Monday 18 May 2015

dhammapada/attavagga/12.8/kalabhikkhu

ಧಮ್ಮ ಹಳಿಯುವವರು ನಾಶದತ್ತ ಸಾಗುವ ಮೂರ್ಖರು
ಯಾವ ಅರಹಂತರ ಶಾಸನವನ್ನು, ಶ್ರೇಷ್ಠ ಆರ್ಯರನ್ನು, ಧಮ್ಮಜೀವನ ನಡೆಸುವವರನ್ನು ಮಿಥ್ಯಾದೃಷ್ಟಿಯಿಂದ ಕೂಡಿರುವ ದುಮರ್ೆಧ (ಮೂರ್ಖ) ಪಾಪಿಯು ಹಳಿಯುವನೋ ಆತನು ತನ್ನನ್ನೇ ನಾಶಮಾಡಲು ಹುಟ್ಟಿರುವ ಬಿದಿರಿನ ಬೀಜದಂತೆ ಸ್ವನಾಶವಾಗುತ್ತಾನೆ.         (164)
ಗಾಥ ಪ್ರಸಂಗ 12:8
ಕಾಲ ಭಿಕ್ಖುವಿನ ಕುಟಿಲತೆ

                ಶ್ರಾವಸ್ತಿಯಲ್ಲಿ ಶ್ರದ್ಧಾಳು ಸ್ತ್ರೀಯೊಬ್ಬಳು ಕಾಲನೆಂಬ ಸಮಣನನ್ನು ನೋಡಿ ಕೊಳ್ಳುತ್ತಿದ್ದಳು. ಆತನ ಅಗತ್ಯ ಪರಿಕರಗಳಿಗೆ ತೊಂದರೆ ಆಗದಂತೆ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಒಂದುದಿನ ಆಕೆಯ ನೆರೆಹೊರೆಯವರಿಂದ ಬುದ್ಧರ ಸದ್ಗುಣಗಳನ್ನು ತಿಳಿದುಕೊಂಡು, ಆಕೆಯು ಭಗವಾನರ ಬಳಿ ಬೋಧನೆ ಆಲಿಸಲು ಇಚ್ಛಿಸಿದಳು. ಹೀಗಾಗಿ ಆಕೆಯು ಕಾಲನಿಗೆ ಈ ವಿಷಯ ತಿಳಿಸಿದಳು. ಆದರೆ ಆತನು ಆಕೆಗೆ ಅದರ ವಿರುದ್ಧವೇ ಬುದ್ಧಿವಾದ ನೀಡಿದನು. ಹೀಗೆ ಆಕೆಯು ಮೂರುಬಾರಿ ಪ್ರಯತ್ನಿಸಿದಾಗಲು ಆತನು ಹಾಗೆಯೇ ನಿರುತ್ಸಾಹಗೊಳಿಸಿ ಹೋಗದಂತೆ ತಡೆಯುತ್ತಿದ್ದನು.
                ಆದರೆ ಒಂದುದಿನ ಆಕೆಯು ಆತನ ಅಡ್ಡಿಯ ಬೋಧನೆ ಲೆಕ್ಕಿಸದೆ ಜೇತವನಕ್ಕೆ ಹೊರಟೇಬಿಟ್ಟಳು. ಈ ವಿಷಯ ತಿಳಿದುಕೊಂಡು ಕಾಲನು ಹೀಗೆ ಯೋಚಿಸಿದನು. ಆಕೆಯೇನಾದರೂ ಅಲ್ಲಿಗೆ ಹೋಗಿ ಬೋಧನೆ ಆಲಿಸಿಬಿಟ್ಟರೆ, ನನ್ನ ಮೇಲೆ ಭಕ್ತಿ ಅಳಿಸಿಹೋಗಿ ನನಗೆ ಊಟಕ್ಕೆ ತೊಂದರೆಯಾಗಬಹುದು. ಹೀಗಾಗಿ ಆತನು ಆತುರ ವೇಗದಿಂದ ಆಕೆಯನ್ನು ಹುಡುಕುತ್ತ ವಿಹಾರಕ್ಕೆ ಬಂದುಬಿಟ್ಟನು. ಅಲ್ಲಿ ಆಕೆ ಬುದ್ಧ ಭಗವಾನರಿಂದ ಬೋಧನೆ ಆಲಿಸುತ್ತಿರುವುದು ಕಂಡುಬಂದಿತು. ಆಗ ಕಾಲನು ಭಗವಾನರ ಬಳಿಗೆ ಬಂದು ಗೌರವದಿಂದ ವಂದಿಸಿದನು, ನಂತರ ಹೀಗೆ ಕೇಳಿಕೊಂಡನು: ಭಗವಾನ್, ಈ ಸ್ತ್ರೀಯು ಮಂದ್ರಗ್ರಹಿಕೆಯವಳು, ಅಷ್ಟಾಗಿ ಪ್ರಜ್ಞಾವಂತಳಲ್ಲ. ಹೀಗಾಗಿ ಆಕೆಯು ತಮ್ಮ ಗಂಭೀರ ಧಮ್ಮವನ್ನು ಅರಿಯಲು ಸಮರ್ಥಳಾಗಿಲ್ಲ; ಆದ್ದರಿಂದ ಆಕೆಗೆ ಕೇವಲ ದಾನ ಮತ್ತು ಶೀಲದ ಬಗ್ಗೆ ಬೋಧಿಸಿರಿ.

                ಆತನ ಈ ಮಾತುಗಳು ಅವುಗಳ ಹಿಂದಿನ ನಿಜ ಅರ್ಥವನ್ನು ಭಗವಾನರು ಕ್ಷಿಪ್ರವಾಗಿ ಅರ್ಥಮಾಡಿಕೊಂಡರು. ನಂತರ ಆತನಿಗೆ ಹೀಗೆ ಹೇಳಿದರು: ಓ ಸಮಣನೇ, ನಿನ್ನ ದಡ್ಡತನದಿಂದಾಗಿ ಮತ್ತು ನಿನ್ನ ಮಿಥ್ಯಾದೃಷ್ಟಿಗಳಿಂದಾಗಿ ನೀನು ನನ್ನ ಧರ್ಮವನ್ನು ಹಳಿಯುತ್ತಿರುವೆ. ನಿನ್ನ ಈ ಧೋರಣೆಯಿಂದ ನೀನು ಸ್ವ-ನಾಶದೆಡೆಗೆ ಸಾಗುತ್ತಿರುವ, ನಿಜವಾಗಿಯೂ ನೀನು ನಿನ್ನ ನಾಶವನ್ನು ಸ್ವಯಂ ಮಾಡಿಕೊಳ್ಳುತ್ತಿರುವೆ ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. ಆಗ ಪ್ರವಚನದ ಅಂತ್ಯದಲ್ಲಿ ಆ ಸ್ತ್ರೀಯು ಸೋತಾಪನ್ನಳಾದಳು. 

No comments:

Post a Comment