Monday 5 October 2015

dhammapada/brahmanavagga/26.16/akkosabharadvaja

ಸಹನಾವಂತನೇ ಬ್ರಾಹ್ಮಣ
ಯಾರು ಕೋಪರಹಿತನಾಗಿ ಬಯ್ಗಳನ್ನು,
ಹೊಡೆತಗಳನ್ನು ಮತ್ತು ಬಂಧನವನ್ನು ಸಹಿಸುತ್ತಾನೋ,
ಯಾರ ಕ್ಷಾಂತಿ ಬಲವು (ಕ್ಷಮಾಯುತ ಸಹನೆ) ಸೈನ್ಯದಷ್ಟೇ ಬಲಿಷ್ಠವೋ,
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (399)
ಗಾಥ ಪ್ರಸಂಗ 26.16
ಕೋಪಿಷ್ಠರ ವಂಶವನ್ನು ಧಮಿಸಿದ ಭಗವಾನರ ನೈಪುಣ್ಯತೆ

                ಆಕ್ಕೋಸ (ಆಕ್ರೋಶ) ಭಾರಧ್ವಜನಿಗೆ ಸೋದರನೊಬ್ಬನಿದ್ದನು. ಆತನ ಹೆಸರು ಭಾರದ್ವಜ ಮತ್ತು ಆತನ ಪತ್ನಿಯ ಹೆಸರು ಧನಂಜನೀ. ಆಕೆ ಭಗವಾನರ ಬೋಧನೆ ಆಲಿಸಿ ಸೋತಪನ್ನಳಾಗಿದ್ದಳು. ಹೀಗಾಗಿ ಆಕೆ ಕೆಮ್ಮಲಿ, ಸೀನಲಿ ಅಥವಾ ಎಡವಲಿ ಆಕೆಯ ಬಾಯಿಂದ ಈ ಮಂತ್ರವು ಹೊರಹೊಮ್ಮುತ್ತಿತ್ತು. ಅದೆಂದರೆ: ನಮೋ ತಸ್ಸ ಭಗವತೋ ಅರಹತೋ ಸಮ್ಮಾಸಂಬುದ್ಧಸ್ಸ ಒಂದುದಿನ ಬ್ರಾಹ್ಮಣರಿಗೆ ಆಹಾರ ಬಡಿಸುವಾಗ ಆಕೆಯು ಎಡವಿದಳು. ತಕ್ಷಣ ಆಕೆಯು ಎಂದಿನಂತೆ ನಮೋ ತಸ್ಸ ಭಗವತೋ ಅರಹತೋ ಸಮ್ಮಾಸಂಬುದ್ಧಸ್ಸ ಎಂದಳು.
                ಇದರಿಂದಾಗಿ ಆಕೆಯ ಪತಿಯಾದ ಬ್ರಾಹ್ಮಣನು ಅತಿಯಾಗಿ ಆಕ್ರೋಶಗೊಂಡನು. ಆತನು ತನ್ನಲ್ಲೇ ಹೀಗೆ ಕೋಪದಿಂದ ಹೇಳಿಕೊಂಡನು: ಈ ಹಾಳು ಹೆಂಗಸು ಯಾವಾಗಲೂ ಎಲ್ಲೇ ಎಡವಲಿ, ಆ ಸಮಣನಿಗೆ ಹೀಗೆ ಪ್ರಶಂಸಿಸುತ್ತಾಳೆ. ನಂತರ ಆತನು ಆಕೆಗೆ ಹೀಗೆ ಹೇಳಿದನು: ನೋಡು, ದುಷ್ಟೆ, ನಾನು ಆ ನಿನ್ನ ಗುರುವಿನ ಬಳಿಗೆ ಹೋಗುತ್ತಿರುವೆ. ಆತನನ್ನು ವಾದದಲ್ಲಿ ಜಜ್ಜಿಹಾಕುವೆ.
                ಒಳ್ಳೆಯದು ಹೊರಡಿ, ಅವರನ್ನು ವಾದದಲ್ಲಿ ಸೋಲಿಸುವಂತಹ ಮಾನ ಈ ಜಗತ್ತಿನಲ್ಲಿ ನಾ ಕಾಣೆ. ಹಾಗಿರುವಾಗಲೂ ನಿಮ್ಮ ಪ್ರಶ್ನೆ ಕೇಳಿ ನಿಮಗೆ ಅರಿವಾಗುವುದು.
                ಆಗ ಆ ಬ್ರಾಹ್ಮಣನು ಭಗವಾನರು ಇದ್ದಲ್ಲಿಗೆ ಬಂದನು. ಅವರಿಗೆ ನಮಸ್ಕಾರವೂ ಸಹಾ ಹಾಕಲಿಲ್ಲ. ನಂತರ ಒಂದು ಬದಿಯಲ್ಲಿ ನಿಂತು ಅಹಂಕಾರದಿಂದ ಪ್ರಶ್ನೆಯನ್ನು ಗಾಥೆಯ ಮುಖಾಂತರ ಹೀಗೆ ಕೇಳಿದನು:
                ಯಾವುದನ್ನು ಕೊಂದರೆ ಜೀವನದಲ್ಲಿ ಸುಖಿಯಾಗಿರಬಹುದು,
                ಯಾವುದನ್ನು ನಾಶಗೊಳಿಸಿದರೆ ದುಃಖವಾಗಲಿ (ಪಶ್ಚಾತ್ತಾಪ) ಇರುವುದಿಲ್ಲ.
                ಯಾವ ಒಂದನ್ನು ನಾಶಗೊಳಿಸಲು ನೀವು ಸಲಹೆ ನೀಡುವಿರಿ.
                ಅದಕ್ಕೆ ಉತ್ತರವಾಗಿ ಭಗವಾನರು ಹೀಗೆ ಗಾಥೆಯಲ್ಲಿ ನುಡಿದರು:
                ಮಾನವನು ಕೋಪವನ್ನು ಕೊಲ್ಲಲಿ, ಆತನು ಸುಖಿಯಾಗಿರಬಲ್ಲನು,
                ಮಾನವನು ಕೋಪವನ್ನೇ ಕೊಲ್ಲಲಿ, ಆತನಿಗೆ ದುಃಖವಾಗಲಿ
                (ಪಶ್ಚಾತ್ತಾಪವಾಗಿ) ಇರಲಾರದು,”

                ಸಿಹಿಯಾದ ಮೇಲ್ಭಾಗವನ್ನು ಹೊಂದಿ, ವಿಷಯುತ
                ಬೇರನ್ನು ಕೋಪವು ಹೊಂದಿದೆ. ಬ್ರಾಹ್ಮಣನೇ,
                ಆದ್ದರಿಂದಾಗಿ ಕೋಪದ ನಾಶವನ್ನು ಶ್ರೇಷ್ಠರು ಸ್ತುತಿಸಿದ್ದಾರೆ.
                ಯಾವಾಗ ಇದು ನಾಶಗೊಳಿಸಲಾಗುವುದೋ ಆಗ ಯಾವುದೇ ದುಃಖವಿರುವುದಿಲ್ಲ.
                ಈ ಉತ್ತರದಿಂದ ಆ ಬ್ರಾಹ್ಮಣನು ಅತ್ಯಂತ ಪ್ರಭಾವಿತನಾಗಿ ಭಿಕ್ಷುವಾದನು. ನಂತರ ಸ್ವಲ್ಪ ಕಾಲದಲ್ಲೇ ಅಗಾಧ ಪರಿಶ್ರಮಯುತನಾಗಿ ಅರಹಂತನಾದನು.
                ಈ ವಿಷಯ ಆತನ ತಮ್ಮನಾದ ಅಕ್ಕೋಸ ಭಾರಧ್ವಜನಿಗೆ ತಿಳಿಯಿತು. ಆತನು ಅತ್ಯಂತ ಆಕ್ರೋಶದಿಂದಾಗಿ ಭಗವಾನರ ಬಳಿಗೆ ಬಂದನು. ಹಾಗು ಭಗವಾನರಿಗೆ ಅಪಾರವಾಗಿ ನಿಂದಿಸಲು ಆರಂಭಿಸಿದನು. ಆತನು ಹೀನವಾದ ಹಾಗು ಅಸಹ್ಯವಾದ, ಕರ್ಣಕಠೋರವಾದ ನುಡಿಗಳಿಂದ ಬೈಯ್ಗಳಗಳನ್ನು ಆಡಿದನು. ಅದನ್ನೆಲ್ಲಾ ಶಾಂತವಾಗಿ ಆಲಿಸಿದ ಭಗವಾನರು ಆತನಿಗೆ ಹೀಗೆ ಕೇಳಿದರು:
ಓ ಬ್ರಾಹ್ಮಣನೇ, ಊಹಿಸು! ನಿನ್ನ ಅತಿಥಿಗಳಿಗೆ ಆಹಾರ ನೀಡುವೆ, ಆದರೆ ಅವರು ಅದನ್ನು ಸ್ವೀಕರಿಸಿದೆ, ನಿನ್ನ ಗೃಹವನ್ನೇ ಬಿಟ್ಟು ಹೊರಟುಹೋದರೆ ಅದು ಯಾರಿಗೆ ಸೇರುವುದು?
                ಇನ್ಯಾರಿಗೆ, ನನಗೆ ಆ ಆಹಾರ ಸೇರುವುದು.
                ಓ ಬ್ರಾಹ್ಮಣ, ಅದೇರೀತಿಯಲ್ಲಿ, ನೀನು ನನಗೆ ನೀಡಲು ಬಂದಂತಹ ಯಾವುದೇ ಬೈಯ್ಗಳನ್ನು ನಾನು ಸ್ವೀಕರಿಸಲೇ ಇಲ್ಲ. ಹೀಗಾಗಿ ಅದೆಲ್ಲಾ ನಿನಗೆ ಸೇರಿದ್ದಾಗಿದೆ.*
                ತಕ್ಷಣ ಆ ಬ್ರಾಹ್ಮಣನಿಗೆ ಸತ್ಯದ ಅರಿವುಂಟಾಗಿ ಭಗವಾನರ ಪರಮಶ್ರೇಷ್ಠತೆಯು ಅರಿವಾಗುತ್ತದೆ. ತಕ್ಷಣ ಆತನು ಭಗವಾನರ ಕಾಲಿಗೆ ಬಿದ್ದು ಕ್ಷಮೆಯಾಚಿಸಿ, ಆತನು ಸಹಾ ಭಿಕ್ಷುವಾಗಿ ನಂತರದಲ್ಲಿ ಅರಹಂತನಾಗುತ್ತಾನೆ.
                ಇದಾದ ನಂತರ ಈ ಸುದ್ದಿಯನ್ನು ಕೇಳಿದಂತಹ ಆತನ ಇಬ್ಬರು ತಮ್ಮಂದಿರಾದಂತಹ ಸುಂದರಿ ಭಾರಧ್ವಜ ಮತ್ತು ಬಿಲಣ್ಣಿಕ ಭಾರಧ್ವಜರು ಭಗವಾನರನ್ನು ನಿಂದಿಸಿದರು. ಆದರೆ ಭಗವಾನರ ಶಾಂತಿ ಸೌಮ್ಯ ವಿಧಾನಗಳ ಪ್ರಜ್ಞಾಯುತ ವರ್ತನೆಯಿಂದಾಗಿ ಅವರೂ ಸಹಾ ಪ್ರಭಾವಿತರಾಗಿ ಅವರೂ ಸಹಾ ಭಿಕ್ಷುಗಳಾಗಿ ನಂತರ ಅರಹಂತರಾದರು.
                ಈ ವಿಷಯವನ್ನು ಅಂದು ಸಂಜೆ ಭಿಕ್ಷುಗಳು ಮಾತನಾಡುತ್ತಿದ್ದರು: ಓಹ್, ಭಗವಾನರ ಸದ್ಗುಣಗಳು ಎಂತಹ ಅದ್ಭುತವಾದವು. ಈ ನಾಲ್ವರು ಸೋದರರು ಭಗವಾನರನ್ನು ನಿಂದಿಸಿದರೂ ಸಹಾ ಭಗವಾನರು ಸ್ವಲ್ಪ ಮಾತುಗಳನ್ನೇ ಪರಿಣಾತ್ಮಕವಾಗಿ ಆಡಿ ಅವರನ್ನು ಶರಣು ಕೇಳುವಂತೆ ಮಾಡಿದರು. ಭಗವಾನರು ನಿಜಕ್ಕೂ ಪುರುಷದಮ್ಯ ಸಾರಥಿಯಾಗಿದ್ದಾರೆ. ಜೀವಿಗಳನ್ನು ಪಳಗಿಸುವಲ್ಲಿ, ಅಸಮಾನ್ಯ ನೈಪುಣ್ಯತೆ ಹೊಂದಿದವರಾಗಿದ್ದಾರೆ ಎಂದು ಕೊಂಡಾಡುತ್ತಿದ್ದರು.
                ಆಗ ಅಲ್ಲಿಗೆ ಬಂದಂತಹ ಭಗವಾನರು ಭಿಕ್ಷುಗೇ, ಯಾವ ಚಚರ್ೆಯಲ್ಲಿ ತೊಡಗುತ್ತಾ ಇಲ್ಲಿ ಸೇರಿರುವಿರಿ ಎಂದಾಗ
                ಭಗವಾನ್ ತಮ್ಮ ವಿಷಯದಲ್ಲೇ, ತಾವು ಜನರನ್ನು ಪಳಗಿಸುವ ವಿಷಯವನ್ನೇ ಚಚರ್ಿಸುತ್ತಿರುವೆವು.

                ಆಗ ಭಗವಾನರು ಇದಕ್ಕೆ ಉತ್ತರಿಸಿದರು: ಭಿಕ್ಷುಗಳೇ, ನಾನು ಸಹನಾಶೀಲತೆ (ಕ್ಷಾಂತಿ) ಹೊಂದಿದ್ದೇನೆ, ಅಪಾರ ಕ್ಷಮಾಶೀಲತೆ ಹೊಂದಿದ್ದೇನೆ, ಹೀಗಾಗಿಯೇ ನಾನು ಪಾಪಿಗಳ ನಡುವೆಯೂ ಪರಿಶುದ್ಧನಾಗಿರುವುದರಿಂದ, ನಾನು ಅಪಾರ ಜೀವಿಗಳಿಗೆ ಶರಣಾಗಿದ್ದೇನೆ, ಆಶ್ರಯವಾಗಿದ್ದೇನೆ. ಆದ್ದರಿಂದಲೇ ಅವರೆಲ್ಲರೂ ನನ್ನಿಂದ ಪ್ರಭಾವಕ್ಕೆ ಒಳಗಾಗುತ್ತಾರೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment