಅಲ್ಲಿ ಸಂಬಂಧಿಕರ ಮನೆಯಲ್ಲಿ ಕೊಟ್ಟ ಆಹಾರವನ್ನು ಸ್ವೀಕರಿಸಿ ಜೀವಿಸುತ್ತಿದ್ದನು. ಆತನು ದೊಡ್ಡ ಸಮಾರಂಭಗಳಿಗೆ, ಸಂಭ್ರಮಗಳಿಗೆ ತಡೆಹಾಕುತ್ತಿದ್ದನು. ಅನಾಥಪಿಂಡಿಕನಂತ ದೊಡ್ಡ ಶ್ರೀಮಂತ ಮತ್ತು ರಾಜ ಪಸೇನದಿಯಂತಹವರು ಆಹಾರಕ್ಕಾಗಿ ಆಹ್ವಾನ ನೀಡಿದ್ದರೂ ಸಹಾ ಆತನು ಹೋಗುತ್ತಿರಲಿಲ್ಲ.
                ಕೆಲವು ಭಿಕ್ಷುಗಳು ಆತನ ಬಗ್ಗೆ ಮಾತುಗಳನ್ನು ಆಡಲಾರಂಭಿಸಿದರು. ಅವರು ತಿಸ್ಸ ಬಂಧುಗಳಿಗೆ ಅಂಟಿದ್ದಾನೆ, ಆದ್ದರಿಂದಲೇ ಆತನು ಅನಾಥಪಿಂಡಿಕ ಮತ್ತು ಕೋಶಲಾಧೀಶ ಪಸೇನದಿಯ ಬಳಿಗೆ ಹೋಗುತ್ತಿಲ್ಲ. ವಿಷಯವು ಬುದ್ಧರ ಬಳಿಗೂ ಬಂದಿತು. ಭಗವಾನರು ಆತನನ್ನು ಕರೆಸಿದರು ಹಾಗು ಕೇಳಿದರು ಭಿಕ್ಷು ಈ ಸುದ್ದಿ ನಿಜವೇ? ನೀನು ಹಾಗೆ ಸಂಬಂಧಿಕರ ನಡುವೆ ಬಾಂಧವ್ಯದ ಬಂಧನದಲ್ಲಿರುವೆಯಾ?
                ಭಗವಾನ್ ಇದು ನಿಜವಲ್ಲ. ನಾನು ಯಾರಿಗೂ ಅಂಟಿಲ್ಲ, ಹತ್ತಿರದಲ್ಲಿ ನನಗೆ ಸಿಗುವ ಅಲ್ಪ ಆಹಾರ ಅದು ಸ್ವಾದಿಷ್ಟವಾಗಿರಲಿ ಅಥವಾ ಚೆನ್ನಾಗಿಲ್ಲದಿರಬಹುದು ಅಷ್ಟರಲ್ಲೇ ತೃಪ್ತಿಹೊಂದಿ ನಾನು ಏಕಾಂತಕ್ಕೆ ತೆರಳಿ ಸಾಧನೆಯಲ್ಲಿ ತಲ್ಲೀನನಾಗುತ್ತೇನೆ.
                ಸಾಧು ಭಿಕ್ಷು ಸಾಧು ಎಂದು ಭಗವಾನರು ಹೀಗೆ ಹೇಳಿದರು ಇದರಲ್ಲಿ ಆಶ್ಚರ್ಯವಿಲ್ಲ, ಭಿಕ್ಷುಗಳೇ ಸಂತೃಪ್ತಿಯು ಸದಾ ಪ್ರಶಂಸನೀಯ, ಅಲ್ಪೇಚ್ಛೆಯುಳ್ಳ ಭಿಕ್ಷು ಸಹಾ ಸದಾ ಪ್ರಶಂಸನೀಯ. ಈಗ ನನ್ನ ಶಾಸನದಲ್ಲಿದ್ದು ಸಂತೃಪ್ತರಾಗಿರುವುದು ಸಹಜ. ಹಿಂದೆ ಪಂಡಿತರು ಬುದ್ಧಶಾಸನವಿಲ್ಲದಿದ್ದರೂ ಸಂತೃಪ್ತಿ ಸಾಧಿಸಿದ್ದಾರೆ.
                ಆಗ ಭಿಕ್ಷುಗಳು ವಿನಂತಿಸಿಕೊಂಡಾಗ ಭಗವಾನರು ಹಿಂದಿನ ಜಾತಕ ತಿಳಿಸಿದರು.
                ಬಹಳ ವರ್ಷಗಳ ಹಿಂದೆ ಹಿಮಾಲಯದ ಪ್ರಾಂತ್ಯದಲ್ಲಿ ಗಂಗಾ ತೀರದಲ್ಲಿ ಸಾವಿರಾರು ಗಿಳಿಗಳು ವಾಸವಾಗಿದ್ದವು. ಅವುಗಳಲ್ಲಿ ರಾಜಗಿಳಿಯು ಇತ್ತು. ರಾಜಗಿಳಿಯು ಆ ಮರಗಳ ಗುಂಪಿನಲ್ಲೇ ಆಶ್ರಯ ಪಡೆದಿತ್ತು. ಆ ಮರದಲ್ಲೇ ಸಿಗುವ ಹಣ್ಣುಗಳಿಂದ ತೃಪ್ತವಾಗಿತ್ತು. ಹಣ್ಣುಗಳು ಇಲ್ಲದ ವೇಳೆ ಎಲೆಗಳು ಮತ್ತು ನೀರು ಕುಡಿದು ಸಂತೃಪ್ತವಾಗಿತ್ತೇ ವಿನಃ ಅದು ಬೇರೊಂದು ಪ್ರದೇಶಕ್ಕೆ ಹೋಗಲಿಲ್ಲ. ಅದು ಇದ್ದಲ್ಲಿಯೇ ಇತ್ತು. ಅದು ಸಂತೃಪ್ತವಾಗಿ ಸಂತೋಷವಾಗಿ ಇತ್ತು. ಅದರ ಸಂತೃಪ್ತಿಗೆ ಇಂದ್ರನ ಸ್ಥಳವು ಕಂಪಿಸಿತು. ಸಕ್ಕನು ಅದರ ಸಂತೃಪ್ತಿ ಕಂಡು ಇಡೀ ಅರಣ್ಯವನ್ನು ಹಸಿರಿನಿಂದ ಮತ್ತು ಫಲಭರಿತವನ್ನಾಗಿಸಿದನು.

                ಹೀಗೆ ಭಗವಾನರು ತಮ್ಮ ಹಿಂದಿನ ಜನ್ಮದಲ್ಲಿಯೂ ಸಂತುಷ್ಟರಾಗಿದ್ದರು. ಈ ಶುಭ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು.

No comments:

Post a Comment