Friday 18 September 2015

dhammapada/bhikkuvagga/25.3/kokalika

ಪ್ರಾಜ್ಞನ ನುಡಿಗಳು ಪರಮ ಮಧುರ
"ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ,
ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ
ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ
ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ."      (363)

ಗಾಥ ಪ್ರಸಂಗ 25:3
ಕೋಕಾಲಿಕನ ಕುಚರಿತೆ

            ಕೋಕಾಲಕನು ದುಶ್ಶೀಲ ಭಿಕ್ಷು ದೇವದತ್ತನ ಶಿಷ್ಯನಾಗಿದ್ದನು. ಇವರಿಬ್ಬರೂ ಪರಸ್ಪರ ಹೊಗಳಿಕೊಳ್ಳುತ್ತಾ ಭಿಕ್ಷೆಯಲ್ಲಿ ಲಾಭವನ್ನು ಪಡೆಯುತ್ತಿದ್ದರು. ಒಮ್ಮೆ ಕೋಕಾಲಿಕನು ಧಮ್ಮೋಪದೇಶ ಮಾಡಲು ಹೋಗಿ ಅಸಮರ್ಥನಾಗಿ ಅಪಮಾನಿತನಾಗಿದ್ದನು.
            ಈ ಕೋಕಾಲಿಕನು ಇರುವೆಡೆ ಒಮ್ಮೆ ಸಾರಿಪುತ್ರ ಮತ್ತು ಮೊಗ್ಗಲ್ಲಾನರು ಮೂರು ತಿಂಗಳ ಕಾಲ ವರ್ಷವಾಸ ಕಳೆದರು. ನಂತರ ಅಲ್ಲಿದ್ದ ಜನರು ಅಗ್ರಶ್ರಾವಕರಾದ ಸಾರಿಪುತ್ರ ಮತ್ತು ಮೊಗ್ಗಲ್ಲಾನರಿಗೆ ಸತ್ಕಾರ, ದಾನಗಳೆಲ್ಲಾ ಮಾಡಲು ಬಂದಿದ್ದರು, ಆದರೆ ಸಂತೃಪ್ತರಾದ ಅವರು ಏನನ್ನೂ ಸ್ವೀರಿಸಲಿಲ್ಲ. ಹಾಗೆಯೇ ಅವರು ಕೋಕಾಲಿಕನಿಗೂ ಏನನ್ನೂ ಕೊಡಿಸಲಿಲ್ಲ. ಇದರಿಂದ ಕ್ರುದ್ಧನಾದ ಕೋಕಾಲಿಕನು ಹೀಗೆ ಯೋಚಿಸಿದನು: "ಈ ಥೇರರು ತಾವು ಸ್ವೀಕರಿಸಲಿಲ್ಲ, ನನಗೂ ಕೊಡಿಸಲಿಲ್ಲ". ಹಾಗೆಯೇ ಅಸೂಯಪರ ವರ್ತನೆ ಮಾಡಲಾರಂಭಿಸಿದಾಗ ಅವರು ಅಲ್ಲಿಂದ ಹೊರಟರು. ಇದು ಜನರಿಗೆ ಗೊತ್ತಾಗಿ ಅವರು ಕೋಕಾಲಿಕನಿಗೂ ದೂರ ಅಟ್ಟಿದರು. ಆಗ ಅಪಾರ ಕ್ರೋಧಗೊಂಡ ಕೋಕಾಲಿಕನು ಭಗವಾನರ ಬಳಿಗೆ ಬಂದು ಅವರ ಬಗ್ಗೆ ಇಲ್ಲಸಲ್ಲದುದನ್ನು ಹೀಗೆ ಹೇಳಿದನು: "ಭಗವಾನ್, ಅಗ್ರಶ್ರಾವಕರು, ಪಾಪಿಗಳು, ಅವರು ಪಾಪಗಳ ಇಚ್ಛೆ ಹೊಂದಿರುವವರು".
            ಆಗ ಭಗವಾನರು ಆತನನ್ನು ಹಾಗೆ ನುಡಿಯಬೇಡವೆಂದು ಮೂರು ಬಾರಿ ತಡೆದರು. ಆಗಲೂ ಆತನು ಹಾಗೆಯೇ ತನ್ನ ವಾಣಿಯನ್ನು ಸಂಯಮ ಮಾಡದಿದ್ದಾಗ ಆತನು ಪರಮಶ್ರೇಷ್ಠರ ಮೇಲೆ ಕ್ರೋಧನಾಗಿದ್ದರಿಂದ ಆತನ ಶರೀರದ ಮೇಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಕಾಣಿಸಿಕೊಂಡವು. ಕ್ರಮೇಣ ಅವು ಬಿಲ್ವಪತ್ತದಷ್ಟು ದೊಡ್ಡದಾಗಿ, ಒಡೆದು ರಕ್ತ ಕೀವು ಹರಿಯಲಾರಂಭಿಸಿತು. ನೋವಿನಿಂದ ನರಳಿದನು. ಇದರ ಬಗ್ಗೆ ಬುದ್ಧಿವಾದ ಹೇಳಿದಂತಹ ತುರು ಎಂಬ ಬ್ರಹ್ಮನಿಗೆ ಕೋಪ ತರಿಸಿದನು. ನಂತರ ನೋವಿನಿಂದ ಸತ್ತಂತಹ ಕೋಕಾಲಿಕನು ಪದ್ಮ ನರಕದಲ್ಲಿ ಹುಟ್ಟಿದನು. ಆಗ ಭಿಕ್ಷುಗಳು ಆತನ ಬಗ್ಗೆ ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಹೀಗೆ ಹೇಳಿದರು: "ಭಿಕ್ಷುಗಳೇ, ಕೋಕಾಲಿಕನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲಿಯೂ ಸಹಾ ತನ್ನ ನಾಲಿಗೆಯ ನಿಯಂತ್ರಣ ತಪ್ಪಿ ಸಾವನ್ನು ಅಪ್ಪಿದ್ದಾನೆ" ಎಂದರು. ನಂತರ ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮವನ್ನು ತಿಳಿಸಿದರು.
            ಒಮ್ಮೆ ಹಿಮಾಲಯದ ಸರೋವರದಲ್ಲಿ ಆಮೆಯೊಂದು ಇರುತ್ತಿತ್ತು. ಒಂದುದಿನ ಎರಡು ಯುವ ಹಂಸಗಳು ಆಹಾರವನ್ನು ಅನ್ವೇಷಿಸುವಾಗ ಆತನೊಂದಿಗೆ ಪರಿಚಯ ಬೆಳೆಸಿದವು. ಅಲ್ಪಕಾಲದಲ್ಲೇ ಅವರೆಲ್ಲಾ ಮಿತ್ರರಾದರು. ಒಂದುದಿನ ಹಂಸವು ಆಮೆಗೆ ಹೀಗೆ ಹೇಳಿತು: "ಮಿತ್ರ ಹಿಮಾಲಯದಲ್ಲಿ ಚಿತ್ರಕೂಟ ಪರ್ವತವೆಂಬುದೊಂದಿದೆ. ಅದು ಸುವರ್ಣ ವರ್ಣದ್ದು. ಅದು ವಾಸಿಸಲು ಅತ್ಯಂತ ಮಧುರವಾದುದು, ನಮ್ಮೊಂದಿಗೆ ಅಲ್ಲಿ ಬರಲು ಇಚ್ಛಿಸುವೆಯಾ?"
            "ನನಗೆ ಅಂತಹ ಆಸೆಯಿದೆ, ಆದರೆ ನಾನು ಅಲ್ಲಿಗೆ ಹೇಗೆತಾನೇ ಬರಬಲ್ಲೆ."
            "ನೀನು ಪೂರ್ಣವಾಗಿ ಬಾಯಲ್ಲಿ ನಿಯಂತ್ರಣವಿರಿಸಿದ್ದೇ ಆದರೆ ನಾವು ಕರೆದೊಯ್ಯಬಲ್ಲೆವು."
            ಅದಕ್ಕೆ ಆಮೆ ಒಪ್ಪಿತು. ಆಗ ಹಂಸಗಳು ಗಟ್ಟಿಯಾದ ಕೋಲೊಂದನ್ನು ತೆಗೆದುಕೊಂಡು ಬಂದವು. ಆಮೆಗೆ ನಡುವೆ ಕಚ್ಚಿಕೊಂಡು ಬಾಯ್ಬಿಡದೆ ಹಾಗೇ ಇರಲು ಸೂಚಿಸಿ, ತಾವು ಎರಡು ಬದಿಯಲ್ಲಿ ಕಚ್ಚಿಕೊಂಡು ಆಕಾಶದಲ್ಲಿ ಹಾರಿದವು.
            ಹಾಗೆ ಅವು ಆಕಾಶದಲ್ಲಿ ಹಾರುತ್ತಿರುವಾಗ, ಭೂಮಿಯಲ್ಲಿದ್ದ ಕೆಲ ಹುಡುಗರು "ನೋಡಲ್ಲಿ, ಹೇಗೆ ಆ ಹಂಸಗಳು ಆಮೆಯನ್ನು ತೆಗೆದುಕೊಂಡು ಹೋಗುತ್ತಿವೆ" ಎಂದರು. ಅದು ಕೇಳಿದ ಆಮೆಗೆ ಕೋಪವುಂಟಾಗಿ "ಇದರಿಂದ ನಿಮಗೇನು?" ಎಂದು ಹೇಳಲು ಬಾಯಿಬಿಟ್ಟಿತು. ತಕ್ಷಣ ಅಕಾಶದಿಂದ ವಾರಣಾಸಿಯ ನಗರದ ಅರಮನೆಯ ಭೂಮಿಗೆ ಬಿದ್ದು ಎರಡು ತುಂಡಾಗಿ ಸತ್ತಿತು.
            ಹೀಗೆ ಕೋಕಾಲಿಕನ ಹಿಂದಿನ ಜನ್ಮದ ವಿವರ ತಿಳಿಸಿ, ಈ ಮೇಲಿನ ಗಾಥೆಯನ್ನು ತಿಳಿಸಿದರು. 

No comments:

Post a Comment