Monday 13 July 2015

dhammapada/malavagga/18.12/questionsofsubhaddha

ಬೇರೆಡೆಯಲ್ಲಿ ಅರಹಂತರಿಲ್ಲ

"ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಪ್ರಜೆಗಳು ಪ್ರಾಪಂಚಿಕತೆಯಲ್ಲಿ ರತರಾಗಿರುವರು,
ತಥಾಗತರು ನಿಷ್ಪಾಪಂಚಿಕರಾಗಿದ್ದಾರೆ."        (254)

"ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಸಂಖಾರಗಳು ಶಾಶ್ವತವಲ್ಲ,
ಬುದ್ಧರಲ್ಲಿ ಅಸ್ಥಿರತೆಯಿಲ್ಲ."            (255)

ಗಾಥ ಪ್ರಸಂಗ 18:12
ಸುಭದ್ಧ ಪರಿವ್ರಾಜಕನ ಶ್ರೇಷ್ಠ ಪ್ರಶ್ನೆಗಳು

            ಆಗ ಭಗವಾನರು ಕುಸಿನಾರ ನಗರದ ಮಲ್ಲರ ಉಪವತ್ತನದ ಸಾಲವೃಕ್ಷಗಳ ವನದಲ್ಲಿ ತಂಗಿದ್ದರು. ಅವರು ಪರಿನಿಬ್ಬಾಣ ಪಡೆಯುವವರಿದ್ದರು. ಅವರು ಎರಡು ಸುಂದರ ಅವಳಿ ಸಾಲವೃಕ್ಷಗಳ ನಡುವೆ ತಥಾಗತ ಶಯ್ಯೆಯಲ್ಲಿ ಮಲಗಿದ್ದರು.
*  *  *
            ಸುಭದ್ದನ ಸೋದರನು ತನ್ನ ಕೃಷಿಯ ಮೊದಲ ಫಲದಿಂದ 9 ಬಾರಿ ದಾನ ಮಾಡಿದ್ದನು. ಆದರೆ ಸುಭದ್ದನು ದಾನದ ಇಚ್ಛೆಯಿಲ್ಲದೆ ದಾನ ಮಾಡಿರಲಿಲ್ಲ. ಆದರೆ ಕೊನೆಗೊಮ್ಮೆ ದಾನ ಮಾಡಿದ್ದನು. ಈ ರೀತಿಯ ದಾನರಹಿತತೆಯಿಂದಾಗಿ ಅತನು ಬುದ್ಧರನ್ನು ದಶರ್ಿಸುವ ಭಾಗ್ಯವನ್ನು ಪಡೆದಿರಲಿಲ್ಲ. ಹೀಗಾಗಿ ಆತನು ಭಗವಾನರನ್ನು ಬೋಧಿಪ್ರಾಪ್ತಿಯ ಸಮಯದಲ್ಲಿಯಾಲಿ, ನಂತರವಾಗಲಿ ದಶರ್ಿಸಲೇ ಇಲ್ಲ.
*  *  *
            ಭಗವಾನರ ಪರಿನಿಬ್ಬಾಣದ ಕಾಲವು ಅತಿ ಹತ್ತಿರವಾಗಿತ್ತು. ಆಗ ಸುಭದ್ದನು ಹೀಗೆ ಯೋಚಿಸಿದನು: "ನನ್ನಲ್ಲಿರುವ ಸಂಶಯಗಳನ್ನು ನಾನು ಹಲವಾರು ಹಿರಿಯ ದಾರ್ಶನಿಕರ ಬಳಿ ಪ್ರಶ್ನಿಸಿದ್ದೇನೆ. ಆದರೂ ಅವರ ಉತ್ತರದಿಂದ ಪರಿಹಾರವಾಗಲಿಲ್ಲ, ನಾನು ಭಗವಾನರನ್ನು ವಯಸ್ಸಿನಲ್ಲಿ ಕಿರಿಯರೆಂದು ಅವರ ಬಳಿಗೆ ಹೋಗಲೇ ಇಲ್ಲ. ಹೀಗಾಗಿ ಪ್ರಶ್ನಿಸಲೂ ಇಲ್ಲ. ಈಗಂತೂ ಭಗವಾನರು ಪರಿನಿಬ್ಬಾಣ ಪಡೆಯಲಿದ್ದಾರೆ, ಈಗಲು ನಾನು ಹೋಗದಿದ್ದರೆ ನಂತರ ನಾನು ಖಂಡಿತವಾಗಿ ಪಶ್ಚಾತ್ತಾಪಪಡಬೇಕಾಗುವುದು" ಎಂದು ಚಿಂತಿಸಿ ಆತನು ಭಗವಾನರ ಬಳಿಗೆ ಬಂದನು.
            ಆದರೆ ಭಗವಾನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದಾಗಿ ಭಂತೆ ಆನಂದರು ಸುಭದ್ಧನನ್ನು ತಡೆಯಲು ಯತ್ನಿಸಿದರು. ಆದರೆ ಅನುಕಂಪಭರಿತರಾದ ಭಗವಾನರು ಆತನ ಜಿಜ್ಞಾಸೆಯನ್ನು ಪರಿಹರಿಸಲು "ಆನಂದ, ಸುಭದ್ದನನ್ನು ತಡೆಯಬೇಡ, ಆತನಿಗೆ ಪ್ರಶ್ನಿಸಲು ಬಿಡು" ಎಂದರು.
            ನಂತರ ಸುಭದ್ದನು ಪರದೆ ದಾಟಿ ಒಳಪ್ರವೇಶಿಸಿದನು. ಭಕ್ತಿಯಿಂದ ಭಗವಾನರ ಪಾದದಡಿ ಕುಳಿತು, ಭಗವಾನರಲ್ಲಿ ಈ ಪ್ರಶ್ನೆಗಳನ್ನು ಕೇಳಿದನು:
1)          ಆಕಾಶದಲ್ಲಿ ಪಥಗಳಿವೆಯೇ?
2)          ಬುದ್ಧ ಶಾಸನದ ಹೊರತಾಗಿ ಬಾಹ್ಯದಲ್ಲಿ (ಅನ್ಯ ಪಂಥಿಯರಲ್ಲಿ) ಆರ್ಯರು (ಅರಹಂತರು, ಅನಾಗಾಮಿಗಳು, ಸಕದಗಾಮಿಗಳು, ಸೋತಪನ್ನರು) ಇರುವರೇ?
3)          ಸಂಖಾರಗಳು ಶಾಶ್ವತವೇ?
            ಆಗ ಭಗವಾನರು ಈ ಮೂರು ಪ್ರಶ್ನೆಗಳಿಗೆ ನಕಾರಾತ್ಮಕವಾಗಿ ಈ ಗಾಥೆಯ ಮೂಲಕ ತಿಳಿಸಿದರು.


            (ಅಂದರೆ ಆಕಾಶದಲ್ಲಿ ಭೂಮಿಯ ಮೇಲಿರುವಂತೆ ಪ್ರತ್ಯೇಕ ದಾರಿಗಳು, ಹೆದ್ದಾರಿಗಳು ಇರುವುದಿಲ್ಲ. ಇಡೀ ಆಕಾಶವೇ ಮಾರ್ಗವಾಗಿದೆ ಎಂದರ್ಥ. ಬೇರೆ ಧರ್ಮಗಳಲ್ಲಿ ನಾವು ಅರಹಂತರನ್ನು (ಆರ್ಯ) ಕಾಣಲಾಗುವುದಿಲ್ಲ. ಇದಕ್ಕೆ ತಾಳೆಯಿದೆ, ಅರಹಂತರಾದವರು ಪೂರ್ಣ ಅಹಿಂಸೆಯಿಂದಿರುವವರು, ಸುಶೀಲವಂತರು, ತ್ಯಾಗಮಯಿಗಳು, ಅನಾಸಕ್ತರು, ಸಹನಾಶೀಲರು, ಪೂರ್ಣಪ್ರಜ್ಞರು, ಸತ್ಯಶೀಲರು, ಸಮಚಿತ್ತವುಳ್ಳವರು, ನಿಷ್ಪಪ್ರಾಪಂಚಿಕರು ಆಗಿರುತ್ತಾರೆ. ಇವೆಲ್ಲಾ ಜಗತ್ತಿನ ಬೇರ್ಯಾವ ದಾರ್ಶನಿಕರಲ್ಲಿ ನಾವು ಕಾಣಲಾಗುವುದಿಲ್ಲ. ಅವರಲ್ಲಿ ಒಂದಲ್ಲ ಒಂದು ಬಂಧನವನ್ನು ಸ್ವತಃ ಕಾಣುತ್ತೇವೆ. ಎಲ್ಲಿ ಆರ್ಯಸತ್ಯಗಳು ಇವೆಯೋ, ಅಲ್ಲಿ ಮಾತ್ರ ನಾವು ಆರ್ಯ ಸಮಣರನ್ನು ಕಾಣಬಹುದಾಗಿದೆ ಹೊರತು ಬೇರೆಡೆ ಅಲ್ಲ. ಏಕೆಂದರೆ ಅವರು ಮಾತ್ರವೇ ಅಷ್ಠಾಂಗಮಾರ್ಗ ಪೂರ್ಣವಾಗಿ ಪಾಲಿಸುತ್ತಾರೆ. ಇನ್ನೂ ಕೆಲವು ಸಂಖಾರಗಳನ್ನು ಅನ್ಯ ಧರ್ಮದಲ್ಲಿ ಶಾಶ್ವತ ಎನ್ನುವರು. ಉದಾಹರಣೆಗೆ ಆನಂದ ಅಥವಾ ಜ್ಞಾನ ಇತ್ಯಾದಿ. ಆದರೆ ಬೌದ್ಧರ ಪ್ರಕಾರ ಯಾವ ಸಂಖಾರವೂ ಶಾಶ್ವತವಲ್ಲ.)

No comments:

Post a Comment