Friday 6 March 2015

dhammapada/panditavagga/6.3/channa

ಪುರುಷೋತ್ತಮರ ಸಂಗವನ್ನು ಮಾಡಿ
ಪಾಪವುಳ್ಳ ಮಿತ್ರರ ಜೊತೆ ಸೇರಬೇಡಿ. ಪುರುಷರಲ್ಲಿ ಅಧಮರಾಗಿರುವವರ ಸಹವಾಸ ಬೇಡ, ಕಲ್ಯಾಣ ಮಿತ್ರರ (ಒಳ್ಳೆಯ) ಜೊತೆ ಸೇರು, ಪುರುಷರಲ್ಲಿ ಉತ್ತಮರಾದವರಲ್ಲಿ ಸ್ನೇಹ ಮಾಡು.     (78)
ಗಾಥ ಪ್ರಸಂಗ 6.3
ಚನ್ನನ ಹಠಮಾರಿತನ

                ಚೆನ್ನ ರಾಜಕುಮಾರ ಸಿದ್ಧಾರ್ಥ ಬೋಧಿಸತ್ತರಿಗೆ ಬಹಳ ಸಹಾಯ ಮಾಡಿದಂತಹವನು. ಆತನೇ ಭಗವಾನರಿಗೆ ಮಹಾಭಿಷ್ಠಮಣದ ಸಮಯದಲ್ಲಿ ಸಹಾಯ ಮಾಡಿದಂತಹವನು. ಆತನ ಜೊತೆಗೆ ಕುದುರೆ ಏರಿ ಬೋಧಿಸತ್ತರು ಸಮ್ಮಸಂಭೋದಿ ಪ್ರಾಪ್ತಿಮಾಡಲು ಆಗ ಹೊರಟಿದ್ದರು. ನಂತರ ಬೋಧಿಸತ್ವರು ಬುದ್ಧರಾದ ಮೇಲೆ ಚನ್ನ ಸಹಾ ಭಿಕ್ಷುವಾದನು. ಭಿಕ್ಷುವಾದರೂ ಸಹಾ ಚನ್ನನಿಗೆ ಬಹಳ ಹಠಮಾರಿತನ ಮತ್ತು ಅಹಂಕಾರವಿತ್ತು. ಕಾರಣ ಇಷ್ಟೇ ಆತನ ಹಿಂದೆ ಬೋಧಿಸತ್ತರಿಗೆ ಸಹಾಯ ಮಾಡಿದುದು ಆಗಿತ್ತು. ತಾನು ಬುದ್ಧರಿಗೆ ಅತ್ಯಂತ ಸನಿಹದವನು ಎಂದು ಆತನಿಗೆ ಅಹಂಭಾವವಿತ್ತು.  ಚನ್ನ ಸಾಧಾರಣವಾಗಿ ಹೀಗೆ ಹೇಳುತ್ತಿದ್ದನು: ನಾನು ಭಗವಾನರಿಗೆ ಸಹಾಯಕನಾಗಿದ್ದೆ. ಅವರ ಜೊತೆಯಲ್ಲಿ ಅರಮನೆ ಬಿಟ್ಟು ಅರಣ್ಯಕ್ಕೆ ನಾನೇ ತಾನೇ ಹೋಗಿದ್ದೆ, ಆಗ ನನ್ನ ಹೊರತು ಭಗವಾನರಿಗೆ ಬೇರೆ ಯಾರೂ ಇರಲಿಲ್ಲ. ಆದರೆ ಈಗ ಈ ಸಾರಿಪುತ್ರ ಮತ್ತು ಮೊಗ್ಗಲಾನರವರು ತಮ್ಮನ್ನು ಅಗ್ರಶ್ರಾವಕ ಸೇನಾನಿಗಳು ಎನ್ನುತ್ತಿದ್ದಾರೆ ಮತ್ತು ನನ್ನನ್ನು ಸಹಾ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.
                ಬುದ್ಧರು ಆತನಿಗೆ ಬುದ್ಧಿವಾದ ಹೇಳಿದರು. ಆತ ಸುಮ್ಮನಿದ್ದನು. ಆದರೆ ಆತ ತನ್ನ ಹಿಂದಿನ ಚಾಳಿ ಬಿಡಲಿಲ್ಲ. ಭಗವಾನರು ಆತನಿಗೆ ಹೀಗೆ ಮೂರು ಬಾರಿ ಬುದ್ಧಿವಾದ ಹೇಳಿದರು ಚನ್ನ, ಈ ಇಬ್ಬರು ಉದಾತ್ತರಾದ ಭಿಕ್ಷುಗಳಾಗಿದ್ದಾರೆ. ಅವರು ನಿನಗೆ ಮಿತ್ರರಾಗಿದ್ದಾರೆ. ನೀನು ಅವರೊಂದಿಗಿದ್ದರೆ ನಿನಗೆ ಒಳಿತಾಗುವುದು ಎಂದು ಹೇಳಿ ಮೇಲಿನ ಗಾಥೆ ನುಡಿದರು. ಆದರೂ ಆತ ಹಿಂದಿನಂತೆ ಅಹಂಭಾವದಿಂದಲೇ ಇದ್ದನು. ಭಗವಾನರಿಗೆ ಆತನು ತಮ್ಮ ಪರಿನಿಬ್ಬಾಣದ ನಂತರ ಸರಿಹೋಗುವನು ಎಂದು ತಿಳಿದಿತ್ತು. ಭಗವಾನರು ತಮ್ಮ ಪರಿನಿಬ್ಬಾಣದ ಸಮಯದಲ್ಲಿ ಚನ್ನನಿಗೆ ಬ್ರಹ್ಮದಂಡ ವಿಧಿಸುವಂತೆ ಆನಂದರವರಿಗೆ ಹೇಳಿದರು. ಅದರೆ ಭಿಕ್ಷುಗಳು ಆತನೊಂದಿಗೆ ಮಾತನಾಡಿಸದೆ ಆತನನ್ನು ಅಲಕ್ಷಿಸುವುದು. ಭಗವಾನರು ಪರಿನಿಬ್ಬಾಣದ ನಂತರ ಚನ್ನನಿಗೆ ಭಗವಾನರ ವಿಯೋಗ ಮತ್ತು ಭಿಕ್ಷುಗಳು ಆತನಿಗೆ ಕೈಬಿಟ್ಟಿರುವುದು ಅಪಾರ ಪಶ್ಚಾತ್ತಾಪಕ್ಕೆ ಗುರಿಮಾಡಿತು. ಆತನು ಅದರಿಂದಾಗಿ ಮೂರುಬಾರಿ ಮೂಛರ್ೆ ಹೋದನು. ಸಂಘಕ್ಕೆ ಕ್ಷಮೆಯಾಚಿಸಿ ಸರಿದಾರಿಗೆ ಬಂದನು, ಮುಂದೆ ಅರಹಂತನಾದನು. 

No comments:

Post a Comment