Friday 8 May 2015

dhammapada/jaravagga/11.1/visakafriends

11.ಜರಾ ವಗ್ಗ

ನೀವು ಬೆಳಕನ್ನು ಹುಡುಕುವುದಿಲ್ಲವೇ ?
ಈ ನಗು ಏತರದು? ಈ ಆನಂದ ಯಾವ ತರಹದ್ದು? ನಿತ್ಯವು ಜಗ ಪ್ರಜ್ವಲಿಸುತ್ತಿರುವಾಗ ಅಂಧಕಾರದಲ್ಲಿ ಅಡಗಿಹೋಗಿರುವ ನೀನು ಹೊಂಬೆಳಕನ್ನು ಹುಡುಕುವುದಿಲ್ಲವೇ?                (146)
ಗಾಥ ಪ್ರಸಂಗ 11:1
ವಿಶಾಖಳ ಕುಡುಕ ಸಖಿಯರು

                ಶ್ರಾವಸ್ತಿಯಲ್ಲಿದ್ದ 500 ಜನರಿಗೆ ತಮ್ಮ ಪತ್ನಿಯರನ್ನು ಆದರ್ಶ ಸ್ತ್ರೀಯಾದ ವಿಶಾಖಳಂತೆ, ದಾನಿಯು, ಶೀಲವಂತೆಯು, ದಯಾಳು ಹಾಗು ಪ್ರಜ್ಞಾವಂತಳಾಗಿ ಮಾರ್ಪಡಿಸಲು ನಿರ್ಧರಿಸಿದರು. ಆದ್ದರಿಂದ ಅವರು ಉಪಾಯ ಮಾಡಿ, ಅವರ ಹೆಂಡತಿಯರನ್ನು ವಿಶಾಖಳ ಸಖಿಯನ್ನಾಗಿಸಿದರು. ಅದೇ ಸಮಯದಲ್ಲಿ ಏಳು ದಿನಗಳ ಕಾಲ ನಡೆಯುವ ಕುಡುಕರ ಹಬ್ಬ ಆರಂಭವಾಯಿತು.
                ಆ ದಿನ ವಿಶಾಖಳ ಸಖಿಯರು, ಆಕೆಯನ್ನು ಉದ್ಯಾನವನಕ್ಕೆ ಆಹ್ವಾನಿಸಿದರು. ಆದರೆ ವಿಶಾಖಳಿಗೆ ತಿಳಿಯದಂತೆ ಅವರು ಸುರ, ಮೆರೆಯ, ಮದ್ಯ, ಮದಿರೆ ಮುಂತಾದ ಮದ್ಯ ಪಾನೀಯಗಳನ್ನು ತಂದಿದ್ದರು. ಹಾಗು ಅವರು ಅವನ್ನೆಲ್ಲಾ ಕುಡಿದುಬಿಟ್ಟರು. ಅವೆಲ್ಲಾ ಅವರ ಗಂಡಂದಿರು ಕುಡಿದು ಉಳಿದಿದ್ದಂತಹ ಪಾನೀಯಗಳಾಗಿದ್ದವು. ಕುಡಿತದ ಪರಿಣಾಮದಿಂದಾಗಿ ಅವರೆಲ್ಲಾ ಅಸಭ್ಯವಾಗಿ ಪ್ರವತರ್ಿಸಿದರು. ಇದರಿಂದಾಗಿ ವಿಶಾಖಳಿಗೆ ಅತಿ ಮುಜುಗರವಾಯಿತು. ಇದೆಲ್ಲಾ ಅವರ ಗಂಡಂದಿರಿಗೆ ಗೊತ್ತಾಗಿ ಅವರಿಂದ ಪೆಟ್ಟುಗಳನ್ನು ಸಹಾ ತಿಂದರು. ಶೀಲವಂತೆಯಾದ ವಿಶಾಖೆಯು ಕನಿಕರಪಟ್ಟಳು.

                ಇನ್ನೊಮ್ಮೆ ಅವರೆಲ್ಲ ವಿಶಾಖೆಗೆ ಜೇತವನ ವಿಹಾರಕ್ಕೆ ಕೊಂಡೊಯ್ಯುವಂತೆ ಕೇಳಿಕೊಂಡರು. ಅಲ್ಲಿ ಬುದ್ಧರಿಗೆ ವಂದಿಸಲು ಹಾಗು ಧಮ್ಮ ಶ್ರಮಣ ಮಾಡುತ್ತೇವೆ ಎಂದಾಗ ವಿಶಾಖೆಯು ಒಪ್ಪಿ ಅವರೊಡನೆ ನಡೆಯುತ್ತಿರುವಾಗ, ಅವರು ರಹಸ್ಯವಾಗಿ ತಾವು ತಂದಿದ್ದ ಮಾದಕ ಪಾನಿಯಗಳನ್ನು ಮಾರ್ಗ ಮಧ್ಯದಲ್ಲೇ ಸೇವಿಸಿದರು. ಆದರೆ ವಿಶಾಖಳಿಗೆ ಇದ್ಯಾವುದೂ ತಿಳಿಯಲಿಲ್ಲ. ಆದರೆ ಜೇತವನಕ್ಕೆ ಪ್ರವೇಶಿಸುತ್ತಿರುವಾಗಲೇ ಅವರಿಗೆ ಮತ್ತೇರಿತ್ತು. ಇದರಿಂದಾಗಿ ವಿಶಾಖೆಯು ನೊಂದುಕೊಂಡಳು. ಆಕೆಯು ಭಗವಾನರ ಬಳಿಗೆ ಬಂದು ಅವರನ್ನೆಲ್ಲಾ ಸರಿಹಾದಿಗೆ ತರಬೇಕೆಂದು ಪ್ರಾಥರ್ಿಸಿದಳು.

                ಅದೇವೇಳೆ ಮಾರನು ಆ ಸ್ತ್ರೀಯರಿಗೆ ಸಮ್ಮೋಹನಗೊಳಿಸಿ, ನಿರ್ಲಜ್ಜಗೊಳಿಸಿದನು. ಪರಿಣಾಮವಾಗಿ ಅವರು ಹಾಡುವುದು, ನತರ್ಿಸುವುದು, ಚಪ್ಪಾಳೆ ತಟ್ಟುವುದು ಹಾಗು ಕುಣಿದು ಕುಪ್ಪಳಿಸಲು ಆರಂಭಿಸಿದರು. ಆಗ ಭಗವಾನರು ಮಾರನಿಗೆ ಅವಕಾಶ ನೀಡಲಾರೆ ಎಂದು ನಿರ್ಧರಿಸಿದರು. ನಂತರ ಭಗವಾನರು ತಮ್ಮ ಹುಬ್ಬಿನ ಕೂದಲಿನಿಂದ ಕಡುನೀಲಿ ಬಣ್ಣದ ಕಿರಣವನ್ನು ಹೊರಸೂಸಿ ಇಡೀ ಜೇತವನ ಕತ್ತಲೆಯಾವರಿಸುವಂತೆ ಮನಶ್ಶಕ್ತಿ ಪ್ರಯೋಗಿಸಿದರು. ತಕ್ಷಣ ಎಲ್ಲೆಲ್ಲೂ ಕತ್ತಲೆ ಆವರಿಸಿತು. ಆಗ ಆ ಸ್ತ್ರೀಯರೆಲ್ಲ ಅತಿ ಭೀತಿಗೊಂಡರು ಹಾಗು ಅಳಲು ಆರಂಭಿಸಿದರು. ತಕ್ಷಣ ಅವರ ಮತ್ತೆಲ್ಲಾ ಇಳಿದುಹೋಯಿತು. ನಂತರ ಭಗವಾನರು ತಮ್ಮ ಪೀಠದಿಂದ ಅದೃಶ್ಯರಾದರು. ಹಾಗು ಮೇರು ಪರ್ವತದ ತುದಿಯಲ್ಲಿ ನಿಂತರು. ಅಲ್ಲಿಂದ ಶ್ವೇತವರ್ಣದ ಕಿರಣಗಳನ್ನು ಹೊರಹೊಮ್ಮಿಸಿದರು. ಆಗ ಇಡೀ ನಭವೆಲ್ಲಾ ಸಾವಿರ ಚಂದಿರಗಳು ಒಂದಾಗಿರುವಂತಹ ಭವ್ಯ ಪ್ರಕಾಶದಿಂದ ಕೂಡಿಹೋಯಿತು. ಹೀಗೆ ತಮ್ಮ ಬಲಗಳನ್ನು ಸ್ಥಾಪಿಸಿ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ನಂತರ ಹೀಗೆ ಹೇಳಿದರು: ಓ ಸ್ತ್ರೀಯರೇ, ನೀವು ಸ್ಮೃತಿಹೀನರಾದ ಸ್ಥಿತಿಯಲ್ಲಿ ವಿಹಾರಕ್ಕೆ ಬರಬೇಡಿ, ನಿಮ್ಮ ನಿರ್ಲಕ್ಷ ಸ್ಥಿತಿಯಲ್ಲಿ ಲಜ್ಜೆಹೀನ ಪ್ರವೃತ್ತಿಗಳಾದ ಅಸಭ್ಯ ನೃತ್ಯಗೀತೆ ಇತ್ಯಾದಿಗಳು ಹೊರಹೊಮ್ಮಿದಾಗ ವಿಹಾರವು ಕಲುಶಿತವಾಗುತ್ತದೆ. ನೀವೀಗ ರಾಗದ ಬಂಧನಗಳಿಂದ ಮುಕ್ತರಾಗಲು ಶ್ರಮಿಸಿ ಎಂದೆಲ್ಲಾ ಬೋಧಿಸಿದಾಗ ಅಂತ್ಯದಲ್ಲಿ ಆ ಸ್ತ್ರೀಯರೆಲ್ಲರೂ ಸೋತಪತ್ತಿಫಲ ಪಡೆದರು. 

No comments:

Post a Comment