Thursday 29 January 2015

dhammapada/cittavagga/3.3/gahapathi

ಕೇವಲ ನಿಮ್ಮ ಯೋಚನೆಗಳನ್ನು ರಕ್ಷಿಸಿ
ಮನಸ್ಸನ್ನು ಗ್ರಹಿಸುವುದು ಅತಿಕಷ್ಟಕರ. ಅದು ಅತ್ಯಂತ ಕೋಮಲವೂ ಮತ್ತು ಅತಿಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ. (36)
ಗಾಥ ಪ್ರಸಂಗ 3:3
ಜ್ಞಾನಿಯು ತನ್ನ ಯೋಚನೆಗಳನ್ನು ರಕ್ಷಿಸುತ್ತಾನೆ


                ಶ್ರಾವಸ್ತಿಯಲ್ಲಿ ಒಬ್ಬ ಗೃಹಪತಿ ಪುತ್ರನಿದ್ದನು. ಆ ಯುವಕನು ಧಮರ್ಾಚಾರಿ ಯಾಗಿದ್ದನು. ಭಿಕ್ಷುಗಳಿಗೆ ದಾನ ನೀಡುತ್ತಾ, ಶೀಲ ಪಾಲಿಸುತ್ತಾ ಸದ್ಗೃಹಸ್ಥನಾಗಿದ್ದನು. ಒಮ್ಮೆ ಭಿಕ್ಷುವಿನ ವಚನದಂತೆ ಆತ ತನ್ನ ಐಶ್ವರ್ಯವನ್ನು 3 ಭಾಗ ಮಾಡಿ 1 ಭಾಗವನ್ನು ಉದ್ಯಮದಲ್ಲಿ ಹೂಡಿದನು. ಮತ್ತೊಂದು ಭಾಗವನ್ನು ಕುಟುಂಬ ಪಾಲನೆಗೆ ಮೀಸಲಿಟ್ಟನು. ಮತ್ತು 3ನೆಯ ಭಾಗವನ್ನು ದಾನಕ್ಕೆ ಮೀಸಲಿಟ್ಟು ದಾನಿಯಾದನು. ಇದೇರೀತಿ ದಾನ, ಶೀಲ ಪಾಲಿಸುತ್ತಾ ಆತನಿಗೆ ಆನಂದ ಉಂಟಾಗಿ ಮುಂದೆ ನಾನು ಏನನ್ನು ಮಾಡಬೇಕೆಂದು ಆತ ಕೇಳಿದಾಗ, ತ್ರಿಶರಣು ಪಡೆ ಎಂದು ಭಿಕ್ಷುಗಳು ನುಡಿದರು. ಹಾಗೆಯೇ ಆತನು ತ್ರಿಶರಣು ಪಡೆದು ಮುಂದೆ ಹಾಗೆಯೇ ಪಂಚಶೀಲ ಪಾಲಿಸುತ್ತಾ ಹಾಗೆಯೇ ದಶಶೀಲ ಪಾಲಿಸಲು ಆರಂಭಿಸಿದನು. ನಂತರ ಆತನು ಪ್ರಾಪಂಚಿಕತೆಯಿಂದ ಮುಕ್ತನಾಗಿ ಭಿಕ್ಷುವಾದನು.
                ಆತನು ಭಿಕ್ಷುವಾದಾಗ ಆತನಿಗೆ ಅಭಿಧಮ್ಮವನ್ನು ಒಬ್ಬ ಭಿಕ್ಷು ಉಪದೇಶಿಸಿದರು. ಹಾಗೆಯೇ ವಿನಯದ ಗುರುಗಳು ಆತನಿಗೆ ಭಿಕ್ಷುಗಳ ನಿಯಮಗಳನ್ನು ತಿಳಿಸಿ ಅದನ್ನು ನೆನಪಿಡಲು ಮತ್ತು ಪಾಲಿಸಲು ತಿಳಿಸಿದರು. ಆತನು ಚಿಂತಾಕ್ರಾಂತನಾದನು. ಏಕೆಂದರೆ ಶೀಲದ ನಿಯಮಗಳು 227 ಇದ್ದವು. ಜೊತೆಗೆ ಧ್ಯಾನದ ವಿಷಯಗಳು, ಜೊತೆಗೆ ಬೌದ್ಧ ಮನಶಾಸ್ತ್ರ (ಅಭಿಧಮ್ಮದ) ವಿಸ್ತಾರ ವಿಶ್ಲೇಷಣೆ ಬೇರೆ. ಸುತ್ತಗಳ ನೆನಪು ಬೇರೆ ಇಡಬೇಕಿತ್ತು. ಆತನಿಗೆ ಇದಕ್ಕಿಂತ ಗೃಹಸ್ಥ ಜೀವನ ಸ್ವತಂತ್ರ ಎನಿಸಿತು. ಆತನು ಮತ್ತೆ ಗೃಹಸ್ಥನಾಗಲು ಸಿದ್ಧನಾದನು. ಆದರೆ ಅದು ಬಿಡಲಾರದೆ ಇದು ಹಿಡಿಯಲಾರದೆ ಆತನು ತನ್ನ ಮಾನಸಿಕ ಹೊರೆಯಿಂದ ಕುಗ್ಗಿದನು, ಅತೃಪ್ತನಾದನು, ಸಂದೇಹದಿಂದ ಕೂಡಿದನು. ಅಸಂತುಷ್ಟನಾದನು, ಅಸುಖಿಯಾಗಿ ದುರ್ಬಲನಾದನು. ಆತನ ಈ ಚಿಂತೆ, ದುಃಖ ಬುದ್ಧರಿಗೆ ಅರಿವಾಗಿ ಆತನಿಗೆ ಈ ರೀತಿ ಉಪದೇಶ ನೀಡಿದರು.
                ನೀನು ಕೇವಲ ಮನಸ್ಸನ್ನು ನಿಯಂತ್ರಿಸಿದರೆ ಅಷ್ಟೇ ಸಾಕು, ನೀನು ಮತ್ತೆ ಏನನ್ನೂ ನಿಯಂತ್ರಿಸುವುದು ಬೇಡ. ಆದ್ದರಿಂದ ಕೇವಲ ನಿನ್ನ ಮನಸ್ಸನ್ನು ಅಕುಶಲಗಳಿಂದ ರಕ್ಷಿಸಿಕೋ.
                ನಂತರ ಆ ಯುವ ಭಿಕ್ಷುವು ಅದರಂತೆಯೇ ಸಾಧಿಸಿ ಅರಹಂತನಾಗುತ್ತಾನೆ.
                ಹೀಗೆ ಚಿತ್ತದ ರಕ್ಷಣೆ ಅಥವಾ ಯೋಚನೆಗಳ ರಕ್ಷಣೆ ಮಾಡಿದಾಗ ಮಾತ್ರ ನಾವು ಧ್ಯಾನದಲ್ಲಿ ಯಶಸ್ವಿಯಾಗುತ್ತೇವೆ.
                ಬುದ್ಧರು ತಮ್ಮ ಬೋಧಿ ಪ್ರಾಪ್ತಿಯ ಮುನ್ನ ಮಾಡಿದ ಮಹಾ ಸಂಕಲ್ಪ ನೆನಪಿಸಿಕೊಳ್ಳಿ.
                ನನ್ನ ಚರ್ಮ, ಮಾಂಸ, ಮೂಳೆ ಮತ್ತು ರಕ್ತಗಳೆಲ್ಲವೂ ಒಣಗಿಹೋದರೂ ಸರಿಯೆ, ಸಂಬೋಧಿಪ್ರಾಪ್ತಿಯ ವಿನಃ ನಾನು ಈ ಪದ್ಮಾಸನ ಭಂಗಿಸಲಾರೆ. ಈ ಸ್ಥಳದಿಂದ ಅಲುಗಾಡಲಾರೆ. ಅದರಂತೆಯೇ ಅವರು ಸಹಸ್ರ ವಿಘ್ನಗಳು ಬಾಧಿಸಿದರೂ ಅಲುಗಾಡದೆ ಸಮ್ಮಾ ಸಂಬೋಧಿ ಪ್ರಾಪ್ತಿ ಮಾಡಿದರು.

                ನಾವು ಸಹ ಹಾಗೆಯೇ ನಮ್ಮ ಯೋಚನೆಗಳನ್ನು ಗೆಲ್ಲಬೇಕಾಗಿದೆ. ಧ್ಯಾನಸಿದ್ಧಿಗೊಳಿಸ ಬೇಕಾಗಿದೆ. ವಿಶುದ್ಧಿ ಪ್ರಾಪ್ತಿಗೊಳಿಸಬೇಕಾಗಿದೆ. ವಿಮುಕ್ತರಾಗಬೇಕಾಗಿದೆ. ನಿಬ್ಬಾಣ ಪಡೆಯಬೇಕಾಗಿದೆ.

No comments:

Post a Comment