Friday 19 June 2015

dhammapada/sukhavagga/15.3/pasenadi

ಜಯ ಪರಾಜಯಗಳನ್ನು ಮೀರಿ ಹೋಗಿ
"ಜಯವು ವೈರವನ್ನು ವೃದ್ಧಿಸುತ್ತದೆ,
ಪರಾಜಯಿಯು ದುಃಖದಿಂದ ಜೀವಿಸುತ್ತಾನೆ,
ಉಪಶಾಂತನು ಜಯ ಪರಾಜಯಗಳನ್ನು ಲೆಕ್ಕಿಸದೆ
ಮೀರಿ ಹೋಗಿ ಸುಖವಾಗಿ ವಿಹರಿಸುತ್ತಾನೆ."   (201)
ಗಾಥ ಪ್ರಸಂಗ 15:3
ಪಸೇನದಿಯ ಪರಾಜಯಕ್ಕೆ ಪರಿಹಾರ


            ಕೋಸಲ ದೇಶದ ಮಹಾರಾಜ ಪಸೇನದಿಯು ತನ್ನ ತಂಗಿ ವೇದೇಹಿ ಮತ್ತು ಮಹಾರಾಜ ಬಿಂಬಿಸಾರನಿಗೆ ಹುಟ್ಟಿದ ಅಜಾತಶತ್ರುವಿನಿಂದ ಯುದ್ಧದಲ್ಲಿ ಮೂರುಬಾರಿ ಸೋತುಹೋದನು. ಇದರಿಂದಾಗಿ ಮಹಾ ಅಪಮಾನಗೊಂಡ ಪಸೇನದಿಯು ಅತಿಯಾಗಿ ಪಶ್ಚಾತ್ತಾಪಪಟ್ಟನು. ಆತನು ಹೀಗೆ ಪ್ರಲಾಪಪಡುತ್ತಿದ್ದನು "ಎಂಥಹ ಅಪಮಾನ! ಛೇ, ನಾನು ಈ ಬಾಲಕನನ್ನು ಗೆಲ್ಲಲಿಲ್ಲವಲ್ಲ. ತಾಯಿಯ ಹಾಲಿನ ವಾಸನೆಯನ್ನು ಅಘ್ರಾಣಿಸುತ್ತಿರುವ, ತೀರ ಚಿಕ್ಕವನಾದ ಈ ಬಾಲಕನಿಂದ ನನಗೆ ಸೋಲೇ, ಧಿಕ್ಕಾರವಿರಲಿ ನನಗೆ. ಈ ರೀತಿಯ ಸೋಲಿನ ಜೀವನಕ್ಕಿಂತ ನಾನು ಸತ್ತುಹೋಗಿದ್ದರೆ ಚೆನ್ನಾಗಿರುತ್ತಿತ್ತು."

            ಈ ರೀತಿಯ ಖಿನ್ನತೆ ಮತ್ತು ಒತ್ತಡದಿಂದ ಇದ್ದಂತಹ ರಾಜನು ಆಹಾರವನ್ನು ಸೇವಿಸಲಿಲ್ಲ. ಬಹುಪಾಲು ಹಾಸಿಗೆ ಹಿಡಿದನು. ಆದರೆ ಇಂತಹ ಸುದ್ದಿಯೇ ಶೀಘ್ರವಾಗಿ ಹಬ್ಬುತ್ತದೆ. ಈ ಸುದ್ದಿಯು ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇದೇ ಸುದ್ದಿಯನ್ನು ಭಿಕ್ಷುಗಳು ಚಚರ್ಿಸತೊಡಗಿದರು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಈ ಗಾಥೆಯನ್ನು ಗುಪ್ತಚರರು ಪಸೇನದಿಗೆ ತಲುಪಿಸಿದರು. ಆಗ ಆ ಗಾಥೆಯ ಸಾರಯುತ ಮೌಲ್ಯವನ್ನು ಗ್ರಹಿಸಿದ ನಂತರ, ಮಹಾರಾಜ ಪಸೇನದಿಯು 'ಯುದ್ಧದಲ್ಲಿ ಸ್ಥಿರ ಗೆಲುವು ಎಂಬುದೇ ಇಲ್ಲ' ಎಂದು ಅರ್ಥ ಮಾಡಿಕೊಂಡು ಯುದ್ಧ ಭಯಕ್ಕಿಂತ, ಪ್ರಶಾಂತತೆಯ ಜೀವನ ಲೇಸೆಂದು ಭಾವಿಸಿ, ಧಮ್ಮದಲ್ಲಿ ಪ್ರತಿಷ್ಠಾಪಿಸಿಕೊಂಡನು.

No comments:

Post a Comment