Friday 19 June 2015

dhammapada/sukhavagga/15.5/alavipoor

ಹಸಿವು ಪರಮ ರೋಗ
"ಹಸಿವು ಪರಮರೋಗ,
ಸಂಖಾರಗಳೇ ಪರಮ ದುಃಖ
ಇವನ್ನು ಯಥಾಭೂತವಾಗಿ ಅರಿತವನೇ
ನಿಬ್ಬಾಣವನ್ನು ಪರಮ ಸುಖವಾಗಿ
ಸ್ಪಷ್ಟವಾಗಿ ಕಾಣುತ್ತಾನೆ."             (203)
ಗಾಥ ಪ್ರಸಂಗ 15:5
ಹಸಿವಿನ ಹೊಟ್ಟೆಗೆ ಧಮ್ಮ ರುಚಿಸದು

            ಒಂದುದಿನ ಮುಂಜಾನೆ ಭಗವಾನರು ತಮ್ಮ ಮಹಾ ಕರುಣಾ ಸಮಾಪತ್ತಿ ಧ್ಯಾನದಲ್ಲಿ ಇಂದು ಯಾರಿಗೆ ಜ್ಞಾನೋದಯವಾಗುವುದು ಎಂದು ವೀಕ್ಷಿಸಿದಾಗ, ಅವರಿಗೆ ಅಳವಿಯ ಬಡವ್ಯಕ್ತಿಯೊಬ್ಬನು ಕಾಣಿಸಿಕೊಂಡನು. ಆಗ ಭಗವಾನರು ಶ್ರಾವಸ್ತಿಯಲ್ಲಿದ್ದರು. ಅಳವಿಯು ಅಲ್ಲಿಂದ 30 ಯೋಜನ ದೂರವಿತ್ತು. ಆದರೂ ಭಗವಾನರು ಆತನಿಗಾಗಿ, ಅಳವಿಗೆ ಬಂದರು. ಆದರೆ ಅದೇದಿನ ಆ ಬಡವ್ಯಕ್ತಿಯ ಎತ್ತುಗಳು ಕಳೆದುಹೋಗಿದ್ದವು. ಆತನು ಎತ್ತುಗಳನ್ನು ಹುಡುಕಿಕೊಂಡು ಹೊರಟಿದ್ದನು. ಭಗವಾನರಿಗೆ ಆ ಊರಿನಲ್ಲಿ ಉತ್ತಮ ಆತಿಥ್ಯ ನೀಡಲಾಯಿತು. ಭಗವಾನರು ಭೋಜನ ನಂತರ ಯಾವಾಗಲು ಧಮ್ಮ ಪ್ರವಚನವು ಸದಾ ನೀಡುತ್ತಿದ್ದರು. ಆದರೆ ಇಂದು ಭಗವಾನರು ಆ ಬಡವ್ಯಕ್ತಿಗಾಗಿ ಕಾದು ಕುಳಿತರು. ಜನರಿಗೆಲ್ಲ ಆಶ್ಚರ್ಯವಾಯಿತು. ಆದರೂ ಭಯ-ಭಕ್ತಿಯಿಂದ, ಭಗವಾನರ ಬೋಧನೆಗಾಗಿ ಕಾದರು. ಅಲ್ಲಿ ಕೊನೆಗೂ ಆತನಿಗೆ ಎತ್ತುಗಳು ಸಿಕ್ಕಿದವು. ಅವುಗಳೊಂದಿಗೆ ಆತನು ಮನೆಗೆ ಹಿಂತಿರುಗಿ ಆ ಎತ್ತುಗಳನ್ನು ಕಟ್ಟಿಹಾಕಿ ಭಗವಾನರ ಬೋಧನೆ ಆಲಿಸಲು ಓಡಿಬಂದನು. ಆತನು ಬಹಳ ದಣಿದಿದ್ದನು. ಅದಕ್ಕಿಂತ ಹೆಚ್ಚಾಗಿ ಆತನು ಬಹಳ ಹಸಿದಿದ್ದನು. ಬೋಧನೆ ಆಲಿಸಲು ಆಸಕ್ತನಾದರೂ ಮನಸ್ಸು ಮಾತ್ರ ಹಸಿವಿನ ಕಡೆಗೆ ಎಳೆಯುತ್ತಿತ್ತು. ಭಗವಾನರ ಬಳಿಗೆ ಆತನು ಬಂದಾಗ ಭಗವಾನರು ದಾನಿಯೊಬ್ಬರಿಗೆ ಆ ಬಡವ್ಯಕ್ತಿಗೆ ಆಹಾರ ನೀಡುವಂತೆ ಹೇಳಿದರು. ಆತನು ತಿಂದು ತೃಪ್ತನಾದನು. ಆತನ ಮನಸ್ಸು ಶಾಂತವಾಗಿ ಈಗ ಧಮ್ಮದ ಆಲಿಸುವಿಕೆ ಸಿದ್ಧವಾಯಿತು. ಈಗ ಭಗವಾನರು ಧಮ್ಮ ಬೋಧನೆಯನ್ನು ಹಂತಹಂತವಾಗಿ ವಿವರಿಸುತ್ತಿದ್ದಂತೆಯೇ ಆ ಬಡವ್ಯಕ್ತಿಯು ಆ ಬೋಧನೆಯ ಅಂತ್ಯದಲ್ಲಿ ಸೋತಪತ್ತಿಫಲ ಪಡೆದು ಸೋತಪನ್ನನಾದನು.
            ನಂತರ ಭಗವಾನರು ತಮ್ಮ ಶಿಷ್ಯರೊಂದಿಗೆ ಜೇತವನ ವಿಹಾರಕ್ಕೆ ತೆರಳಿದರು. ವಿಹಾರದಲ್ಲಿ ಭಿಕ್ಷುಗಳು ಭಗವಾನರು ಧಮ್ಮಬೋಧನೆ ಕಾಯಿಸಿದ್ದು ಏಕೆ ಎಂಬ ಚಚರ್ೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಭಗವಾನರು ಅವರಿಗೆ ಹೀಗೆ ನುಡಿದರು:

            "ಓ ಭಿಕ್ಷುಗಳೇ, ನಿಮಗೆ ನಾನು ಅಳವಿಗೆ ಬಂದದ್ದು ಏಕೆಂದು ನೀವು ಅರ್ಥ ಮಾಡಿಕೊಳ್ಳಲಾರಿರಿ. ಆತನು ಸೋತಾಪತ್ತಿ ಸ್ಥಿತಿಗೆ ಪಕ್ವವಾಗಿದ್ದಾನೆ ಎಂದು ತಿಳಿದುದರಿಂದಲೇ ನಾನು 30 ಯೋಜನ ದೂರ ಅಳವಿಗೆ ಬಂದದ್ದು. ಆದರೆ ಆತನು ಎತ್ತುಗಳನ್ನು ಕಳೆದುಕೊಂಡಿದ್ದರಿಂದಾಗಿ ಆತನು ಧಮ್ಮ ಆಲಿಸಲಾರ. ಅವು ಸಿಕ್ಕಿಯೂ ಸಹಾ ಆತನ ಬಳಲಿಕೆ ಮತ್ತು ಹಸಿವಿನಿಂದ ಕಂಗೆಟ್ಟಿದ್ದನು. ನೀವು ಹಸಿವಿನಲ್ಲಿ ಇರುವವರೆಗೆ ಧಮ್ಮ ಬೋಧಿಸಬೇಡಿರಿ, ಅದು ಫಲಕಾರಿಯಲ್ಲ. ಆದರೆ ಆತನು ಹಸಿವನ್ನು ನೀಗಿಸಿಕೊಂಡು ಅದಾದ ಮೇಲೆಯೇ ಆತನ ಮನಸ್ಸು ಧಮ್ಮ ಆಲಿಸಲು ಸಿದ್ಧವಾಗಿತ್ತು. ತದನಂತರ ಆತನು ಈಗ ಸೋತಪನ್ನನಾಗಿದ್ದಾನೆ. ಭಿಕ್ಷುಗಳೇ, ಹಸಿವಿನಂತಹ ಪರಮ ರೋಗವೇ ಇಲ್ಲ. ಏಕೆಂದರೆ ಜೀವಿಸುವುದಕ್ಕಾಗಿ ಪ್ರತಿನಿತ್ಯ ಆಹಾರವೆಂಬ ಔಷಧಿಯನ್ನು ನಾವು ಜೀವನ ಇರುವವರೆಗೂ ನೀಡುತ್ತಲೇ ಇರಬೇಕಾಗುತ್ತದೆ" ಎಂದು ಹೇಳಿ ಈ ಗಾಥೆಯನ್ನು ನುಡಿದರು.

No comments:

Post a Comment