Friday 18 September 2015

dhammapada/bhikkuvagga/25.11/vakkali

ಶ್ರದ್ಧಾವಂತನು ಶಾಂತತೆಯನ್ನು ಸಾಧಿಸುವನು
"ಬುದ್ಧರ ಶಾಸನದಲ್ಲಿ ಅಪಾರ ಶ್ರದ್ಧೆಯು
ಹಾಗು ಪರಮ ಪ್ರಸನ್ನತೆಯನ್ನು ಹೊಂದಿರುವ ಭಿಕ್ಷುವು
ಸಂಖಾರಗಳ ಉಪಶಮನದಿಂದ ಉಂಟಾಗುವ ಸುಖ ಮತ್ತು
ಪರಮ ಶಾಂತತೆ ಸ್ಥಿತಿಯನ್ನು ಪ್ರಾಪ್ತಿಮಾಡುವನು."        (381)

ಗಾಥ ಪ್ರಸಂಗ 25:11
ಪರಮ ಶ್ರದ್ಧಾವಂತ ಭಕ್ತ ವಕ್ಕಲಿ

            ವಕ್ಕಲಿಯು ಶ್ರಾವಸ್ಥಿಯ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದನು. ಆತನು ಯುವಕನಾಗಿದ್ದಾಗ ಒಮ್ಮೆ ಆತನು ಭಗವಾನರನ್ನು ಕಂಡನು. ಆತನು ಭಗವಾನರ 32 ಮಹಾಪುರುಷ ಲಕ್ಷಣಗಳಿರುವ ಮತ್ತು 108 ಸುಲಕ್ಷಣಭರಿತ, ಚಿನ್ನದ ಕಾಂತಿಯುತವಾದ ಪರಮ ತೇಜಸ್ಸುಭರಿತ ಅವರ ಶರೀರ ಹಾಗು ಮುಖವನ್ನು ನೋಡಿದ ಆತನು ಆನಂದಭರಿತನಾದನು. ಇಲ್ಲಿಯವರೆಗೆ ಅವರನ್ನೇ ಹುಡುಕುತ್ತಿದ್ದನೋ ಎಂದು ಭಾಸವಾಯಿತು. ಅವರನ್ನು ನೋಡಿದಷ್ಟೂ ಅತೃಪ್ತನಾದನು, "ಅವರನ್ನು ನಾನು ಸದಾ ನೋಡುತ್ತಲೇ ಇರಬೇಕು. ಆದ್ದರಿಂದ ನಾನು ಭಿಕ್ಷುವಾಗುವೆ" ಎಂದು ಆತನು ಲೌಕಿಕ ಜೀವನದಿಂದ ನಿವೃತ್ತನಾಗಿ ಭಿಕ್ಷುವಾದನು. ಆದರೆ ಭಿಕ್ಷುವಾಗಿಯೂ ಸಹಾ ಆತನು ಸದಾ ಬುದ್ಧ ಭಗವಾನರ ರೂಪ ಆಸ್ವಾದನೆಯಲ್ಲಿ ಕಾಲಕಳೆದನು ಹೊರತು, ಯಾವುದೇ ಸತ್ಯವನ್ನು ನೆನಪಿಡಲಿಲ್ಲ. ಹಾಗೆಯೇ ಧ್ಯಾನವನ್ನು ಮಾಡಲಿಲ್ಲ. ಸದಾಕಾಲ ಭಗವಾನರನ್ನು ದಶರ್ಿಸುವುದು, ಅವರಿಲ್ಲದ ವೇಳೆ ಅವರ ರೂಪವನ್ನೇ ಕಲ್ಪಿಸುವುದು ಹೀಗೆಯೇ ಮಾಡುತ್ತಿದ್ದನು. ಹೀಗೆ ಆತನು ಆತನ ಇಡೀ ಸಮಯವೆಲ್ಲಾ ಭಗವಾನರನ್ನು ದಿಟ್ಟಿಸುವುದೇ ಆಯಿತು. ಆದರೆ ಭಗವಾನರು ಆತನ ಅಪಕ್ವತೆ ಕಂಡು ಆಗಲೇ ಏನನ್ನೂ ನುಡಿಯದೇ ಮೌನವಾಗಿದ್ದರು. ಆದರೆ ಒಂದುದಿನ ಅವರಿಗೆ ಈತನಿಗೆ ಪಕ್ವತೆಗೆ ಬಂದಿರುವನೆಂದು ತಿಳಿಯಿತು. ಆಗ ಆತನಿಗೆ ಹೀಗೆ ಹೇಳಿದರು: "ವಕ್ಕಲಿ, ನನ್ನ ಶರೀರವೆಂದು ಕರೆಯಲ್ಪಡುವ ಈ ಕಲ್ಮಶರಾಶಿಯನ್ನು ದಿಟ್ಟಿಸುವುದರಿಂದಾಗಿ ಏನು ಲಾಭವಿದೆ? ವಕ್ಕಲಿ ಯಾರು ಬೋಧಿಯನ್ನು (ಧಮ್ಮವನ್ನು) ಅರಿಯುವರೋ, ಅವರು ನನ್ನನ್ನು ಅರಿಯುವರು." ಹೀಗೆ ಆತನಿಗೆ ತಿದ್ದಿದರು.
            ಆದರೂ ಸಹಾ ವಕ್ಕಲಿಗೆ ಅವರ ಹೊರತಾಗಿ ಕ್ಷಣವೂ ಆತನಿಂದ ಇರಲಾಗುತ್ತಿರಲಿಲ್ಲ. ಆಗ ಭಗವಾನರು ಆತನನ್ನು ತಿದ್ದಲು ಇನ್ನೊಂದು ಉಪಾಯ ಮಾಡಿದರು. "ಈತನಿಗೆ ಆಘಾತ ನೀಡದೆ ಅರಿವನ್ನು ನೀಡಲಾಗುವುದಿಲ್ಲ." ಅದೇ ಸಮಯದಲ್ಲಿ ವರ್ಷವಾಸವು ಆರಂಭವಾಯಿತು. ಆಗ ಭಗವಾನರು ರಾಜಗೃಹದಲ್ಲಿ ವರ್ಷವಾಸ ಕಳೆಯಲು ನಿರ್ಧರಿಸಿದರು. ಹಾಗೂ ಇದನ್ನೇ ಸದಾವಕಾಶವಾಗಿ ತೆಗೆದುಕೊಂಡು ಆತನಿಗೆ ತಿದ್ದಲು ನಿರ್ಧರಿಸಿದರು. ಅವರನ್ನು ಹಿಂಬಾಲಿಸಿ ಬರಲು ಸಿದ್ಧನಾಗಿದ್ದ ಆತನಿಗೆ ಭಗವಾನರು "ಹಿಂತಿರುಗು ವಕ್ಕಲಿ" ಎಂದು ಆಜ್ಞೆ ನೀಡಿದರು. ಆಗ ವಕ್ಕಲಿಗೆ ಮೂರು ತಿಂಗಳು ಕಳೆಯುವುದೇ ಪರಮ ಕಠಿಣವಾಯಿತು. ಆಗ ಆತನು ಈ ರೀತಿ ಯೋಚಿಸಿದನು: "ಓಹ್, ದಶಬಲಧಾರಿಗಳಾದ ಭಗವಾನರು ನನಗೆ ಈಗ ದರ್ಶನಭಾಗ್ಯ ನೀಡಿಲ್ಲವಲ್ಲ, ಅವರೊಂದಿಗೆ ನನಗೆ ಮಾತುಕತೆಯೇ ಇಲ್ಲವಲ್ಲ! ಓಹ್, ನಾನು ಜೀವಿಸಿ ಲಾಭವೇನು? ನಾನು ಈ ಗೃದ್ಧಕುಟ ಪರ್ವತದ ಮೇಲಿಂದ ಬಿದ್ದುಬಿಡುತ್ತೇನೆ" ಹೀಗಾಗಿ ಆತನು ಪರ್ವತದ ಮೇಲೆ ಹತ್ತಿದನು.
            ಆಗ ಭಗವಾನರಿಗೆ ಆತನು ತೀವ್ರ ಹತಾಶೆಗೆ ಗುರಿಯಾಗಿರುವುದು ತಿಳಿಯಿತು: "ನಾನು ಈತನಿಗೆ ಈಗ ಕಾಣಿಸದೆ ಹೋದರೆ ಮಾರ್ಗಫಲ ಪಡೆಯುವ ಮುನ್ನವೇ ಈತನು ಶರೀರವನ್ನು ನಾಶಗೊಳಿಸಿಕೊಳ್ಳುತ್ತಾನೆ'. ತಕ್ಷಣ ಭಗವಾನರು ಆತನ ಮುಂದೆ ಪ್ರತ್ಯಕ್ಷರಾದರು. ಭಗವಾನರನ್ನು ಕಂಡಕೂಡಲೇ ಆತನು ವಿಯೋಗ ದುಃಖ, ಹತಾಶೆ, ಶೋಕಗಳೆಲ್ಲಾ ಕ್ಷಣಮಾತ್ರದಲ್ಲಿ ಮಾಯವಾದವು. ಬರ ಭೂಮಿಗೆ ಪ್ರವಾಹವೂ ಮಳೆಯು ಏಕಕಾಲದಲ್ಲಿ ಲಭಿಸುವಂತೆ ಆತನಲ್ಲಿ ಅಪಾರ ಆನಂದ, ಪ್ರಸನ್ನತೆಗಳು ಉಕ್ಕಿಹರಿದವು.
            "ಓಹ್, ದಶಬಲಧಾರಿಗಳು ನನಗೆ ದರ್ಶನವಿತ್ತರು, ನಾನು ಅವರನ್ನು ನೋಡುತ್ತಿದ್ದೇನೆ. ಅವರು ಬಾ ಎಂದು ಕರೆಯುತ್ತಾರೆ. ನನ್ನೊಂದಿಗೆ ಮಾತನಾಡಿಸುತ್ತಿದ್ದಾರೆ" ಎಂದು ಯೋಚಿಸಿದನು.

            ಆಗ ಆತನು ಗೃದ್ಧಕೂಟ ಪರ್ವತದ ತುತ್ತತುದಿಗೇರಿದ್ದನು. ಭಗವಾನರು ಆತನಿಗೆ "ಬಾ ವಕ್ಕಲಿ" ಎಂದು ಕರೆದರು. ಭಗವಾನರು ಗಾಳಿಯಲ್ಲಿ ನಿಂತಿದ್ದರು. ವಕ್ಕಲಿ ಮುಂದೆ ನಡೆದರೆ, ಆತನು ಬೆಟ್ಟದ ಕಂದಕ, ಕಣಿವೆಗೆ ಬೀಳುವಂತೆ ಇತ್ತು. ಅಲ್ಲಿ ಯಾವ ಹಾದಿಯೂ ಇರಲಿಲ್ಲ. ಆದರೆ ವಕ್ಕಲಿಗೆ ಅದ್ಯಾವ ಪರಿವೆಯೂ ಇರಲಿಲ್ಲ. ಭಗವಾನರನ್ನು ದಶರ್ಿಸುತ್ತಾ ಆತನು ಮುಂದೆ ನಡೆದನು. ಅದ್ಭುತ, ಆಶ್ಚರ್ಯ. ಆತನು ಕೆಳಗೆ ಬೀಳಲಿಲ್ಲ. ಭೂಮಿಯ ಮೇಲೆ ನಡೆದಂತಾಯಿತು. ಆತನು ಭಗವಾನರತ್ತ ಬರುತ್ತಿದ್ದನು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಆಗ ಆತನ ಆಕಾಶದಲ್ಲಿಯೇ ಆ ಗಾಥೆಯ ಅರ್ಥವನ್ನು ಆಳವಾಗಿ ಅರಿಯುತ್ತ ಮುಂದೆ ಸಾಗಿದನು. ಆಗ ಆತನಿಗೆ ಸಂಖಾರಗಳ ಉಪಶಮನದ ಮಹತ್ತತೆ ಅರಿತನು. ಆಗ ಆತನು ಆ ಅದ್ವಿತೀಯ ಶ್ರದ್ಧೆಯ ಆನಂದವನ್ನು ಮೀರಿ ಅರಹತ್ವವನ್ನು ಪ್ರಾಪ್ತಿಮಾಡಿದನು. ಜೊತೆಗೆ ಅಭಿಜ್ಞಾ ಬಲಗಳನ್ನು ಪಡೆದನು. ಆತನು ಭಗವಾನರನ್ನು ಪ್ರಶಂಸಿಸಿ ಗಾಳಿಯಲ್ಲಿಯೇ ನಿಧಾನವಾಗಿ ಇಳಿಯುತ್ತ, ಭಗವಾನರ ಸಮ್ಮುಖದಲ್ಲಿ ನಿಂತನು. ಇನ್ನೊಂದು ಸಂದರ್ಭದಲ್ಲಿ ಭಗವಾನರು ತಮ್ಮಲ್ಲಿ ಅತ್ಯಂತ ಶ್ರದ್ಧೆ ಹೊಂದಿದ ಭಿಕ್ಷುಗಳಲ್ಲಿ ಅಗ್ರಗಣ್ಯನು ವಕ್ಕಲಿಯೇ ಎಂದು ಸ್ಪಷ್ಟಪಡಿಸಿದರು.

No comments:

Post a Comment