Friday 6 February 2015

dhammapada/puppavagga/4.12/sirigutta

ಕಸದ ಕುಪ್ಪೆಯಲ್ಲಿದ್ದರೂ ಕಮಲವು ಮನೋಹರವೇ ಆಗಿರುತ್ತದೆ
ಹೇಗೆ ಹೆದ್ದಾರಿಯಲ್ಲಿ ಬಿಸಾಡಲ್ಪಟ್ಟ ಕಸದ ರಾಶಿಯಲ್ಲಿಯ ಪದ್ಮವು ಸುಪರಿಮಳ ಬೀರಿ ಮನೋಹರವಾಗಿ ಅರಳುವಂತೆ.      (58)
ಹಾಗೆಯೆ ಜೀವರಾಶಿಯ ನಡುವೆ ಅಂಥ ಜನಸಾಮಾನ್ಯರ ನಡುವೆಯಲ್ಲು ಸಮ್ಮಾಸಂಬುದ್ಧರ ಶ್ರಾವಕರು ತನ್ನ ಪ್ರಜ್ಞೆಯಿಂದಾಗಿ ಪ್ರಕಾಶಿಸುತ್ತಾರೆ. (59)
ಗಾಥ ಪ್ರಸಂಗ 4:12
ಭೂತ, ಭವಿಷ್ಯ ಮತ್ತು ವರ್ತಮಾನವನ್ನು ಅರಿತವರು ಯಾರು?

                ಸಿರಿಗುಟ್ಟ ಮತ್ತು ಗರಹದಿನ್ನರೆಂಬ ಇಬ್ಬರು ಮಿತ್ರರು ಶ್ರಾವಸ್ತಿಯಲ್ಲಿದ್ದರು. ಸಿರಿಗುಟ್ಟನು ಬುದ್ಧರ ಅನುಯಾಯಿಯಾದರೆ, ಗರಹದಿನ್ನ ನಿಗಂಠರ ಹಿಂಬಾಲಕನಾಗಿದ್ದನು. ನಿಗಂಠರು ಬುದ್ಧರ ಮೇಲೆ ಅಸೂಯೆ ತಾಳುತ್ತಿದ್ದರು. ಆದ್ದರಿಂದ ಅವರು ಗರಹದಿನ್ನನಿಗೆ ಸಿರಿಗುಟ್ಟನಿಗೂ ತಮ್ಮ ಅನುಯಾಯಿಯಾಗಿ ಮಾಡಬೇಕೆಂದು ಗರಹದಿನ್ನನಲ್ಲಿ ಕೇಳಿಕೊಂಡರು. ಆದ್ದರಿಂದ ಗರಹದಿನ್ನನು ಸಿರಿಗುಟ್ಟನಿಗೆ ಬುದ್ಧರನ್ನು ಹಿಂಬಾಲಿಸುವುದರಿಂದ ಏನು ಪ್ರಯೋಜನ? ನಮ್ಮ ಗುರುಗಳನ್ನು ಹಿಂಬಾಲಿಸು ಎನ್ನುತ್ತಿದ್ದನು. ಇದೇರೀತಿಯಲ್ಲಿ ಬಹಳ ಬಾರಿ ಬಲವಂತಗೈದಾಗ ಒಮ್ಮೆ ಸಿರಿಗುಟ್ಟ ಮೌನ ಮುರಿದು ನಿಮ್ಮ ಗುರುಗಳು ಏನೆನ್ನೆಲ್ಲಾ ಅರಿತಿರುವರು ತಿಳಿಸು ಎಂದನು.
                ಅದಕ್ಕೆ ಆತನು ನಮ್ಮ ಗುರುಗಳು ಭೂತ, ಭವಿಷ್ಯ ಮತ್ತು ವರ್ತಮಾನವೆಲ್ಲಾ ತಿಳಿದಿರುವರು. ಅವರಿಗೆ ತಿಳಿಯದಿರುವುದು ಯಾವುದು ಇಲ್ಲ ಎಂದನು. ಆಗ ಸಿರಿಗುಟ್ಟನು ನಿಗಂಠರಿಗೆ ಆಹಾರ ಆಹ್ವಾನ ನೀಡಿದನು.
                ಆದರೆ ಮನದಲ್ಲಿ ನಿಗಂಠರ ಸರ್ವಜ್ಞತೆ ತಿಳಿಯಬೇಕೆಂದು ಆತನು ಒಂದು ಉಪಾಯ ಮಾಡಿದನು. ಆತ ಒಂದು ಉದ್ದವಾದ ಕಂದಕ ತೋಡಿ ಅದರಲ್ಲಿ ಕಸ ಮತ್ತು ಕಶ್ಮಲಗಳನ್ನು ತುಂಬಿ ಯಾರಿಗೂ ಕಾಣದ ಹಾಗೆ ಅದನ್ನು ಮುಚ್ಚಿ ಅದರ ಮೇಲೆ ಪೀಠಗಳನ್ನು ಇಟ್ಟನು. ಯಾರಾದರೂ ಕುಳಿತರೆ ಸಾಕು ಅವರು ನೇರವಾಗಿ ಕಶ್ಮಲಗಳಿಂದ ಆವೃತವಾದ ಕಂದಕದಲ್ಲಿ ಬೀಳುತ್ತಿದ್ದರು. ಹಾಗೆಯೇ ಪೀಠಗಳ ಮುಂದೆ ಖಾಲಿ ಮಡಿಕೆಗಳನ್ನು ಇಟ್ಟು ಎಲೆಗಳಿಂದ, ಬಟ್ಟೆಗಳಿಂದ ಮುಚ್ಚಿದನು. ನೋಡುಗರಿಗೆ ಅದು ಆಹಾರ ತುಂಬಿದ ಮಡಿಕೆಗಳಾಗಿಯೇ ಕಾಣುತ್ತಿತ್ತು.
                ನಿಗಂಠರು ಬಂದಾಗ, ಅವರನ್ನು ಕಂಡು ಕೈಜೋಡಿಸಿ ಸಿರಿಗುಟ್ಟನು ಮನಸ್ಸಿನಲ್ಲೇ ಹೀಗೆ ಹೇಳಿಕೊಂಡನು ಪೂಜ್ಯರೇ, ನೀವು ಭೂತ, ಭವಿಷ್ಯ ಮತ್ತು ವರ್ತಮಾನವನ್ನು, ಪರರ ಚಿತ್ತವನ್ನು ಬಲ್ಲವರೇ ಆಗಿದ್ದರೆ, ನಿಮಗೆ ಇಲ್ಲಿ ಆಹಾರ ಸಿಗಲಾರದು, ನೀವು ಕಂದಕದಲ್ಲಿ ಬಿದ್ದು ಅಪಮಾನಿತರಾಗುವಿರಿ, ಆದ್ದರಿಂದ ನೀವು ಸರ್ವಜ್ಞರೇ ಆಗಿದ್ದರೆ ಹಿಂದಕ್ಕೆ ಹೊರಡಿ ಎಂದು ಕೇಳಿಕೊಂಡನು.
                ಆದರೆ ಏನೂ ಅರಿಯದ ನಿಗಂಠರು ಒಳಗೆ ಬಂದು ಪೀಠದಲ್ಲಿ ಕುಳಿತಿದ್ದೇ ತಡ ಕಂದಕದಲ್ಲಿ ಬಿದ್ದು ಅಪಮಾನಿತರಾದರು. ಆಗ ಸಿರಿಗುಟ್ಟನು ಹೀಗೆ ಹೇಳಿದನು ನೀವು ಭೂತ, ಭವಿಷ್ಯ ಮತ್ತು ವರ್ತಮಾನ ಬಲ್ಲಿದರೇ ಆಗಿದ್ದರೆ ಪರರ ಚಿತ್ತವನ್ನು ಮತ್ತು ನಿಮ್ಮ ಭವಿಷ್ಯವನ್ನು ನೀವು ಏಕೆ ಅರಿಯಲಿಲ್ಲ? ಅವರೆಲ್ಲಾ ಹೊರಟರು.
*    *    *
                ಇದರಿಂದಾಗಿ ಗರಹದಿನ್ನ ಕುಪಿತನಾದನು. ಆತನು ಸೇಡು ತೀರಿಸಿಕೊಳ್ಳಲು ಬಯಸಿದನು. ಅದಕ್ಕೆ ಉಪಾಯವೊಂದನ್ನು ಮಾಡಿದನು. ಆತನು ಸಹಾ ಬುದ್ಧರನ್ನು ಮತ್ತು ಭಿಕ್ಷು ಸಂಘವನ್ನು ಆಹಾರಕ್ಕೆ ಆಹ್ವಾನಿಸಿದನು. ಗರಹದಿನ್ನನು ಸಹಾ ಆಹಾರದ ಬದಲು ಖಾಲಿ ಮಡಿಕೆಗಳನ್ನು ಇಟ್ಟನು ಮತ್ತು ಆತನು ಮನೆಯಲ್ಲಿ ದೊಡ್ಡ ಕಂದಕ ತೋಡಿ ಅದರಲ್ಲಿ ಇದ್ದಿಲು ಹಾಕಿ ಬೆಂಕಿಯಿಟ್ಟ ಕೆಂಡದ ರಾಶಿ ಮಾಡಿ ಯಾರಿಗೂ ಕಾಣದಂತೆ ಚಾಪೆಗಳನ್ನು ಮೇಲೆ ಹಾಸಿಟ್ಟನು. ಯಾರಾದರೂ ಒಳಗೆ ಬಂದರೆ ನೇರವಾಗಿ ಕೆಂಡಕ್ಕೆ ಬಿದ್ದು ಆಹುತಿಯಾಗುತ್ತಿದ್ದರು.
                ಮಾರನೆಯದಿನ ಬುದ್ಧರು ಮತ್ತು ಭಿಕ್ಷು ಸಂಘವು ಅವರ ಮನೆಗೆ ಬಂದರು. ಬುದ್ಧರು ಮನೆಯೊಳಗೆ ಹೆಜ್ಜೆ ಇಟ್ಟ ಕ್ಷಣದಲ್ಲೇ ಚಾಪೆ, ಕೆಂಡವೆಲ್ಲಾ ಮಾಯವಾಗಿ, ಆ ಮನೆಯಷ್ಟು ದೊಡ್ಡದಾದ ಕಮಲವು ಸೃಷ್ಠಿಯಾಯಿತು. ಅದರಲ್ಲಿ ಬುದ್ಧರು ಮತ್ತು ಭಿಕ್ಷು ಸಂಘವು ಕುಳಿತರು.
                ಇದನ್ನು ಕಂಡ ಗರಹದಿನ್ನ ಗರಬಡಿದವನಂತೆ ಆಶ್ಚರ್ಯಚಕಿತನಾದನು. ಆತನು ಯಾವ ಅಡಿಗೆಯನ್ನು ಮಾಡಿರಲಿಲ್ಲ. ಆತ ವಿಷಯವೆಲ್ಲಾ ಸಿರಿಗುಟ್ಟನಿಗೆ ಹೇಳಿ ಏನು ಮಾಡುವುದೆಂದು ಆತ ಕೇಳಿದನು. ಆಗ ಸಿರಿಗುಟ್ಟನು ಹೋಗಿ ನಿನ್ನ ಪಾತ್ರೆಗಳನ್ನು ನೋಡಿಕೊ ಎಂದನು. ಆತ ನೋಡಿದಾಗ ಅದರಲ್ಲಿ ವಿಭಿನ್ನರೀತಿಯ ಆಹಾರ ಭಕ್ಷಗಳು ಇದ್ದವು. ಅದನ್ನು ಕಂಡು ಆಶ್ಚರ್ಯ ಆನಂದದಿಂದ ಆತ ಕೂಡಿ ಅದನ್ನೇ ಎಲ್ಲರಿಗೂ ಬಡಿಸಿದನು. ಆಗ ಬುದ್ಧರು ಆತನ ದಾನಕ್ಕೆ ಅನುಮೋದನಾ ಮಾಡಿದರು ಮತ್ತು ಹೀಗೆ ಹೇಳಿದರು. ದಡ್ಡ ಜನರು ಪ್ರಜ್ಞೆಯಿಲ್ಲದೆ ತ್ರಿರತ್ನದ ಅಮೂಲ್ಯ ಅನನ್ಯ ಗುಣಗಳನ್ನು ಅರಿಯಲಾರರು. ಆದ್ದರಿಂದ ಅವರು ಕುರುಡರಾಗಿದ್ದಾರೆ. ಆದರೆ ಜ್ಞಾನಿಗಳು ಪ್ರಜ್ಞೆಯುಳ್ಳವರಾಗಿ ದೃಷ್ಟಿಯುಳ್ಳವರಾಗಿದ್ದಾರೆ.
                ನಂತರ ಭಗವಾನರು ಹಂತಹಂತವಾಗಿ ಧಮ್ಮವನ್ನು ವಿವರಿಸಿದರು. ಎಲ್ಲರೂ ಆನಂದಭರಿತರಾದರು. ಪ್ರವಚನದ ಕೊನೆಯಲ್ಲಿ ಸಿರಿಗುಟ್ಟ ಮತ್ತು ಗರಹದಿನ್ನರಿಬ್ಬರು ಸೋತಪನ್ನರಾದರು.


                ಜೇತವನದಲ್ಲಿ ಭಿಕ್ಷುಗಳು ಕೆಂಡದ ಬದಲು ಕಮಲ ಅರಳಿದ್ದನ್ನು ಚಚರ್ಿಸುತ್ತಿದ್ದರು. ಆಗ ಭಗವಾನರು ಈ ಮೇಲಿನ ಗಾಥೆ ನುಡಿದರು.

No comments:

Post a Comment