Saturday 7 March 2015

dhammapada/panditavagga/6.6/bhaddiya

ಪಂಡಿತರು ಪರ್ವತದಂತೆ ಅಚಲರು
ಹೇಗೆ ಘನ ಶಿಲಾಪರ್ವತವು ವಾತದಿಂದ (ಗಾಳಿಯಿಂದ) ಅಲುಗಾಡುವುದಿಲ್ಲವೋ ಹಾಗೆಯೇ ನಿಂದೆ ಪ್ರಶಂಸೆಗಳಿಂದ ಪಂಡಿತರು ವಿಚಲಿತರಾಗುವುದಿಲ್ಲ.            (81)
ಗಾಥ ಪ್ರಸಂಗ 6.6
ಪ್ರಜ್ಞಾವಂತರು ಅಲುಗಾಡುವುದಿಲ್ಲ


                ಭದ್ದಿಯನು ಜೇತವನ ವಿಹಾರದ ಭಿಕ್ಷುವಾಗಿದ್ದನು. ಆದರೆ ಆತನು ಕುಬ್ಜನಾಗಿದ್ದನು. ಆದ್ದರಿಂದ ಆತನಿಗೆ ಎಲ್ಲರೂ ಲಕುಂಟಕ (ಕುಬ್ಜ) ಎಂದು ಕರೆಯುತ್ತಿದ್ದರು. ಆದರೆ ಭದ್ದಿಯನು ಸುಚಾರಿತ್ರದವನು ಮತ್ತು ಸಮಚಿತ್ತತೆಯನ್ನು ಸಾಧಿಸಿದವನಾಗಿದ್ದನು. ಆತನಿಗೆ ಪರರು ಎಷ್ಟೇ ಪೀಡಿಸಲಿ, ಕಿವಿ ಎಳೆಯಲಿ, ಮೂಗು ಎಳೆಯಲಿ, ತಲೆಗೆ ಬಾಧಿಸಲಿ, ಪರಿಹಾಸ್ಯ ಮಾಡಲಿ, ಆತನು ಕೋಪಗೊಳ್ಳುತ್ತಿರಲಿಲ್ಲ. ಹಾಗೆಯೇ ದುಃಖಿತನು ಆಗುತ್ತಿರಲಿಲ್ಲ. ಆತ ಸದಾ ಶಾಂತವಾಗಿರುತ್ತಿದ್ದನು. ಸಾಧನೆ ಮಾಡಿ ಆತ ಅರಹಂತನು ಆಗಿದ್ದನು. ಆದರೆ ಬೇರೆಯವರಿಗೆ ಇದು ತಿಳಿದಿರಲಿಲ್ಲ. ಒಮ್ಮೆ ಆತನ ಕ್ಷಾಂತಿ ಗುಣದ ಬಗ್ಗೆ ಭಗವಾನರ ಬಳಿ ಪ್ರಸ್ತಾಪ ಮಾಡಿದಾಗ ಭಗವಾನರು ಹೀಗೆಂದರು :

                ಹೇಗೆ ಹೆಬ್ಬಂಡೆಯು ವಾತ (ಗಾಳಿ)ದಿಂದ ಅಲುಗಾಡುವುದಿಲ್ಲವೋ ಹಾಗೆಯೇ ಪಂಡಿತರು ಶ್ಲೋಕ (ಸ್ತುತಿ) ದಿಂದಾಗಲಿ ನಿಂದೆಯಿಂದಾಗಲಿ ವಿಚಲಿತರಾಗುವುದಿಲ್ಲ ಎಂದು ನುಡಿದರು. ಆಗಲೇ ಬೇರೆಯವರಿಗೆ ಆತನು ಅರಹಂತ ಎಂದು ತಿಳಿಯಿತು.

No comments:

Post a Comment