Saturday 25 July 2015

dhammapada/dhammatthavagga/19.5/artificiality

ಚಾರಿತ್ರ್ಯದಿಂದಲೇ ನೈಜ ಸೌಂದರ್ಯ

"ಚಾತುರ್ಯಯುತ ವ್ಯಾಕರಣಬದ್ಧ ಮಾತಿನಿಂದಾಗಲಿ,
ಸುವರ್ಣ ಸುಂದರಕಾಯದಿಂದಾಗಲಿ ಒಬ್ಬನನ್ನು
ಸಹೃದಯ ಸುರೂಪಿ ಎನ್ನಲಾಗದು, ಏಕೆಂದರೆ
ಆತನಲ್ಲಿ ಈಷರ್ೆ, ಸ್ವಾರ್ಥ ಹಾಗು ವಂಚಕತನವಿದ್ದರೆ
ಆತನನ್ನು ಸಾಧು ರೂಪ ಎನ್ನಲಾಗದು."        (262)

"ಆದರೆ ಯಾರಲ್ಲಿ ಇವೆಲ್ಲಾ ಕತ್ತರಿಸಲ್ಪಟ್ಟಿವೆಯೋ
ಬೇರುಸಹಿತ ಕೀಳಲ್ಪಟ್ಟಿವೆಯೋ, ಪೂರ್ಣ ನಾಶವಾಗಿವೆಯೋ
ಯಾರಲ್ಲಿ ದ್ವೇಷವೇ ಇಲ್ಲವೋ ಅಂತಹ ಮೇಧಾವಿಗೆ ಮಾತ್ರ
ಸಾಧು ರೂಪ (ಸುರೂಪಿ) ಎನ್ನಬಹುದು."       (263)

ಗಾಥ ಪ್ರಸಂಗ 19:5
ಕೃತ್ರಿಮ ಸಾಧುಪರತೆ

            ಶ್ರಾವಸ್ತಿಯ ಕೆಲ ಭಿಕ್ಷುಗಳಿಗೆ ಕಿರಿಯ ಭಿಕ್ಷುಗಳು (ಸಾಮಣೇರರು) ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉದಾಹರಿಸುವುದಾದರೆ ಚೀವರಗಳಿಗೆ ಬಣ್ಣ ಹಾಕುವುದು, ಇತ್ಯಾದಿ. ಇದನ್ನು ಇತರ ಭಿಕ್ಷುಗಳು ನೋಡಿದರು. ಆಗ ಅವರು ತಮ್ಮಲ್ಲಿಯೇ ಹೀಗೆ ಹೇಳಿಕೊಂಡರು: "ನಾವು ಹಿರಿಯರೇ ಆಗಿದ್ದೇವೆ, ನಮಗೂ ಸಹಾ ಈ ರೀತಿಯ ಸೇವೆಯು ಬೇಕಾಗಿದೆ. ನಾವು ಭಗವಾನರಲ್ಲಿಗೆ ಹೋಗಿ ಇದೇ ರೀತಿಯ ಸೇವಾವ್ಯವಸ್ಥೆ ಮಾಡಿಕೊಂಡರೆ ನಮ್ಮ ಗೌರವ, ಖ್ಯಾತಿ ಎರಡೂ ಹೆಚ್ಚಾಗುವುದು."
            ಹೀಗಾಗಿ ಅವರು ಭಗವಾನರಲ್ಲಿಗೆ ಬಂದರು. ನಂತರ ಹೀಗೆ ಕೇಳಿಕೊಂಡರು: "ಭಗವಾನ್, ನಾವು ಈಗ ಜ್ಞಾನದಲ್ಲಿ ವಿಶಾರದರಾಗಿದ್ದೇವೆ. ನಮ್ಮನ್ನೇ ಹಿಂಬಾಲಿಸುವಂತೆ ಸಾಮಣೇರರಿಗೆ ಹೇಳುವುದು ಉಚಿತವೆಂದು ಭಾವಿಸಿದ್ದೇವೆ. ಅವರು ಪರರಲ್ಲಿ ಧಮ್ಮವಿನಯ ಕಲಿತಿದ್ದರೂ, ನಮ್ಮಲ್ಲಿಯೇ ಮುಂದುವರೆಯಲಿ".

            ಭಗವಾನರಿಗೆ ಅವರ ನೀಚ ಉದ್ದೇಶ ಅರ್ಥವಾಯಿತು. ಆಗ ಅವರು ಹೀಗೆ ಹೇಳಿದರು: "ನೀವು ವಾಕ್ಪಟುಗಳೆಂದು ನಾನು ಬಲ್ಲೆನು, ಆದರೂ ಕೇವಲ ಇದೊಂದೇ ಅರ್ಹತೆ ನಿಮಗೆ ಸಾಲದು. ಯಾರಲ್ಲಿ ಈಷರ್ೆ, ಸ್ವಾರ್ಥ, ವಂಚಕತನ ಪೂರ್ಣವಾಗಿ ನಾಶವಾಗಿದೆಯೋ ಆತನೇ ನಾಯಕನಾಗಲು ಸಾಧುವಾಗಲು ಅರ್ಹ". ನಂತರ ಭಗವಾನರು ಈ ಮೇಲಿನ ಗಾಥೆಗಳನ್ನು ಹೇಳಿದರು.

No comments:

Post a Comment