Wednesday 26 August 2015

dhammapada/nirayavagga/22.3/bhikkhuofvajjis

ದಾನ ಸ್ವೀಕಾರಕ್ಕೆ ಶೀಲವೇ ಅರ್ಹತೆ

"ದುಶ್ಶೀಲನಾಗಿ, ಅನಿಯಂತ್ರಿತನಾಗಿ
ರಾಷ್ಟ್ರದ (ಜನರು ಶ್ರದ್ಧೆಯಿಂದ ನೀಡುವ) ಪಿಂಡವನ್ನು (ಆಹಾರವನ್ನು)
ಸೇವಿಸುವ ಬದಲು ಜ್ವಾಲೆಗಳಿಂದ ಆವೃತವಾಗಿರುವ
ಕಬ್ಬಿಣದ ಬಿಸಿ ಚೆಂಡನ್ನು ತಿನ್ನುವುದು ಮೇಲು."                (308)


ಗಾಥ ಪ್ರಸಂಗ 22:3
ಬರಗಾಲದಲ್ಲಿ ದಷ್ಟಪುಷ್ಟವಾಗಿದ್ದ ವಗ್ಗುಮುದ ನದಿ ದಂಡೆಯ ಭಿಕ್ಷುಗಳು


            ವಜ್ಜಿಗಳ ನಾಡಿನಲ್ಲಿ ಆಗ ಬರಗಾಲ ಬಂದಿತ್ತು. ಎಲ್ಲೆಡೆ ಆಹಾರಕ್ಕೆ ತೊಂದರೆಯಾಗಿತ್ತು. ಆಗ ಸುಲಭವಾಗಿ ಸ್ವಾದಿಷ್ಟ ಆಹಾರ ಪಡೆಯಲು ವಗ್ಗುಮುದ ನದಿ ದಂಡೆಯಲ್ಲಿ ವಾಸಿಸುತ್ತಿದ್ದಂತಹ ಭಿಕ್ಷುಗಳು ಕುಟಿಲೋಪಾಯವನ್ನು ಮಾಡಿದರು. ಅದೆಂದರೆ: ಅವರು ಯಾವುದೇ ಧ್ಯಾನಸಿದ್ಧಿ ಗಳಿಸದಿದ್ದರೂ ತಾವು ಪಡೆದಿದ್ದೇವೆ ಎಂದೂ, ಲೋಕೋತ್ತರ ಮಾರ್ಗ ಮತ್ತು ಫಲ ಪಡೆಯದಿದ್ದರೂ ಸಹಾ ತಾವು ಸಾಕ್ಷಾತ್ಕರಿಸಿದ್ದೇವೆ ಎಂದು ತೋರಿಸಿಕೊಂಡರು. ಇದರಿಂದ ಮೋಸ ಹೋದಂತಹ ಜನರು ಅವರನ್ನು ನಂಬಿ ಅವರನ್ನು ಗೌರವಿಸಿದರು. ತಮಗಾಗಿ ಅತ್ಯಲ್ಪ ಆಹಾರ ಇಟ್ಟುಕೊಂಡು ಭಿಕ್ಷುಗಳಿಗೆ ಅಧಿಕ ಆಹಾರ ನೀಡಿದರು.
            ಆಗಿನ ಕಾಲದಲ್ಲಿ ವರ್ಷವಾಸದ ಅಂತ್ಯದಲ್ಲಿ ಎಲ್ಲಾ ಭಿಕ್ಷುಗಳು ಭಗವಾನರ ಬಳಿಗೆ ಬಂದು ಗೌರವ ಅಪರ್ಿಸುತ್ತಿದ್ದರು. ಆಗ ಉಳಿದ ಕಡೆಯಿಂದ ಬಂದಂತಹ ಭಿಕ್ಷುಗಳು ಸೊರಗಿ ಹೋಗಿದ್ದರು. ಆದರೆ ವಗ್ಗುಮುದ ನದಿ ದಂಡೆಯ ಭಿಕ್ಷುಗಳು ದಷ್ಟಪುಷ್ಟವಾಗಿದ್ದರು. ಭಗವಾನರು ಎಲ್ಲರಿಗೂ ಅವರ ವರ್ಷವಾಸ ಹೇಗೆ ಕಳೆಯಿತು ಎಂದು ಕೇಳಿದಾಗ ಅವರು ತಮ್ಮ ಅನುಭವಗಳನ್ನು ಹೇಳಿ ಆಹಾರಕ್ಕೆ ತುಸು ತೊಂದರೆ ಆಯಿತೆಂದು ಹೇಳಿದರು. ನಂತರ ಭಗವಾನರ ವಗ್ಗುಮುದ ನದಿದಂಡೆಯ ಭಿಕ್ಷುಗಳಿಗೆ ಹೀಗೆ ಕೇಳಿದರು.
            "ಭಿಕ್ಷುಗಳೇ, ನಿಮಗೆ ಬರಗಾಲದಲ್ಲಿ ಆಹಾರ ದೊರೆಯುವಲ್ಲಿ ಏನಾದರೂ ತೊಂದರೆಯು ಆಯಿತೇ?"
            "ಇಲ್ಲ ಭಂತೆ."
            "ನಿಮಗೆ ತೊಂದರೆ ಆಗದಂತೆ ಹೇಗೆ ಆಹಾರ ಸಂಪಾದಿಸಿದಿರಿ?" ಎಂದು ಭಗವಾನರು ವಿಷಯ ತಿಳಿದಿದ್ದರೂ ಸಹಾ ಕೇಳಿದರು. ಆಗ ಅವರು ನಡೆದ ವಿಷಯವೆಲ್ಲಾ ತಿಳಿಸಿದರು.
            "ನಿಮಗೆ ನಿಜವಾಗಿಯೂ ಝಾನವಾಗಲಿ, ಫಲವಾಗಲಿ ಸಿದ್ದಿಸಿದೆಯೇ?"
            "ಇಲ್ಲ ಭಂತೆ."

            ಆಗ ಭಗವಾನರು ಅವರನ್ನು ಖಂಡಿಸಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment