Wednesday 26 August 2015

dhammapada/nirayavagga/22.1/paribbajakisundari

22. ನಿರಯ ವಗ್ಗ

ಸುಳ್ಳುಗಾರರು ನಿರಯಕ್ಕೆ ಹೋಗುವರು

"ಸುಳ್ಳು ಹೇಳುವವನು ನಿರಯದಲ್ಲಿ ಉದಯಿಸುವನು,
ಹಾಗೆಯೇ ಮಾಡಿದ್ದನ್ನು 'ತಾನು ಮಾಡಿಲ್ಲ' ಎಂದು ಹೇಳುವವನು ಸಹಾ
ಹೀನ ಕರ್ಮ ಮಾಡಿದ ಈ ಎರಡು ಬಗೆಯವರು ಸಹಾ ಪರಲೋಕದಲ್ಲಿ
ಸಮಾನ ಗತಿಯನ್ನೇ ಪಡೆಯುತ್ತಾರೆ."           (306)


ಗಾಥ ಪ್ರಸಂಗ 22:1
ಪರಿವ್ರಾಜಕಿ ಸುಂದರಿಯ ಹತ್ಯಾ ಆರೋಪ


            ಭಗವಾನರನ್ನು ಆರಾಧಿಸುವ ಜನರ ಗುಂಪು ವೃದ್ಧಿಸತೊಡಗಿತು. ಅದೇವೇಳೆ ಬೌದ್ಧರಲ್ಲದ ಧಾಮರ್ಿಕ ನಾಯಕರ ಹಿಂಬಾಲಕರ ಸಂಖ್ಯೆಯು ಕ್ಷೀಣಿಸತೊಡಗಿತು. ಹೀಗಾಗಿ ಅವರೆಲ್ಲರಿಗೂ ಈಷರ್ೆ ಅತಿಯಾಗಿ ಕಾಡಿತ್ತು. ಆಗ ಅವರಿಗೆ ಭಗವಾನರ ಘನತೆಗೆ ಹಾನಿ ಮಾಡದಿದ್ದರೆ ಅವರ ಸ್ಥಿತಿಯು ಇನ್ನೂ ಹದಗೆಡುವುದೆಂದು ಭಾವಿಸತೊಡಗಿದರು. ಹೀಗಾಗಿ ಅವರೊಂದು ಉಪಾಯ ಮಾಡಿದರು. ತಮ್ಮಲ್ಲೇ ಸುಂದರವಾಗಿದ್ದ ಸುಂದರಿ ಎಂಬ ಪರಿವ್ರಾಜಿಕೆಯನ್ನು ಕರೆದು ಆಕೆಗೆ ಹೀಗೆ ಹೇಳಿದರು: "ಸುಂದರಿ, ನೀನು ಅತ್ಯಂತ ಚೆಲುವಾಗಿದ್ದೀಯೆ. ಜೊತೆಗೆ ಚಾಣಕ್ಷೆ ಸಹಾ. ನಾವು ಬಯಸುವುದು ಏನೆಂದರೆ ಸಮಣ ಗೋತಮರ ಅಪಮಾನ ಒಂದೇ. ಅದಕ್ಕಾಗಿ ನಿಮ್ಮಿಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ಜನರಿಗೆ ಭ್ರಮೆ ಹುಟ್ಟುಸುವುದಕ್ಕಾಗಿ ನೀನು ನಮಗೆ ಸಹಾಯ ಮಾಡಲೇಬೇಕು ಹೀಗಾದಾಗ ಅವರ ಪ್ರತಿಷ್ಠೆ, ಘನತೆ, ಅನುಯಾಯಿ ಸಂಪತ್ತೆಲ್ಲಾ ನಾಶವಾಗಿ, ನಮ್ಮಲ್ಲಿ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತದೆ. ಆದ್ದರಿಂದ ನಿನ್ನ ಚೆಲುವು ಮತ್ತು ಚಾಣಾಕ್ಷತನವನ್ನು ಚೆನ್ನಾಗಿ ಬಳಸು" ಎಂದರು.
            ಸುಂದರಿಗೆ ತನ್ನಿಂದ ಏನನ್ನು ನಿರೀಕ್ಷಿಸಲಾಗುತ್ತಿದ್ದೆ ಎಂಬುದನ್ನು ಅರ್ಥಮಾಡಿ ಕೊಂಡಳು. ಹೀಗಾಗಿ ಸಂಜೆಯಾಗುತ್ತಿದ್ದಂತೆ ಆಕೆಯು ಜೇತವನದತ್ತ ಸಾಗುತ್ತಿದ್ದಳು. ದಾರಿಯಲ್ಲಿ ಆಕೆಗೆ ಯಾರಾದರೂ ಎಲ್ಲಿಗೆ ಹೋಗುವೆ ಎಂದು ಕೇಳಿದಾಗ ಆಕೆ ಹೀಗೆ ಉತ್ತರಿಸುತ್ತಿದ್ದಳು: "ನಾನು ಸಮಣ ಗೋತಮರನ್ನು ಭೇಟಿ ಮಾಡಲು ಹೋಗುತ್ತಿರುವೆನು. ಅಲ್ಲಿನ ಗಂಧಕುಟಿಯಲ್ಲಿ ಅವರೊಂದಿಗೆ ಇರಲು ಹೋಗುತ್ತಿರುವೆನು" ಎಂದು. ನಂತರ ಆಕೆ ಜೇತವನದ ಸಮೀಪದಲ್ಲಿರುವ ಪರಿವ್ರಾಜಕರ ಸ್ಥಳದಲ್ಲಿ ಕಾಲಕಳೆದು, ಮರುದಿನ ಮುಂಜಾನೆಯೇ ಅಲ್ಲಿಂದ ಮನೆಗೆ ಹಿಂತಿರುಗಿ ಹೋಗುತ್ತಿದ್ದಳು. ಆಗ ಯಾರಾದರೂ ಕೇಳಿದರೆ ಆಕೆ ಹೀಗೆ "ನಾನು ರಾತ್ರಿ ಸಮಣ ಗೋತಮರೊಂದಿಗೆ ಗಂಧಕುಟಿಯಲ್ಲಿ ಕಳೆದು ಈಗ ಹಿಂತಿರುಗಿ ಹೋಗುತ್ತಿರುವೆನು" ಎನ್ನುತ್ತಿದ್ದಳು. ಹೀಗೆಯೇ ಆಕೆಯು ಎರಡು ಅಥವಾ ಮೂರು ದಿನಗಳ ಕಾಲ ಮಾಡಿದಳು. ಮೂರು ದಿನಗಳ ನಂತರ ಆ ಪರಿವ್ರಾಜಕರು ಕೊಲೆಯನ್ನು ಮಾಡುವಂತಹ ಕುಡುಕರಿಗೆ ಹಣ ನೀಡಿ ಆ ಸುಂದರಿಯನ್ನು ಹತ್ಯೆ ಮಾಡಿಸಿದರು. ನಂತರ ಆಕೆಯ ಶವವನ್ನು ಜೇತವನದ ವಿಹಾರದ ಕಸದ ರಾಶಿಯಲ್ಲಿ ಅಡಗಿಸಿಟ್ಟರು.
            ಮಾರನೆಯ ದಿನ ಆ ಪರಿವ್ರಾಜಕರು ಪರಿಬ್ಬಾಜಿಕಳ ಕಣ್ಮರೆಯ ಸುದ್ದಿಯನ್ನು ಹಬ್ಬಿಸಿದರು. ಹಾಗೆಯೇ ಅವರು ರಾಜನ ಬಳಿಗೆ ಹೋಗಿ ಈ ವಿಷಯದಲ್ಲಿ ಸಂಶಯ ಹಾಗು ದೂರನ್ನು ನೀಡಿದರು. ಆಗ ರಾಜನು ಅವರಿಗೆ ಇಷ್ಟ ಬಂದೆಡೆಯೆಲ್ಲಾ ಹುಡುಕುವಂತೆ ಆಜ್ಞೆ ನೀಡಿದನು. ಆಗ ಅವರು ಜೇತವನದಿಂದ ಶವವನ್ನು ತೆಗೆದುಕೊಂಡು ಅರಮನೆಗೆ ಕೊಂಡೊಯ್ದರು. ನಂತರ ಹೀಗೆ ಹೇಳಿದರು: "ಓ ರಾಜನೇ, ಗೋತಮರ ಶಿಷ್ಯರು ಪರಿಬ್ಬಾಜಕಳನ್ನು ಕೊಂದು, ಜೇತವನದ ಕಸದ ರಾಶಿಯಲ್ಲಿ ಆಕೆಯ ಶವವನ್ನು ಎಸೆದಿದ್ದಾರೆ. ಹೀಗೆ ಅವರು ತಮ್ಮ ಗುರುವಿನ ಕುಕೃತ್ಯವನ್ನು ಮುಚ್ಚಲು ಯತ್ನಿಸಿದ್ದಾರೆ." ಎಂದರು.
            ಆಗ ರಾಜನು ಅವರಿಗೆ ಹೀಗೆ ಹೇಳಿದನು: "ಹಾಗಾದರೆ, ನೀವು ನಗರದಲ್ಲೆಲ್ಲಾ ಸುತ್ತಾಡಿ, ಈ ವಾಸ್ತವವನ್ನು ತಿಳಿಸಿ" ಆಗ ಅವರು ಮನದಲ್ಲೇ ಆನಂದಿತರಾಗಿ, ಸುಂದರಿಯ ಶವವನ್ನು ನಗರದಲ್ಲೆಲ್ಲಾ ತೋರಿಸಿ ಹೀಗೆ ಕಿರುಚಾಡುತ್ತಿದ್ದರು: "ನೋಡಿ, ಗೋತಮರ ಹಿಂಬಾಲಕರು ಏನು ಮಾಡಿದ್ದಾರೆಂದು? ನೋಡಿ, ಹೇಗೆ ಅವರು ತಮ್ಮ ಗುರುವಿನ ಕುಕೃತ್ಯವನ್ನು ಮುಚ್ಚಿದ್ದಾರೆ" ಎಂದು ಎಲ್ಲೆಡೆ ಮೆರವಣಿಗೆ ಮೂಲಕ ಹೀಗೆ ಅಪಪ್ರಚಾರ ಮಾಡಿ ಪುನಃ ಅರಮನೆಗೆ ಹಿಂತಿರುಗಿದರು.
            ಭಿಕ್ಷುಗಳಿಗೆ ಈ ಅಪಪ್ರಚಾರ ಕೇಳಿ ತುಂಬಾ ನೋವಾಯಿತು. ಅವರು ಭಗವಾನರ ಬಳಿಗೆ ಈ ವಿಷಯ ತಿಳಿಸಿದರು. ಆಗ ಭಗವಾನರು ಅವರಿಗೆ ಈ ಮೇಲಿನ ಗಾಥೆ ನುಡಿದು, ಅದನ್ನು ಜನರು ಅಪಪ್ರಚಾರ ಮಾಡಲು ಅಥವಾ ವಿಚಾರಿಸಲು ಬಂದಾಗ ಉಚ್ಚರಿಸುವಂತೆ ಭಗವಾನರು ತಿಳಿಸದರು.

            ರಾಜನು ಮೇಲೆ ಹೀಗೆ ಪರಿವ್ರಾಜಕರಿಗೆ ಆಜ್ಞಾಪಿಸಿದ್ದರೂ ಸಹಾ ಆತನಿಗೂ ಈ ವಿಷಯದಲ್ಲಿ ನಂಬಿಕೆ ಉಂಟಾಗಲಿಲ್ಲ. ಆದ್ದರಿಂದ ಆತನು ಸುಂದರಿಯ ಕೊಲೆೆಯ ರಹಸ್ಯ ಬಿಡಿಸಲು ಚಾಣಾಕ್ಷ ಪತ್ತೆದಾರರನ್ನು ನೇಮಿಸಿದನು. ಆಗ ಅವರು ಪೂರ್ಣ ರಹಸ್ಯವನ್ನೆಲ್ಲಾ ಪತ್ತೆಮಾಡಿ ಹತ್ಯೆ ಮಾಡಿದ ಕುಡುಕರನ್ನು ರಾಜನ ಮುಂದೆ ನಿಲ್ಲಿಸಿದರು. ರಾಜನು ಅವರಿಗೆ ವಿಚಾರಿಸಿದಾಗ ಅವರನ್ನು ಪರಿವ್ರಾಜಕರೇ ಹೀಗೆ ನೇಮಿಸಿ ಹತ್ಯೆ ಮಾಡಿಸಿ ಆ ಸ್ಥಳದಲ್ಲಿ ಎಸೆಯಲು ಹೇಳಿದ್ದರೆಂದು ಒಪ್ಪಿಕೊಂಡರು. ಆಗ ರಾಜನು ಆ ಪರಿವ್ರಾಜಕರಿಗೆ ಕರೆಸಿದನು. ಆಗ ಅವರು ತಾವು ಮಾಡಿದ ತಪ್ಪನ್ನು ಒಪ್ಪಿದರು. ಆಗ ರಾಜನು ಅವರಿಗೆ "ನೀವು ಎಲ್ಲೆಲ್ಲಿ ಅಪಪ್ರಚಾರ ಮಾಡಿದ್ದೀರೋ, ಅಲ್ಲೆಲ್ಲಾ ಹೋಗಿ ಈತ ಸತ್ಯವನ್ನು ಹೇಳಬೇಕು, ನಿಮ್ಮ ತಪ್ಪನ್ನು ಒಪ್ಪಬೇಕು" ಎಂದು ಆಜ್ಞಾಪಿಸಿದನು. ಆಗ ಅವರೆಲ್ಲಾ ನಗರದಲ್ಲೆಲ್ಲಾ ಹೀಗೆ ಹೇಳಿದರು: "ನಗರವಾಸಿಗಳೇ, ನಾವೇ ಸುಂದರಿಯನ್ನು ಕೊಲ್ಲಿಸಿದ್ದು ಹಾಗು ಪವಿತ್ರರಾದ ಭಗವಾನರ ಮೇಲೆ ಸುಳ್ಳು ಆರೋಪ ಮಾಡಿದ್ದು ನಾವೆಯೇ. ಭಿಕ್ಷುಗಳೆಲ್ಲಾ ಮುಗ್ಧರು, ನಿದರ್ೊಷಿಗಳು, ನಾವೇ ಪಾಪಿಗಳಾಗಿದ್ದೇವೆ". ಹೀಗೆ ಅವರು ತಪ್ಪನ್ನು ಒಪ್ಪಿದರು. ಹಾಗು ಅವರಿಗೆಲ್ಲಾ ಶಿಕ್ಷೆಯು ಆಯಿತು. ಈ ಘಟನೆಯ ನಂತರ ಭಗವಾನರ ಸುಖ್ಯಾತಿಯು ಇನ್ನಷ್ಟು ಹೆಚ್ಚಿ, ಇನ್ನಷ್ಟು ಜನರು ಅವರ ಹಿಂಬಾಲಕರಾದರು. 

No comments:

Post a Comment