Friday 4 September 2015

dhammapada/nagavagga/23.8/mara

ಪುಣ್ಯ ಹಾಗು ಪ್ರಜ್ಞೆಯ ಗಳಿಕೆಯೇ ಸುಖವು
"ಅವಶ್ಯಕತೆ ಇದ್ದಾಗ ಸಹಾಯ ಮಾಡುವ ಗೆಳೆತನ ಸುಖಕರ,
ತನ್ನಲ್ಲಿ ಇರುವಷ್ಟರಿಂದಲೇ ತೃಪ್ತಿ ಹೊಂದುವಿಕೆ ಸುಖಕರ,
ಜೀವಿತದ ಅಂತ್ಯಕಾಲದಲ್ಲಿ ಗಳಿಸಿದ ಪುಣ್ಯವೇ ಸುಖಕರ,
ಸರ್ವ ದುಃಖಗಳನ್ನು ನಿಮರ್ೂಲಗೊಳಿಸುವುದೇ ಸುಖಕರ."          (331)

"ಮಾತೆಗೆ ಸೇವೆ ಸಲ್ಲಿಸುವುದು ಲೋಕದಲ್ಲಿ ಸುಖವು
ಹಾಗೆಯೇ ಪಿತೃವಿಗೂ ಸೇವೆ ಸಲ್ಲಿಸುವುದು ಸುಖವು
ಸುಖವು ಸಮಣರಿಗೆ ಸೇವೆ ಸಲ್ಲಿಸುವುದು ಲೋಕದಲ್ಲಿ
ಹಾಗೆಯೇ ಶ್ರೇಷ್ಠರಿಗೆ ಸೇವೆ ಸಲ್ಲಿಸುವುದು ಸುಖವು."       (332)

"ಜೀವನದುದ್ದಕ್ಕೂ ಶೀಲಪಾಲನೆ ಸುಖ,
ಸುಖವು ಅವಿಚಲ ಶ್ರದ್ಧೆಯನ್ನು ಹೊಂದಿರುವುದು,
ಸುಖವು ಪ್ರಜ್ಞೆಯ ಗಳಿಸಿರುವುದು
ಪಾಪವನ್ನು ಮಾಡದೆ ಇರುವುದೇ ಸುಖವು."   (333)



ಗಾಥ ಪ್ರಸಂಗ 23:8
ಮಾರನ ಪ್ರಲೋಭನೆ

            ಒಮ್ಮೆ ಭಗವಾನರು ಹಿಮಾಲಯ ಪ್ರಾಂತ್ಯದ ರಾಜ್ಯಗಳಲ್ಲಿ ವಿಹರಿಸುತ್ತಿದ್ದರು. ಆಗಿನ ಸಮಯದಲ್ಲಿ ರಾಜರುಗಳು ತಮ್ಮ ಆಳ್ವಿಕೆಯಲ್ಲಿ ದಬ್ಬಾಳಿಕೆ ನಡೆಸುತ್ತಿದ್ದರು, ನಿರಂಕುಶತ್ವದಿಂದ ಆಳುತ್ತಿದ್ದರು. ಅವನ್ನೆಲ್ಲಾ ಗಮನಿಸಿದ ಭಗವಾನರು ಜನರಲ್ಲಿ ಅನುಕಂಪಭರಿತರಾದರು. ಆಗ ಅವರು ಹೀಗೆ ಯೋಚಿಸಿದರು:
            "ಯಾರನ್ನೂ ಕೊಲ್ಲದೆಯೇ ಅಥವಾ ಕೊಲ್ಲಲು ಕಾರಣವಾಗದೆಯೇ
            ಚಕ್ರಾಧಿಪತ್ಯವು ನಡೆಸಲು ಸಾಧ್ಯವಿಲ್ಲವೇ?
            ಯಾರನ್ನು ಜಯಿಸದೆಯೇ ಅಥವಾ ಜಯಿಸಲು ಕಾರಣವಾಗದೆಯೇ
            ಚಕ್ರಾಧಿಪತ್ಯವು ನಡೆಸಲು ಸಾಧ್ಯವಿಲ್ಲವೇ?
            ಯಾರಿಗೂ ದುಃಖನೀಡದೆಯೇ ಅಥವಾ ದುಃಖಕ್ಕೆ ಕಾರಣರಾಗದೆಯೇ
            ಚಕ್ರಾಧಿಪತ್ಯವು ನಡೆಸಲು ಸಾಧ್ಯವಿಲ್ಲವೇ?
            ನ್ಯಾಯ ಹಾಗು ಧಮ್ಮಬದ್ಧವಾಗಿ ಚಕ್ರಾಧಿಪತ್ಯ ನಡೆಸಲು ಸಾಧ್ಯವಿಲ್ಲವೆ?"

            ಆಗ ಮಾರನು ತನ್ನ ಚಿತ್ತದಿಂದ ಭಗವಾನರ ಚಿತ್ತವನ್ನು ಓದಿದನು. ಆದರೆ ತಪ್ಪಾಗಿ ಗ್ರಹಿಸಿದನು. ಭಗವಾನರು ಇಚ್ಛಿಸಿದ್ದು ರಾಜರಲ್ಲಿ ಪರಿವರ್ತನೆ, ಆದರೆ ಮಾರನು ಭಗವಾನರೇ ಚಕ್ರಾಧಿಪತ್ಯ ಬಯಸುತ್ತಿರುವರು ಎಂದು ತಪ್ಪಾಗಿ ಭಾವಿಸಿದನು.
            "ಓಹೋ, ಇವರು ಜಾಗ್ರತೆ ತಪ್ಪಿರುವಂತಿದೆ, ಚಕ್ರಾಧಿಪತ್ಯದ ಬಗ್ಗೆ ಚಿಂತಿಸುತ್ತಿರುವವರು, ಅವರ ಈ ಆಕಾಂಕ್ಷೆಯನ್ನೇ ಹಿಡಿದು ಅದನ್ಯಾಕೆ ವೃದ್ಧಿಸಬಾರದು?" ಎಂದುಕೊಳ್ಳುತ್ತಾ ಮಾರನು, ಭಗವಾನರಲ್ಲಿಗೆ ಬಂದು "ಚಕ್ರಾಧಿಪತ್ಯ ಗಳಿಸಿ, ನಿಮಗೆ ಅತ್ಯಂತ ಸುಲಭವಾದುದು, ನೀವು ಮಾತ್ರವೇ ಅಹಿಂಸೆಯಿಂದ ಆಳಬಲ್ಲಿರಿ, ನೀವು ಮಾತ್ರವೇ ಜನರಿಗೆ ನ್ಯಾಯ ಮತ್ತು ಧರ್ಮದ ಆಡಳಿತ ನೀಡಬಲ್ಲಿರಿ" ಎಂದು ಉತ್ತೇಜಿಸಿದನು.
            ಆಗ ಭಗವಾನರು ಆತನಿಗೆ ಹೀಗೆ ಹೇಳಿದರು: "ಪಾಪಿ ಮಾರನೇ, ಏನನ್ನು ಕಂಡು ಈ ರೀತಿ ಹೇಳುತ್ತಿರುವೆ?"ೆ ಎಂದರು
            "ಭಗವಾನರು ನಾಲ್ಕು ಇದ್ದಿಪಾದಗಳನ್ನು ಪರಿಪೂರ್ಣವಾಗಿ ವೃದ್ಧಿಸಿಹರು, ತಮ್ಮ ದೃಢಸಂಕಲ್ಪವೇ ಸಾಕು, ತಾವು ಈ ರೀತಿ ಇಚ್ಛಿಸಿದರೆ 'ಪರ್ವತಗಳ ರಾಜ ಹಿಮಾಲಯವು ಚಿನ್ನವಾಗಲಿ' ಎಂದರೆ ಕೂಡಲೇ ಅದು ಚಿನ್ನವಾಗುವುದು. ಆ ಐಶ್ವರ್ಯದಿಂದ ಮಾಡಬಹುದಾದ ಕಾರ್ಯವೆಲ್ಲಾ ಮಾಡಬಹುದು. ಹೀಗೆ ನೀವು ನ್ಯಾಯಪರತೆಯಿಂದ ಮತ್ತು ಧರ್ಮದಿಂದ ಚಕ್ರಾಧಿಪತ್ಯವನ್ನು ನಡೆಸಬಹುದು" ಎಂದೆಲ್ಲಾ ಮಾರನು ನುಡಿದನು.
            ಆಗ ಭಗವಾನರು ಹೀಗೆ ಪ್ರತಿ ನುಡಿದರು:

            "ಇಡೀ ಚಿನ್ನದ ಪರ್ವತವು ಅಪ್ಪಟ ಚಿನ್ನದ ಪರ್ವತವೂ ಸಹಾ ಒಬ್ಬನಿಗೆ ಸಾಕಾಗದು, ಇದನ್ನು ಅರಿತು ಮಾನವನು ನ್ಯಾಯಪರತೆಯಿಂದ ಸಾಗಲಿ, ಪ್ರಜ್ಞಾಶಾಲಿಯು ಉದಯಿಸುತ್ತಿರುವ ದುಃಖಗಳನ್ನು ಕಂಡು ಹೇಗೆ ತಾನೇ ಸುಖವೆಂದು ಸಂಭ್ರಮಿಸಲು ಸಾಧ್ಯ! ಅದರಲ್ಲೇ ಅನುರಕ್ತನಾಗಲು ಸಾಧ್ಯ!"
            "ಜೀವಿಯ ಆಧಾರವು ಲೋಕದಲ್ಲಿ ಅಂಟುವುದೇ ಆಗಿದೆ, ಇದನ್ನು ಅರಿತು ಅಂಟುವಿಕೆಯೊಂದನ್ನೇ ದಮಿಸಿಲಿ."

            "ನಾನು ನಿನಗೆ ಮತ್ತೊಮ್ಮೆ ಉಪದೇಶಿಸಿದ್ದೇನೆ, ಮಾರನೇ, ನಿನ್ನನ್ನು, ನನ್ನೊಂದಿಗೆ ಹೋಲಿಸಿಕೊಳ್ಳಬೇಡ. ಹೀಗಾಗಿಯೇ ನನ್ನ ಮತ್ತು ನನ್ನ ಬೋಧನೆ ಒಂದೇ ಅಲ್ಲ. ನನ್ನ ಮೇಲೆ ಪ್ರಭಾವ ಬೀರುವ ಪ್ರಯತ್ನಬೇಡ. ಹೀಗಾಗಿಯೇ ನಾನು ನಿನಗೆ ಬುದ್ಧಿ ಹೇಳುವೆ" ಎಂದು ಭಗವಾನರು ಆತನ ತಪ್ಪು ತಿದ್ದಿದರು. 

No comments:

Post a Comment