Friday 26 June 2015

dhammapada/piyavagga/16.8/master

ಅಂಟಿಕೊಳ್ಳದವರೇ ಪರಮಾರ್ಥದಲ್ಲಿ ಉನ್ನತರು
"ಯಾರು ವಿವರಿಸಲಾಗದ್ದನ್ನು (ನಿಬ್ಬಾಣ) ಸಾಧಿಸಲು
ಪ್ರಬಲ ಆಕಾಂಕ್ಷಿಯೋ, ಮನಸ್ಸಿನಿಂದ
ಲೋಕೋತ್ತರ ಫಲಗಳನ್ನು ಅರಿತಿರುವವನೋ,
ಯಾರ ಚಿತ್ತವು ಕಾಯೋಪಭೋಗಗಳಲ್ಲಿ ಅಂಟುವುದಿಲ್ಲವೋ
ಅಂತಹವನ್ನು ಊಧ್ರ್ವ ಶ್ರೋತೃ (ಪ್ರವಾಹದ ಎದುರಾಗಿ ಸಾಗುವವ) ಎನ್ನುತ್ತೇನೆ.                (218)

ಗಾಥ ಪ್ರಸಂಗ 16:8
ನಮ್ಮ ಗುರುವು ಎಲ್ಲಿ ಜನಿಸಿಹರು ?

            ಒಬ್ಬ ಹಿರಿಯ ಭಿಕ್ಷುವು ತನ್ನ ಅನೇಕ ಶಿಷ್ಯರೊಂದಿಗೆ ಇದ್ದನು. ಒಮ್ಮೆ ಆತನ ಶಿಷ್ಯರು ಆತನ ಬಳಿಗೆ ಬಂದು "ತಾವು ಯಾವುದಾದರೂ ಲೋಕೋತ್ತರ ಮಾರ್ಗಫಲಗಳನ್ನು ಪಡೆಯುವಿರಾ?" ಎಂದು ಪ್ರಶ್ನಿಸಿದರು. ಆ ಹಿರಿಯ ಭಿಕ್ಷುವು ಆಗಲೇ ಮೂರು ಲೋಕೋತ್ತರ ಮಾರ್ಗ ಫಲಗಳನ್ನು ಪಡೆದಿದ್ದನು. ಆದರೆ ಅರಹಂತ ಫಲ ಮಾತ್ರ ಪಡೆದಿರಲಿಲ್ಲ. ಹೀಗಾಗಿ ಆತನಿಗೆ ತಾನಿನ್ನೂ ಅರಹಂತನಾಗಿಲ್ಲವಲ್ಲ ಎಂಬ ನಾಚಿಕೆಯಿಂದ ನಿರುತ್ತರನಾದನು. ಆದರೆ ಆತನ ಶಿಷ್ಯರು ಆತನನ್ನು ಯಾವುದೇ ಮಾರ್ಗಫಲ ಪಡೆದಿಲ್ಲ ಎಂದೇ ಭಾವಿಸಿದರು. ಆದರೆ ಅಷ್ಟರಲ್ಲಿ ಆ ಗುರುವು  ಮೃತ್ಯುವಶವಾದನು.
            ಆತನ ಶಿಷ್ಯರು ತಮ್ಮ ಗುರುಗಳು ಏನೊಂದು ಸಾಧಿಸದೆ ಮರಣವಪ್ಪಿದ್ದರಲ್ಲ ಎಂದು ಶೋಕಿಸುತ್ತ, ಕೊನೆಗೆ ಆತನು ಸುಗತಿಯನ್ನಾದರೂ ಪಡೆದಿರಬಹುದೇ? ಎಂದು ವಿಚಾರಿಸಲು ಭಗವಾನರ ಬಳಿ ಬಂದು "ನಮ್ಮ ಗುರುವು ಎಲ್ಲಿ ಜನಿಸಿಹರು?" ಎಂದು ಕೇಳಿದರು.
            ಆಗ ಭಗವಾನರು "ಭಿಕ್ಷುಗಳೇ, ನಿಮ್ಮ ಗುರುವು ಸಾವಿಗೆ ಮುನ್ನವೇ ಅನಾಗಾಮಿಯಾಗಿದ್ದರು. ಈಗ ಶುದ್ಧವಾದ ಬ್ರಹ್ಮಲೋಕದಲ್ಲಿಹರು. ಅವರು ಅರಹಂತರಾಗಿಲ್ಲದ ಕಾರಣ ನಾಚಿಕೆಯಿಂದ ಸಾಧಿಸಿ ಹೇಳೋಣವೆಂದು ಸುಮ್ಮನಿದ್ದರು. ಅವರು ಕಾಮಲೋಕದಿಂದಲೇ ಮುಕ್ತರಾಗಿದ್ದಾರೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.


No comments:

Post a Comment