Wednesday 12 August 2015

dhammapada/pakinnakavagga/21.2/hatredness

ಹಿಂಸೆಯಿಂದ ವೈರತ್ವವು ನಾಶವಾಗದು

"ಯಾರು ಪರರಿಗೆ ದುಃಖವನ್ನು ನೀಡಿ,
ತಾನು ಸುಖವನ್ನು ಇಚ್ಚಿಸುವನೋ,
ಆತನು ವೈರತ್ವದ ಜಾಲದಲ್ಲಿ
ಸಿಲುಕಿ ವೈರ್ಯದಿಂದ ಎಂದಿಗೂ ಮುಕ್ತನಾಗುವುದಿಲ್ಲ."     (291)
ಗಾಥ ಪ್ರಸಂಗ 21:2

ಕ್ಷಮೆಯಿಂದಲೇ ಸೇಡು ನಾಶವಾಗುವುದು

            ಶ್ರಾವಸ್ಥಿಯ ಸಮೀಪದ ಹಳ್ಳಿಯಲ್ಲಿ ಸ್ತ್ರೀಯೊಬ್ಬಳು ವಾಸವಾಗಿದ್ದಳು. ಆಕೆಯ ಬಳಿ ಕೋಳಿಯೊಂದಿತ್ತು. ಆದರೆ ಆ ಕೋಳಿಯು ಪ್ರತಿಸಾರಿ ಮೊಟ್ಟೆ ಇಟ್ಟಾಗ ಆ ಸ್ತ್ರೀಯು ಆ ಮೊಟ್ಟೆಯನ್ನು ಒಡೆದು ತಿಂದುಬಿಡುತ್ತಿದ್ದಳು. ಇದರಿಂದಾಗಿ ಆ ಕೋಳಿಗೆ ಅಪಾರ ನೋವಾಗುತ್ತಿತ್ತು. ಆಗ ಪ್ರತಿಸಾರಿಯು ಆ ಸ್ತ್ರೀಯ ಮೇಲೆ ಪ್ರತಿಕಾರ ಬಯಸಿತು. ತಾನು ಸಹಾ ಆಕೆಯ ಸಂತಾನವನ್ನು ತಿಂದುಹಾಕಲು ಪ್ರತಿಜ್ಞೆ ಮಾಡಿತು.
            ಮುಂದಿನ ಜನ್ಮದಲ್ಲಿ ಆ ಸ್ತ್ರೀಯು ಕೋಳಿಯಾಗಿ ಹುಟ್ಟಿದಳು. ಹಿಂದಿನ ಜನ್ಮದಲ್ಲಿ ಕೋಳಿಯಾಗಿದ್ದಂತಹ ಜೀವಿಯು ಈ ಜನ್ಮದಲ್ಲಿ ಬೆಕ್ಕಾಗಿ ಹುಟ್ಟಿತು. ಅವರೆಡೂ ಅದೇ ಮನೆಯಲ್ಲಿ ಹೀಗೆ ಜನಿಸಿದ್ದವು. ಈ ಬಾರಿ ಬೆಕ್ಕು ಆ ಕೋಳಿಯ ಮೊಟ್ಟೆಗಳನ್ನು ತಿಂದುಹಾಕತೊಡಗಿತು. ಆಗ ಕೋಳಿಯು ಬೆಕ್ಕಿನ ಸಂತಾನವನ್ನು ತಿನ್ನುವ ಪ್ರತಿಜ್ಞೆ ಮಾಡಿತು. ನಂತರದ ಜನ್ಮದಲ್ಲಿ ಕೋಳಿಯು ಚಿರತೆಯಾಗಿ ಜನ್ಮ ತಾಳಿತು ಹಾಗು ಬೆಕ್ಕು, ಜಿಂಕೆಯಾಗಿ ಹುಟ್ಟಿತು. ಈಗಿನ ಜನ್ಮದಲ್ಲಿ ಚಿರತೆಯು ಜಿಂಕೆಯ ಮರಿಗಳನ್ನು ತಿಂದುಹಾಕಿ, ಕೊನೆಗೆ ಜಿಂಕೆಯನ್ನು ತಿಂದುಹಾಕಿತು. ಆಗ ಜಿಂಕೆಯು ಸಾಯುವಾಗ ಪ್ರತಿಕಾರದ ಪ್ರತಿಜ್ಞೆಯಿಂದಲೇ ಸತ್ತಿತು. ಹೀಗೆಯೇ ಇವರೀರ್ವರ ಪ್ರತಿಕಾರದ ವೈರತ್ವವು ಪ್ರತಿ ಜನ್ಮದಲ್ಲೂ ಸಾಗುತ್ತಿತ್ತು.
            ಬುದ್ಧರ ಕಾಲದಲ್ಲಿ ಅವರಲ್ಲಿ ಒಬ್ಬಾಕೆ ಸ್ತ್ರೀಯಾಗಿ ಹುಟ್ಟಿದಳು. ಮತ್ತೊಬ್ಬಳು ನರಭಕ್ಷಿಸುವ ಯಕ್ಷಿಣಿಯಾಗಿ ಹುಟ್ಟಿದಳು. ಒಂದು ಸಂದರ್ಭದಲ್ಲಿ ಆ ಸ್ತ್ರೀಯು ತನ್ನ ತವರು ಮನೆಯಿಂದ ತನ್ನ ಗಂಡನ ಮನೆಗೆ ಶ್ರಾವಸ್ತಿಯ ಸಮೀಪ ಹೋಗುತ್ತಿದ್ದಳು. ಆಗ ಆಕೆಯ ಗಂಡ ಮತ್ತು ಪುಟ್ಟ ಮಗುವು ಸದಾ ಆಕೆಯ ಜೊತೆಯಲ್ಲಿತ್ತು. ಅವರು ರಸ್ತೆಯ ಬದಿಯ ಕೊಳದ ಬಳಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಆಕೆಯ ಗಂಡನು ಸ್ನಾನ ಮಾಡಲು ಕೊಳಕ್ಕೆ ಇಳಿದನು. ಅದೇ ಕ್ಷಣದಲ್ಲಿ ಯಕ್ಷಿಣಿಯು ಮಗುವನ್ನು ತಿನ್ನಲು ಅಲ್ಲಿಗೆ ಧಾವಿಸಿದಳು. ತಕ್ಷಣ ಸ್ತ್ರೀಯು ತನ್ನ ಶತ್ರುವನ್ನು ಗುತರ್ಿಸಿದಳು. ಆಕೆ ಮಗುವನ್ನು ಎತ್ತಿಕೊಂಡು ಓಡಿದಳು. ಸಮೀಪದಲ್ಲಿ ಆಕೆಗೆ ಜೇತವನದ ವಿಹಾರದೊಳಕ್ಕೆ ನುಗ್ಗಿದಳು. ಆಗ ಭಗವಾನರು ಧಮ್ಮವನ್ನು ಬೋಧಿಸುತ್ತಿದ್ದರು. ಆ ಸ್ತ್ರೀಯು ಭಗವಾನರ ಪಾದದ ಹತ್ತಿರ ಮಗುವನ್ನು ಇಟ್ಟು "ಭಗವಾನ್, ಕಾಪಾಡಿ, ಕಾಪಾಡಿ" ಎಂದಳು. ಆಕೆ ಅತ್ಯಂತ ಭಯಭೀತಳಾಗಿದ್ದಳು. ಭಗವಾನರು ಆಕೆಗೆ ರಕ್ಷಣೆಯ ಅಭಯ ನೀಡಿದರು.

            ಇತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಬಂದಂತಹ ಯಕ್ಷಿಣಿಗೆ ವಿಹಾರಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ರಕ್ಷಣಾ ದೇವತೆಗಳು ಆಕೆಗೆ ಪ್ರವೇಶಿಸಲು ಬಿಡಲಿಲ್ಲ. ಆದರೆ ಎಲ್ಲವನ್ನು ಬಲ್ಲಂತಹ ಭಗವಾನರು ಆನಂದರಿಗೆ ಕಳುಹಿಸಿ ಆ ಯಕ್ಷಿಣಿಯನ್ನು ಕರೆತರಲು ಕಳುಹಿಸಿದರು. ಆಕೆಯು ಅಲ್ಲಿಗೆ ಬಂದಾಗ ಭಗವಾನರು ಅವರಿಬ್ಬರನ್ನು ಕುರಿತು ಹೀಗೆ ಹೇಳಿದರು: "ನೀವಿಬ್ಬರೂ ಕೇವಲ ಈಗಿನಿಂದ ಶತ್ರುತ್ವ ಹೊಂದಿಲ್ಲ. ಅನೇಕ ಜನ್ಮಗಳಿಂದ ಇದು ಸಾಗಿಬಂದಿದೆ" ಎಂದು ಅವರಿಬ್ಬರಲ್ಲಿ ನಡೆದ ಸೇಡಿನ ಸರಪಳಿ ತಿಳಿಸಿದರು. ನಂತರ ಹೀಗೆ ಹೇಳಿದರು. "ನೀವು ಇಂದು ನನ್ನಲ್ಲಿಗೆ ಬಾರದೆ ಹೋಗಿದ್ದರೆ ನಿಮ್ಮ ಶತೃತ್ವ ಅನಂತಕಾಲದವರೆಗೆ ಹೀಗೆ ಸಾಗುತ್ತಿತ್ತು. ವೈರತ್ವದಿಂದ ವೈರ್ಯವು ನಾಶವಾಗುವುದಿಲ್ಲ. ಅದು ಅವೈರ್ಯತ್ವದಿಂದಲೇ (ಮೈತ್ರಿ/ಕರುಣೆ/ಅಹಿಂಸೆ/ಕ್ಷಮೆ/ಪ್ರಜ್ಞಾ/ಶಾಂತತೆ) ನಾಶವಾಗುವುದು) ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. ಆ ಗಾಥೆಯನ್ನು ಆಲಿಸಿ ಆ ಸ್ತ್ರೀಯು ಸೋತಪತ್ತಿ ಫಲ ಪಡೆದಳು. ಆ ಯಕ್ಷಿಣಿಯು ತ್ರಿಶರಣು ಹೊಂದಿದಳು. ಇಬ್ಬರಲ್ಲಿ ದ್ವೇಷ, ವೈರತ್ವ ನಾಶವಾಯಿತು. ಇಬ್ಬರೂ ಪರಸ್ಪರ ಮಿತ್ರರಾದರು.

No comments:

Post a Comment