Wednesday 12 August 2015

dhammapada/pakinnakavagga/21.8/culasubhadra

ಒಳ್ಳೆಯದು ದೂರದಲ್ಲಿದ್ದರೂ ಕಾಣಲ್ಪಡುತ್ತದೆ
"ದೂರದಲ್ಲಿದ್ದರೂ ಸಂತರು ಪ್ರಕಾಶಿಸುವರು (ಕಾಣಿಸಿಕೊಳ್ಳುವರು)
ಹಿಮವಂತ (ಹಿಮಾಲಯ) ಪರ್ವತದ ರೀತಿ,
ಆದರೆ ಅಸಂತರು (ಪಾಪಿಗಳು) ಹತ್ತಿರದಲ್ಲಿದ್ದರೂ
ರಾತ್ರಿಯ ವೇಳೆ ಬಿಟ್ಟ ಶರದಂತೆ ಕಾಣಿಸಲಾರರು."          (304)

ಗಾಥ ಪ್ರಸಂಗ 21:8
ಚೂಲಸುಭದ್ರಳ ಶ್ರದ್ಧಾ ಶಕ್ತಿಯು ಅದ್ಭುತವಾದುದು

            ಅನಾಥಪಿಂಡಿಕ ಮತ್ತು ಉಗ್ಗ (ಉಗ್ರ) ಇಬ್ಬರು ಯೌವ್ವನದಲ್ಲಿ ಒಂದೇ ಗುರುವಿನ ಬಳಿ ವಿದ್ಯಾಭ್ಯಾಸ ಮಾಡಿದ್ದವರಾಗಿದ್ದರು. ಉಗ್ಗನಿಗೆ ಒಬ್ಬ ಮಗನಿದ್ದನು. ಹಾಗೆಯೇ ಅನಾಥಪಿಂಡಿಕನಿಗೂ ಚೂಲ ಸುಭದ್ರೆ ಹೆಸರಿನ ಮಗಳಿದ್ದಳು. ಉಗ್ಗನ ಕೋರಿಕೆಯಂತೆ ಅವರಿಬ್ಬರ ವಿವಾಹವಾಯಿತು. ನಂತರ ಚೂಲಸುಭದ್ದೆಯು ಉಗ್ಗ ನಗರದಲ್ಲಿರುವ ಪತಿಯ ಮನೆಯಲ್ಲಿ ವಾಸಿಸಲು ಆರಂಭಿಸಿದಳು. ಆದರೆ ಉಗ್ಗನ ಮನೆಯವರು ಬೌದ್ಧರಾಗಿರಲಿಲ್ಲ. ಅವರು ಅಬೌದ್ಧರಾದ ನಗ್ನ ಸಂನ್ಯಾಸಿಗಳ ಅನುಯಾಯಿಗಳಾಗಿದ್ದರು. ಹೀಗಾಗಿ ಅವರು ಆ ನಗ್ನ ಸಂನ್ಯಾಸಿಗಳನ್ನು ಮನೆಗೆ ಆಹ್ವಾನಿಸುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಅವರು ಚೂಲಸುಭದ್ರೆಯನ್ನು ನಗ್ನ ಸಂನ್ಯಾಸಿಗಳಿಗೆ ಗೌರವಿಸಲು ಕರೆಯುತ್ತಿದ್ದರು. ಆದರೆ ಸುಭದ್ರೆಯು ಹಾಗೆ ಮಾಡಲು ತಿರಸ್ಕರಿಸಿದಳು. ಬದಲಾಗಿ ಆಕೆಯು ತನ್ನ ಅತ್ತೆಗೆ ಭಗವಾನರ ಅದ್ವಿತೀಯ ಸದ್ಗುಣಗಳನ್ನು ವಿವರಿಸಿದಳು. ಆಗ ಅಕೆಯ ಅತ್ತೆಗೂ ಭಗವಾನರನ್ನು ನೋಡುವ ಕುತೂಹಲ ಉಂಟಾಯಿತು. ಹಾಗು ಆಕೆಯು ತನ್ನ ಸೊಸೆ ಸುಭದ್ರೆಗೂ ಭಗವಾನರನ್ನು ಮನೆಗೆ ಆಹ್ವಾನಿಸಲು ಅನುಮತಿ ನೀಡಿದಳು.
            ಆಗ ಸುಭದ್ರೆಯು ಮನೆಯ ಮೇಲ್ಭಾಗಕ್ಕೆ ಹೋಗಿ ಅಲ್ಲಿಯ ಶ್ರಾವಸ್ತಿಯ ವಿಹಾರದತ್ತ ಇರುವ ದಿಕ್ಕಿನತ್ತ ದಿಟ್ಟಿಸಿದಳು. ನಂತರ ಆಕೆಯು ಸೌಗಂಧಗಳಿಂದ ಭಗವಾನರ ಮಾನಸಿಕ ಪೂಜೆ ಮಾಡಿದಳು. ಭಗವಾನರ ಅನುಸ್ಮರಣೆ ಮಾಡಿದಳು. ಅನಂತರ ಈ ರೀತಿಯ ಪ್ರಬಲ ಇಚ್ಛೆ ಮಾಡಿದಳು: "ಭಗವಾನ್, ನಮ್ಮ ಮನೆಗೆ ನಾಳೆ ತಾವು ಭಿಕ್ಷು ಸಂಘ ಸಮೇತ ಔತಣಕ್ಕಾಗಿ ಖಂಡಿತವಾಗಿ ಬನ್ನಿ ಎಂದು ನಾನು ತಮ್ಮ ಉಪಾಸಿಕೆ ಚೂಲಸುಭದ್ದ ಭಕ್ತಿಯುತವಾಗಿ ಆಹ್ವಾನಿಸುತ್ತಿರುವೆನು. ಇದೇ ಸತ್ಯದಿಂದಾಗಿ ನನ್ನ ಆಹ್ವಾನವು ತಮಗೆ ತಿಳಿಯಲ್ಪಡಲಿ. ಸಾಂಕೇತಿಕವಾಗಿ ಈ ಪುಷ್ಪಗಳನ್ನು ತಮಗೆ ಸಮಪರ್ಿಸುತ್ತಿದ್ದೇನೆ" ಎಂದು ಆಕೆಯ ಎಂಟು ಬೊಗಸೆಯಷ್ಟು ಮಲ್ಲಿಗೆ ಹೂಗಳನ್ನು ಆಕಾಶಕ್ಕೆ ಎಸೆದಳು. ಆಶ್ಚರ್ಯ! ಅವು ನೆಲಕ್ಕೆ ಬೀಳಲಿಲ್ಲ. ಬದಲಾಗಿ ಆಕಾಶದಲ್ಲೇ ಜೇತವನ ವಿಹಾರದತ್ತ ಆ ಹೂಗಳು ಸಾಗಿದವು. ನಂತರ ಭಗವಾನರು ಧಮ್ಮ ಬೋಧಿಸುತ್ತಿದ್ದ ಸಭಾಂಗ ಪ್ರವೇಶಿಸಿ, ಭಗವಾನರ ಪಾದವನ್ನು ನಿಧಾನವಾಗಿ ಸ್ಪಶರ್ಿಸಿದವು.
            ಜೇತವನದಲ್ಲಿ ಭಗವಾನರು ತಮ್ಮ ಧಮ್ಮ ಪ್ರವಚನ ಮುಗಿಸಿದಾಗ, ಚೂಲಸುಭದ್ರೆಯ ತಂದೆಯಾದ ಅನಾಥಪಿಂಡಿಕರು ಭಗವಾನರನ್ನು ಔತಣಕ್ಕಾಗಿ ತಮ್ಮ ಮನೆಗೆ ಆಹ್ವಾನಿಸಿದರು. ಆಗ ಭಗವಾನರು "ಓಹ್ ಅನಾಥಪಿಂಡಿಕ, ಈಗಾಗಲೇ ಚೂಲಸುಭದ್ರೆಯ ಔತಣ ಸ್ವೀಕರಿಸಿರುವೆ". ಅದನ್ನು ಆಲಿಸಿ ಅನಾಥಪಿಂಡಿಕನಿಗೆ ಆಶ್ಚರ್ಯವಾಯಿತು. ಆತನು ಭಗವಾನರಿಗೆ ಹೀಗೆ ಕೇಳಿದನು. "ಆದರೆ ಭಗವಾನ್, ಚೂಲಸುಭದ್ರೆಯಂತು ಶ್ರಾವಸ್ತಿಯಲ್ಲಿ  ಇಲ್ಲಿಂದ 120 ಯೋಜನದಷ್ಟು ದೂರದಲ್ಲಿರುವ ಉಗ್ಗ ನಗರಿಯಲ್ಲಿ ವಾಸಿಸುತ್ತಿದ್ದಾಳೆ."
            "ನಿಜ ಗೃಹಪತಿಯೇ, ಆದರೆ ಒಳ್ಳೆಯದು ಹಿಮಾಲಯದಂತೆ ದೂರದಲ್ಲಿದ್ದರೂ ಹತ್ತಿರದಲ್ಲಿರುವಂತೆ ಸಾಕ್ಷಾತ್ ಗೋಚರಿಸುತ್ತದೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಅತ್ತ ಚೂಲಸುಭದ್ರೆಯು ಎಲ್ಲಾರೀತಿಯ ಆಹಾರದ ಸಿದ್ಧತೆ ನಡೆಸುತ್ತಿದ್ದಳು. ಮಾರನೆಯ ದಿನ ಭಗವಾನರು ಭಿಕ್ಷುಗಳೊಂದಿಗೆ ಚೂಲಸುಭದ್ರೆಯ ಮನೆಗೆ ಬಂದರು. ಆದರೆ ಆ ನಗರವು 120 ಯೋಜನ ದೂರವಿದ್ದುದರಿಂದಾಗಿ ದೇವತೆಗಳ ಒಡೆಯ ಸಕ್ಕ ತೇಲುತ್ತಿದ್ದಂಹ ಅಲಂಕೃತ ವಿಮಾನದಿಂದ ಆಕಾಶ ಮಾರ್ಗದಿಂದ ಭಗವಾನರನ್ನು ಮತ್ತು ಭಿಕ್ಷುಗಳನ್ನು ಕರೆತಂದನು. ಭಗವಾನರ ಈ ಭವ್ಯತೆಯನ್ನು, ಭಗವಾನರ ಅನುಪಮ ಸೌಂದರ್ಯ ಹಾಗು ತೇಜಸ್ಸನ್ನು ಕಂಡು ಉಗ್ಗ ದಂಪತಿಗಳು ಬೆರಗಾಗಿ, ಪ್ರಭಾವಕ್ಕೆ ಒಳಗಾಗಿ ಭಗವಾನರಿಗೆ ಗೌರವ, ಆದರ, ಸತ್ಕಾರ, ದಾನವೆಲ್ಲಾ ಮಾಡಿದರು. 

No comments:

Post a Comment