Monday 7 September 2015

dhammapada/tanhavagga/24.10/questionofsakka

ಧಮ್ಮದಾನವು ಉಳಿದ ದಾನಗಳೆಲ್ಲವನ್ನು ಮೀರಿಸಿಬಿಡುತ್ತದೆ
"ಧಮ್ಮದಾನವು ಸರ್ವದಾನಗಳನ್ನು ಮೀರಿಸಿಬಿಡುತ್ತದೆ,
ಧಮ್ಮದಾನವು ಸರ್ವರಸಗಳನ್ನು ಮೀರಿಸಿಬಿಡುತ್ತದೆ,
ಧಮ್ಮದಾನವು ಸರ್ವ ಆನಂದಗಳನ್ನು ಮೀರಿಸಿಬಿಡುತ್ತದೆ,
ತೃಷ್ಣೆಯನ್ನು ಪೂರ್ಣವಾಗಿ ಕ್ಷೀಣಿಸಿದವನು
ಸರ್ವ ದುಃಖಗಳನ್ನು ಜಯಿಸುತ್ತಾನೆ."            (354)
ಗಾಥ ಪ್ರಸಂಗ 24:10
ಧಮ್ಮ ದಾನದ ಬಗ್ಗೆ ಸಕ್ಕನ ಪ್ರಶ್ನೆ

            ಒಮ್ಮೆ ಸುಗತಿಯಲ್ಲಿರುವ ತಾವತಿಂಸ ಲೋಕದಲ್ಲಿ ದೇವತೆಗಳಲ್ಲಿ ನಾಲ್ಕು ಪ್ರಶ್ನೆಗಳು ಉಂಟಾದವು., ಆದರೆ ಯಾವ ದೇವತೆಯೂ ಸರಿಯಾದ ಉತ್ತರ ನೀಡಲು ವಿಫಲರಾದರು.  ಅಗ ಸಕ್ಕನಿಗೆ ಇದಕ್ಕೆ ಅತ್ಯುತ್ತಮ ಅರ್ಹರಾದ ವ್ಯಕ್ತಿ ಭಗವಾನರೇ ಎಂದೆನಿಸಿ, ಭಗವಾನರನ್ನು ಹುಡುಕಿಕೊಂಡು ಜೇತವನ ವಿಹಾರಕ್ಕೆ ದೇವತೆಗಳ ಸಹಿತ ಬಂದನು. ನಂತರ ಭಗವಾನರಿಗೆ ವಂದಿಸಿ ಗೌರವಯುತವಾಗಿ ಒಂದೆಡೆ ಕುಳಿತು ನಾಲ್ಕು ಪ್ರಶ್ನೆಗಳನ್ನು ಕೇಳಿದನು:
            1.          ದಾನಗಳಲ್ಲಿ ಯಾವುದು ಶ್ರೇಷ್ಠವಾದುದು ?
            2.          ರಸಗಳಲ್ಲಿ ಯಾವ ರಸವು ಶ್ರೇಷ್ಠವಾದುದು ?
            3.          ಆನಂದಗಳಲ್ಲಿ ಯಾವ ಆನಂದವು ಶ್ರೇಷ್ಠವಾದುದು ?
            4.         ಏತಕ್ಕಾಗಿ ತೃಷ್ಣೆಯು ಕ್ಷಯವನ್ನು ಅತ್ಯುನ್ನತ ಎನ್ನುತ್ತಾರೆ ?
            ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಆಗ ಸಕ್ಕನು ಭಗವಾನರಲ್ಲಿ ಹೀಗೆ ವಿನಂತಿಸಿಕೊಂಡನು. "ಭಗವಾನ್, ಧಮ್ಮದಾನವು ಉಳಿದ ದಾನಗಳೆಲ್ಲವನ್ನು ಮೀರಿಸಿಬಿಡುವುದಾದರೆ, ನಮ್ಮೊಂದಿಗೆ ಏತಕ್ಕಾಗಿ ಪುಣ್ಯವನ್ನು ಹಂಚಿಕೊಳ್ಳಬಾರದು, ಇಂದಿನಿಂದಲೇ ನಮಗೂ ಪುಣ್ಯದ ಪಾಲನ್ನು ನೀಡುವಂತಾಗಲಿ".

            ಅಂದಿನಿಂದ ಭಗವಾನರು ಪುಣ್ಯವನ್ನು ದೇವತೆಗಳಲ್ಲಿ ಹಂಚುವ ನಿಯಮ ಆರಂಭಮಾಡಿದರು.

No comments:

Post a Comment