Saturday 6 June 2015

dhammapada/buddhavagga/14.9/kassapabuddha

ಪೂಜ್ಯಾರ್ಹರ ಪೂಜೆ ಪರಮ ಪುಣ್ಯಕಾರಿ
ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅವರ ಶ್ರಾವಕರನ್ನು ಪಾಪ ತಡೆಗಳನ್ನು ಮತ್ತು ಶೋಕ ಪ್ರಲಾಪಗಳೆಲ್ಲವನ್ನು ದಾಟಿದವರನ್ನು ಪೂಜಿಸುವರೋ       (195)
ಅಂತಹ ಪುಣ್ಯಶಾಲಿಯ ಪುಣ್ಯವನ್ನು ಅಂದರೆ ಯಾವ ಪರಮಶಾಂತರನ್ನು ಮತ್ತು ಅಭಯರನ್ನು ಪೂಜಿಸುವರೋ ಆತನ ಪುಣ್ಯವನ್ನು ಯಾವುದರಿಂದಲೂ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ.                (196)
ಗಾಥ ಪ್ರಸಂಗ 14:9
ಕಸ್ಸಪ ಬುದ್ಧ ಭಗವಾನರ ಸುವರ್ಣ ಸ್ತೂಪ


                ಒಮ್ಮೆ ಬುದ್ಧ ಭಗವಾನರು ಶ್ರಾವಸ್ತಿಯಿಂದ ವಾರಣಾಸಿಗೆ ಅಪಾರ ಶಿಷ್ಯ ಸಮೂಹದೊಂದಿಗೆ ಹೋಗುತ್ತಿದ್ದರು. ಆಗ ಮಾರ್ಗದಲ್ಲಿ ತೊದೆಯ್ಯ ಹಳ್ಳಿಯ ಬಳಿ ಚೈತ್ಯವೊಂದಿತ್ತು. ಅಲ್ಲಿ ಭಗವಾನರು ಕುಳಿತಿದ್ದರು. ಆಗ ಭಗವಾನರು ಪಕ್ಕದ ಹೊಲದಲ್ಲಿ ಮಣ್ಣನ್ನು ಸಮಗೊಳಿಸುತ್ತಿದ್ದ ಬ್ರಾಹ್ಮಣನನ್ನು ಆನಂದರ ಮುಖಾಂತರ ಕರೆಸಿದರು. ಆತನು ಭಗವಾನರ ಬಳಿಗೆ ಬಂದು ಭಗವಾನರಿಗೆ ವಂದಿಸಲಿಲ್ಲ. ಬದಲಾಗಿ ಆ ಚೈತ್ಯಕ್ಕೆ ವಂದಿಸಿದನು. ನಂತರ ಭಗವಾನರ ಬಳಿಯಲ್ಲಿ ನಿಂತನು. ಆಗ ಭಗವಾನರು ಆ ಬ್ರಾಹ್ಮಣನನ್ನು ಕುರಿತು ಹೀಗೆ ಹೇಳಿದರು: ಓ ಬ್ರಾಹ್ಮಣ, ಚೈತ್ಯಕ್ಕೆ ವಂದನೆ ಮಾಡಿ ನೀನು ನಿಜಕ್ಕೂ ಉತ್ತಮವಾದುದನ್ನೇ ಮಾಡಿರುವೆ, ಈ ಸ್ಥಳಕ್ಕೆ ನೀನು ಏತಕ್ಕಾಗಿ ವಂದಿಸುತ್ತಿರುವೆ?
                ಆಗ ಆ ಬ್ರಾಹ್ಮಣನು ಅದಕ್ಕೆ ಹೀಗೆ ಉತ್ತರಿಸಿದನು. ಈ ಚೈತ್ಯವು ನಮಗೆ ತಲತಲಾಂತರಗಳಿಂದ ಬಂದಿದೆ. ಆದ್ದರಿಂದಲೇ ನಾನು ಇದನ್ನು ಪೂಜಿಸುತ್ತಿರುವೆ ಭಂತೆ ಎಂದನು.
                ಆಗ ಭಿಕ್ಷುಗಳಿಗೆ ಆಶ್ಚರ್ಯವಾಯಿತು, ಸಂಶಯಕ್ಕೆ ಗುರಿಯಾದರು. ಭಗವಾನರ ಧಮ್ಮವನ್ನು ಆಲಿಸಿ ನಾವೆಲ್ಲ ಈ ಚೈತ್ಯಗಳಿಗೆ ವಂದನೆ ಮಾಡುವುದನ್ನು ಬಿಟ್ಟುಬಿಟ್ಟಿರುವೆವು. ಕೇವಲ ಶೀಲ, ಸಮಾಧಿ ಪ್ರಜ್ಞೆ ಪಾಲಿಸುತಿಹೆವು. ಆದರೂ ಭಗವಾನ್ ಏತಕ್ಕಾಗಿ ಹೀಗೆ ಹೇಳಿದರು? ಆತನ ಸಂಪ್ರದಾಯಕ್ಕೆ ಏತಕ್ಕೆ ಪ್ರಶಂಸಿಸಿದರು, ಸುಸಂಪ್ರದಾಯಕ್ಕೆ ಪ್ರಶಂಸೆ ಒಳ್ಳೆಯದಿರುವುದೇ? ಎಂದು ಸಂದೇಹಿಸುತ್ತಾ ಅವರು ಭಗವಾನರೊಂದಿಗೆ ಹೀಗೆ ಕೇಳಿದರು: ಭಗವಾನ್, ಯಾವ ಕಾರಣದಿಂದಾಗಿ, ತಾವು ಪ್ರಶಂಸಿದ್ದೀರಿ ತಿಳಿಯಲಿಲ್ಲ ಎಂದರು. ಆಗ ಭಗವಾನರು ಘಟಿಕಾರ ಸುತ್ತವನ್ನು (ಮಜ್ಝಿಮನಿಕಾಯ) ಬೋಧಿಸಿದರು. ಆ ಸುತ್ತದಲ್ಲಿ ಕಸ್ಸಪ ಸಮ್ಮಾಸಂಬುದ್ಧರ ಪ್ರಸ್ತಾಪ ಬರುವುದು ಮತ್ತು ಘಟಿಕಾರ ಕುಂಬಾರನ ಶ್ರದ್ಧಾಶೀಲತೆಯ ವಿವರಣೆಯಿದೆ. ಅಷ್ಟೇ ಅಲ್ಲ, ಆಗ ನಮ್ಮ ಬುದ್ಧರು ಜ್ಯೋತಿಪಾಲ ಎಂಬ ಹೆಸರಿನ ಬೋಧಿಸತ್ವರಾಗಿದ್ದರು. ಹಾಗು ಘಟಿಕಾರನ ಸ್ನೇಹಿತರಾಗಿದ್ದರು. ಇದನ್ನೆಲ್ಲಾ ಭಗವಾನರು ನೆನಪಿಸಿಕೊಂಡರು. ಪೂಜಾರ್ಹರನ್ನು ಪೂಜಿಸುವುದರಿಂದಾಗುವ ಲಾಭಗಳನ್ನು ತಿಳಿಸಿದರು. ನಂತರ ಭಗವಾನರು ತಮ್ಮ ಅತಿಮಾನಸ ಶಕ್ತಿಯಿಂದಾಗಿ ಕಸ್ಸಪ ಬುದ್ಧರ ಸುವರ್ಣ ಚೈತ್ಯವನ್ನು ಆಕಾಶದಲ್ಲಿ ಸೃಷ್ಟಿಸಿದರು. ಅದು ಒಂದು ಯೋಜನದಷ್ಟು ಎತ್ತರವಾಗಿತ್ತು. ಅದನ್ನು ಗಮನಿಸಿದ ಎಲ್ಲರೂ ಭಕ್ತಿ ಶ್ರದ್ಧಾ ಭಾವದಿಂದ ಕೂಡಿದರು. ನಂತರ ಭಗವಾನರು ನಾಲ್ಕುಬಗೆಯ ವ್ಯಕ್ತಿಗಳು ಸ್ತೂಪಕ್ಕೆ ಅರ್ಹರು ಎಂದು ಹೇಳಿದರು. ಅವರೆಂದರೆ: 1) ಬುದ್ಧ ಭಗವಾನರು, 2) ಪಚ್ಚೇಕ ಬುದ್ಧರು 3) ಆರ್ಯ ಶಿಷ್ಯರು (ಅರಹಂತರು, ಅನಾಗಾಮಿ, ಸಕದಾಗಾಮಿ ಮತ್ತು ಸೋತಪನ್ನರು) ಮತ್ತು 4) ಚಕ್ರವತರ್ಿಗಳು. ನಂತರ ಭಗವಾನರು ಶ್ರದ್ಧಾಳುಗಳು ಮೂರು ಬಗೆಯ ಸ್ತೂಪಗಳಿಂದ ಪೂಜಿಸುತ್ತಾರೆ ಎಂದು ವಿವರಿಸಿದರು. ಆ ಮೂರು ಬಗೆಯ ಸ್ತೂಪಗಳಾವುವು ಎಂದರೆ 1) ಸರೀರಧಾತು ಚೇತಿಯ (ಶಾರೀರಿಕ  ಅಸ್ಥಿಯ ಧಾತುವಿನ ಚೈತ್ಯ) 2) ಉದ್ದಿಸ್ಸ ಚೇತಿಯ (ಬುದ್ಧರ ಶಾರೀರಿಕ ಆಕೃತಿಯ ವಿಗ್ರಹ, ಭಾವಚಿತ್ರ ಇವು ಉದ್ದಿಸ್ಸ ಚೇತಿಯ ಎಂದು ಕರೆಯಲ್ಪಡುತ್ತದೆ.) (ಅಂದರೆ ಮೇಲಿನ ಸ್ತೂಪಕ್ಕೆ ಅರ್ಹರಾದ ನಾಲ್ಕು ವ್ಯಕ್ತಿಗಳ ಆಕೃತಿ (ವಿಗ್ರಹ)ಗಳಿಗೆ ಸ್ತೂಪಕ್ಕೆ ಉದ್ದಿಸ್ಸ ಚೇತಿಯ ಎನ್ನುತ್ತಾರೆ.) 3) ಪರಿಬೋಗ ಚೇತಿಯಾ (ಅಂದರೆ ಬುದ್ಧ ಭಗವಾನರು ಬಳಸಿದಂತಹ ಚೀವರ, ಪಿಂಡಪಾತ್ರೆ, ಸೂಜಿ, ಬೋಧಿವೃಕ್ಷ ಇವೆಲ್ಲಾ ಪರಿಭೋಗ ಚೇತಿಯವಾಗಿದೆ.)



                ಈ ರೀತಿಯ ಮೂರು ಬಗೆಯ ಚೇತಿಯಾಗಳು ಪೂಜಾರ್ಹವಾಗಿದೆ ಎಂದು ಭಗವಾನರು ನುಡಿದರು. ನಂತರ ಭಗವಾನರು ಬಾಹ್ಮಣನೇ, ಪೂಜ್ಯತೆಗೆ ಅರ್ಹರಾಗಿರುವವರಿಗೆ ಪೂಜಿಸುವುದು ಕುಶಲ ಕಾರ್ಯವಲ್ಲವೆ? ಎಂದು ನುಡಿದು ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಆಗ ಬ್ರಾಹ್ಮಣನು ಸೋತಪತ್ತಿಫಲ ಪಡೆದನು. ಕಸ್ಸಪ ಬುದ್ಧ ಭಗವಾನರ ಸ್ತೂಪವು ಏಳು ದಿನಗಳ ಕಾಲ ಎಲ್ಲರಿಗೂ ಕಾಣಿಸುತ್ತಿತ್ತು. ಜನರೆಲ್ಲಾ ಅದಕ್ಕೆ ಪೂಜಿಸುತ್ತಿದ್ದರು. ಏಳು ದಿನಗಳ ನಂತರ ಆ ಸೂಪವು ಆಕಾಶದಿಂದ ಅದೃಶ್ಯವಾಯಿತು. ಆಗ ಜನರು ಆ ಸ್ತೂಪದ ನೆನಪಿಗೋಸ್ಕರ ದೊಡ್ಡ ಕಲ್ಲಿನ ಸ್ತೂಪವನ್ನು ಕಟ್ಟಿಸಿದರು.

No comments:

Post a Comment