Thursday 19 February 2015

dhammapada/balavagga/5.10/upaalavanna

ಪಾಪಿಯು ಪರಮ ದುಃಖವನ್ನು ಪ್ರಾಪ್ತಿಮಾಡುತ್ತಾನೆ
ಮಧುವಿನಂತೆ ಸಿಹಿಯೆಂದು ಪಾಪವನ್ನು ಮೂರ್ಖನು ಮಾನ್ಯತೆ ಮಾಡಿಕೊಳ್ಳುವನು, ಯಾವಾಗ ಪಾಪಕರ್ಮವು ಫಲವನ್ನು ನೀಡುವುದೋ ಆಗ ಮೂರ್ಖನು ದುಃಖವಶನಾಗುತ್ತಾನೆ.      (69)
ಗಾಥ ಪ್ರಸಂಗ 5:10
ಭಿಕ್ಷುಣಿ ಉತ್ಪಲಾವರ್ಣಳ ಘಟನೆ
                ಶ್ರಾವಸ್ತಿಯ ಶ್ರೀಮಂತನಿಗೆ ಯುವ ಮಗಳಿದ್ದಳು. ಆಕೆ ನೀಲಿ ಕಮಲದಷ್ಟು ಸುಂದರ, ಮೃದು ಮತ್ತು ಸಿಹಿಯಾಗಿದ್ದರಿಂದ ಆಕೆಯನ್ನು ನೀಲಿಕಮಲ ಅಥವಾ ಉತ್ಪಲಾವರ್ಣ (ಉಪ್ಪಲಾವಣ್ಣಾ) ಎಂದು ಕರೆಯುತ್ತಿದ್ದರು. ಆಕೆಯ ಸೌಂದರ್ಯದ ಖ್ಯಾತಿಯನ್ನು ಕೇಳಿ ರಾಜಕುಮಾರರು, ಶ್ರೀಮಂತರು ಹೀಗೆ ಹಲವಾರು ಮಂದಿ ಆಕೆಯನ್ನು ವಿವಾಹವಾಗಲು ಮುಂದೆ ಬಂದರು. ಅದು ಆಕೆಯ ತಂದೆ ಅತಿ ಧ್ವಂದ್ವಕ್ಕೆ ಈಡುಮಾಡಿತು. ಆತ ಹೀಗೆ ಯೋಚಿಸಿದ, ನಾನು ಎಲ್ಲರ ಬಯಕೆಗಳನ್ನು ತೃಪ್ತಿಗೊಳಿಸಲಾರೆ. ಇದರಿಂದ ಪಾರಾಗಲು ಯಾವುದಾದರೂ ಮಾರ್ಗ ಹುಡುಕಲೇಬೇಕು. ಆಕೆಗೆ ಇದು ಕೊನೆಯ ಜನ್ಮವಾಗಿತ್ತು. ಆದ್ದರಿಂದ ಆಕೆಗೆ ತಂದೆಯ ಮಾತುಗಳು ನೂರುಬಾರಿ ಸಂಶ್ಲೇಷಿಸಿದ ಎಣ್ಣೆಯನ್ನು ತಲೆಯ ಮೇಲೆ ಸಿಂಪಡಿಸಿದ ಹಾಗಾಯಿತು. ಆದ್ದರಿಂದ ಆಕೆ ಹೀಗೆ ಹೇಳಿದಳು. ಪ್ರಿಯ ತಂದೆಯೇ ನಾನು ಭಿಕ್ಷುಣಿಯಾಗುತ್ತೇನೆ. ತಂದೆಯು ಧಾಮರ್ಿಕ ಪ್ರವೃತ್ತಿವುಳ್ಳವನಾಗಿದ್ದರಿಂದ ಆಕೆಯನ್ನು ವಿಜೃಂಭಣೆಯಿಂದ ಭಿಕ್ಷುಣಿ ಸಂಘಕ್ಕೆ ಸೇರಿಸಿದನು.
                ಒಂದುದಿನ ಆಕೆಯ ಕರುಣಾಮಂದಿರದ ವಿಹಾರ ಬಾಗಿಲನ್ನು ಮುಚ್ಚುವ ಕೆಲಸ ಸರದಿಯಂತೆ ಈಕೆಯದಾಯಿತು. ನಂತರ ಆಕೆಯು ದೀಪವನ್ನು ಹಚ್ಚಿದಳು ಮತ್ತು ವಿಹಾರವನ್ನು ಗುಡಿಸಿದಳು ನಂತರ ದೀಪದ ಕಾಂತಿಗೆ ಆಕಷರ್ಿತಳಾದಳು ಹಾಗೆಯೇ ದೀಪದ ಜ್ವಾಲೆಗೆ ಮನವನ್ನು ಕೇಂದ್ರೀಕರಿಸಿ ಧ್ಯಾನಮಗ್ನಳಾದಳು. ಸಮಾಧಿಯ ಹಂತಗಳನ್ನು ತಲುಪಿದಳು. ಹಾಗೆಯೇ ಜ್ಞಾನವನ್ನು ಪ್ರಕಾಶಗೊಳಿಸಿ ಅಜ್ಞಾನದ ಅಂಧಕಾರವನ್ನು ದೂರಮಾಡಿ ಅರಹಂತೆಯೂ ಆದಳು.
                ಕೆಲತಿಂಗಳ ನಂತರ ಆಕೆ ಅಂಧವನನವೆಂಬ ದಟ್ಟವಾದ ಕಾಡಿನಲ್ಲಿ ಏಕಾಂತ ಧ್ಯಾನಕ್ಕಾಗಿ ಹೊರಟಳು. ಆಗ ಆಕೆಯ ಚಿಕ್ಕಪ್ಪನ ಮಗನು ಆಕೆಯ ಮೇಲೆ ಅತ್ಯಾಚಾರ ಮಾಡಿದನು. ಆ ಕ್ಷಣದಲ್ಲೇ ಭೂಮಿಯಿಂದ ಸೀಳಿ ಮಹಾಗ್ನಿಯು ಆತನನ್ನು ಸೆಳೆದುಕೊಂಡು ಭೂಗರ್ಭದ ಅವೀಚಿ ನರಕಕ್ಕೆ ಕೊಂಡುಹೋಯಿತು.
                ನಂತರ ಈ ವಿಷಯವನ್ನು ಆಕೆಯು ಇತರ ಭಿಕ್ಷುಣಿಯರ ಬಳಿ ಹೇಳಿದಳು. ಅವರು ಭಿಕ್ಷುಗಳಿಗೆ ಈ ವಿಷಯ ತಿಳಿಸಿದಾಗ ಅವರು ಬುದ್ಧರಿಗೆ ಈ ವಿಷಯ ತಿಳಿಸಿದಾಗ ಭಗವಾನರು ಈ ಗಾಥೆಯನ್ನು ಹೇಳಿದರು. ನಂತರ ಹೀಗೆ ನುಡಿದರು : ಭಿಕ್ಷುಗಳೇ, ಯಾರೇ ಆಗಿರಲಿ ಪಾಪವನ್ನು ಮಾಡುವಾಗ ಅವರಿಗೆ ಜೇನಿನಂತೆ ಸಿಹಿ ಅನುಭವ ಉಂಟಾಗುವುದು. ಆದರೆ ನಂತರ ಅದರ ಕಹಿಕಟು ಫಲವನ್ನು ಅಪಾರವಾಗಿ ಅನುಭವಿಸುತ್ತಾರೆ ಎಂದು ಹೇಳಿ ಉತ್ಪಲಾವರ್ಣಳ ಪವಿತ್ರತೆಯ ಬಗ್ಗೆ ಹೀಗೆ ಹೇಳಿದರು:
                ಭಿಕ್ಷುಗಳೇ, ಈಕೆಯು ತನ್ನ ಕಲ್ಮಶಗಳನ್ನು ತೊಡೆದುಹಾಕಿದ್ದಾಳೆ. ಆಕೆಯಂಥವರು ಭಾವೋದ್ರೇಕವನ್ನು ಬಯಸುವುದಿಲ್ಲ. ಅದಕ್ಕೆ ತೃಣಮಾತ್ರವೂ ಹಾತೊರೆಯುವುದಿಲ್ಲ. ಲವಲೇಶವೂ ಅಂಟುವುದಿಲ್ಲ. ಹೇಗೆಂದರೆ ಕಮಲದ ಮೇಲಿನ ನೀರಿನ ಹನಿಯು ಅದಕ್ಕೆ ಅಂಟದೆ ಕೆಳಗೆ ಬೀಳುವ ಹಾಗೆ ಅರಹಂತರ ಮನವು ಸೂಕ್ಷ್ಮತರದಲ್ಲೂ ಕಲ್ಮಶಗಳಿಗೆ ಅಂಟುವುದಿಲ್ಲ ಎಂದರು.

                ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಯನ್ನು ಈ ಕೆಳಗಿನ ಪ್ರಸಂಗ ಕುರಿತಂತೆ ನುಡಿದರು.

No comments:

Post a Comment