Monday 5 October 2015

dhammapada/brahmanavagga/26.21/pabbatavasitissa

ಯಾರ ಸ್ನೇಹ ಇಲ್ಲದವನೇ ಬ್ರಾಹ್ಮಣ
ಗೃಹಸ್ಥರಿಂದ ಹಾಗೆಯೇ ಗೃಹ ತೊರೆದವರಿಂದಲೂ
ಬೆರೆಯದೆ, ಮನೆಯಿಲ್ಲದೆ (ಅನಿಕೇತನನಾಗಿ) ಪರಿವ್ರಾಜಕನಾಗಿ,
ಯಾವುದೇ ಬಯಕೆಗಳಿಲ್ಲದೆ ಇರುವಂತಹವನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.      (404)

ಗಾಥ ಪ್ರಸಂಗ 26.21
ಪರ್ವತವಾಸಿ ತಿಸ್ಸ ಮತ್ತು ದೇವತೆ

                ಭಿಕ್ಷು ತಿಸ್ಸನು ಧ್ಯಾನದ ವಿಷಯ ಸ್ವೀಕರಿಸಿ ಪರ್ವತಗಳ ಕಡೆ ಹೊರಟನು. ಅಲ್ಲಿ ಆತನಿಗೊಂದು ಗುಹೆ ಯೋಗ್ಯವಾಗಿರುವಂತೆ ಕಾಣಿಸಿತು. ಆತನು ಅಲ್ಲೇ ವರ್ಷವಾಸದ ಮೂರು ತಿಂಗಳು ಕಳೆದನು. ಆತನು ಪ್ರತಿ ಬೆಳಿಗ್ಗೆ ಆಹಾರಕ್ಕಾಗಿ ಹಳ್ಳಿಯನ್ನು ಪ್ರವೇಶಿಸುತ್ತಿದ್ದನು. ಅಲ್ಲಿ ಮಧ್ಯವಯಸ್ಕ ಸ್ತ್ರೀಯೊಬ್ಬಳು ಪ್ರತಿನಿತ್ಯ ಆಹಾರ ನೀಡುತ್ತಿದ್ದಳು.
                ಭಿಕ್ಷು ತಿಸ್ಸ ವಾಸಿಸುತ್ತಿದ್ದ ಗುಹೆಯಲ್ಲಿ ದೇವತೆಯೊಂದು ವಾಸವಾಗಿತ್ತು. ತಿಸ್ಸರವರ ಪವಿತ್ರ ಜೀವನದಿಂದಾಗಿ, ಆಕೆಗೆ ಅದೇ ಗುಹೆಯಲ್ಲಿ ವಾಸಿಸುವುದು ಕಷ್ಟವಾಗಿ ಹೋಯಿತು. ಆದರೆ ಆಕೆಗೆ ಆ ಭಿಕ್ಷುವನ್ನು ಹೊರಟುಹೋಗು ಎಂದು ಹೇಳಲು ಧೈರ್ಯವಿರಲಿಲ್ಲ. ಹೀಗಾಗಿ ಆಕೆಯೊಂದು ಉಪಾಯ ಮಾಡಿದಳು. ಅದೇನೆಂದರೆ ಆ ಭಿಕ್ಷುವಿನಲ್ಲಿ ತಪ್ಪು ಹುಡುಕಿ, ಅದೇ ಕಾರಣಕ್ಕಾಗಿ ಆತನನ್ನು ಗುಹೆಯಿಂದ ಹೊರಹಾಕುವುದು.
                ತಿಸ್ಸರವರು ಪ್ರತಿನಿತ್ಯ ಆಹಾರಕ್ಕಾಗಿ ಹೋಗುತ್ತಿದ್ದ ಸ್ತ್ರೀಯ ಕಿರಿಯ ಮಗನಲ್ಲಿ ಆವಾಹನೆಯಾಗಲು ಆ ದೇವತೆ ನಿರ್ಧರಿಸಿದಳು. ಆಗ ಆ ದೇವತೆಯು ಆ ಬಾಲಕನ ದೇಹದಲ್ಲಿ ಪ್ರವೇಶಿಸಿ ಆ ಬಾಲಕನು ವಿಚಿತ್ರವಾಗಿ ವತರ್ಿಸುವಂತೆ ಮಾಡಿದಳು. ಆ ಬಾಲಕನು ತಲೆಯನ್ನು ಹಿಂದು ಮುಂದಕ್ಕೆ ಆಡಿಸಲು ನಿಂತನು. ನಂತರ ಕಣ್ಣುಗಳನ್ನು ಅಗಲೀಕರಿಸಿ ಕಣ್ಣುಗಳನ್ನು ತಿರುಗಿಸಲು ಆರಂಭಿಸಿದನು. ಇದನ್ನು ಕಂಡ ಆ ತಾಯಿಯು ಭಯದಿಂದ ಕಿರುಚಿದಳು. ಆಗ ದೇವತೆಯು ಬಾಲಕನ ಬಾಯಿಂದ ಹೀಗೆ ನುಡಿಸಿದಳು: ನಾನು ನಿನ್ನ ಮಗನ ಮೈಯನ್ನು ಹೊಕ್ಕಿದ್ದೇನೆ, ನಿನ್ನ ಬಳಿಗೆ ಭಿಕ್ಷೆಗೆ ಬರುವ ಭಿಕ್ಷು ತನ್ನ ಪಾದವ ತೊಳೆದು ಆ ನೀರನ್ನು ನಿನ್ನ ಮಗನ ಮೇಲೆ ಪ್ರೋಕ್ಷಿಸುವಂತೆ ಮಾಡು, ಆಗ ನಾನು ಬಿಟ್ಟುಹೋಗುತ್ತೇನೆ.
                ಮಾರನೆಯ ದಿನ ಭಿಕ್ಷುವು ಆಹಾರಕ್ಕಾಗಿ ಆಕೆಯ ಮನೆಯತ್ತ ಬಂದರು. ಆಗ ಆಕೆಯು ಸ್ವಾಮಿ, ನನ್ನ ಮಗನ ಆರೋಗ್ಯ ಸರಿಯಿಲ್ಲ, ದಯವಿಟ್ಟು ನೀವು ನಿಮ್ಮ ಪಾದ ತೊಳೆದು ಈತನ ಮೇಲೆ ಸಿಂಪಡಿಸಿರಿ ಎಂದು ಕೇಳಿಕೊಂಡಳು. ಆತನು ಹಾಗೇ ಮಾಡಿದಾಗ ಆ ದೇವತೆಯು ಆ ಬಾಲಕನನ್ನು ಬಿಟ್ಟು ಹೊರಟಿತು. ನಂತರ ಪರ್ವತವಾಸಿ ತಿಸ್ಸರು ಆಹಾರ ಸ್ವೀಕರಿಸಿ, ಪರ್ವತದಲ್ಲಿರುವ ಗುಹೆಯನ್ನು ಪ್ರವೇಶಿಸಲು ಹೋದಾಗ, ಆ ದೇವತೆಯು ಪ್ರತ್ಯಕ್ಷಗೊಂಡು ಅವರಿಗೆ ತಡೆಹಾಕಿತು. ನಾನು ಈ ಗುಹೆಯಲ್ಲಿರುವ ದೇವತೆಯಾಗಿದ್ದೇನೆ, ನೀನು ಭೂತ ಬಿಡಿಸುವ ಮಾಂತ್ರಿಕನಾದ್ದರಿಂದಾಗಿ ನಿನಗೆ ಇಲ್ಲಿ ಪ್ರವೇಶವಿಲ್ಲ.
                ಆಗ ತಿಸ್ಸರು ಹೀಗೆ ಹೇಳಿದರು: ಓ ದೇವತೆಯೇ, ನಾನು ಭಿಕ್ಷುವಾದಾಗಿನಿಂದಲೂ ಪರಿಶುದ್ಧ ಜೀವನವನ್ನೇ ನಡೆಸಿದ್ದೇನೆ, ನಾನು ಯಾವುದೇ ಶೀಲವನ್ನು ಭಂಗ ಮಾಡಿಲ್ಲ. ನನಗೆ ಯಾವ ಮಾಟ ವಿದ್ಯೆಯೂ ತಿಳಿದಿಲ್ಲ.
                ಹಾಗಿದ್ದರೆ ಪ್ರತಿನಿತ್ಯ ನೀನು ಆಹಾರ ಸೇವಿಸುವ ಸ್ತ್ರೀಯ ಮಗನಿಗೆ ಹೊಕ್ಕಿದ ಜೀವಿಗೆ ಬಿಡಿಸಲಿಲ್ಲವೇ?
                ತಕ್ಷಣ ತಿಸ್ಸರಿಗೆ ಇಡೀ ವಿಷಯ ಅರ್ಥವಾಯಿತು, ನಾನು ಯಾವ ಭೂತವನ್ನೂ ಬಿಡಿಸಿಲ್ಲ, ನನ್ನ ಶೀಲ ಭಂಗವಾಗಲೂ ಇಲ್ಲ, ಇದೆಲ್ಲಾ ಈ ದೇವತೆಗೂ ಸಹಾ ತಿಳಿದಿದೆ. ದೇವತೆಯೇ ನನ್ನಲ್ಲಿ ತಪ್ಪು ಹುಡುಕಿಲ್ಲವೆಂದರೆ ನನ್ನ ಶೀಲವು ಅತ್ಯಂತ ಪರಿಶುದ್ಧವಾಗಿಯೇ ಇದೆ. ಹೀಗೆ ಯೋಚಿಸುತ್ತಾ (ಶೀಲಾನುಸ್ಸತಿ ಮಾಡುತ್ತಾ) ಆತನಲ್ಲಿ ದಿವ್ಯವಾದ ಆನಂದವು ಮತ್ತು ಸುಖವು ಉಂಟಾಗಿ ಇಡೀ ಶರೀರವೆಲ್ಲಾ ವ್ಯಾಪಿಸಿತು. ನಂತರ ಹಾಗೆಯೇ ಆ ಗುಹೆಯ ಬಾಗಿಲಲ್ಲಿ ನಿಂತಿರುವಾಗಲೇ ಆತನು ತನ್ನ ಪ್ರಜ್ಞಾಶೀಲತೆಯನ್ನು ತೀಕ್ಷ್ಣಗೊಳಿಸಿ ಹಾಗೆಯೇ ಅರಹಂತನಾದನು.
                ಈಗ ತಿಸ್ಸರು ಆ ದೇವತೆಗೆ ಹೀಗೆಂದರು: ಓ ದೇವತೆಯೇ, ನೀನು ಪರಿಶುದ್ಧವಾದ ಕಲೆರಹಿತನಾದ ಭಿಕ್ಷುವಿನ ಮೇಲೆ ಆರೋಪ ಹೊರಿಸಿದ್ದೀಯೆ. ಮುಂದೆ ಈ ರೀತಿಯ ತೊಂದರೆ ಮಾಡಬೇಡ.
                ನಂತರ ಅವರು ಇಡೀ ಮಳೆಗಾಲ ಗುಹೆಯಲ್ಲೇ ಕಳೆದರು. ನಂತರ ಜೇತವನಕ್ಕೆ ಹಿಂತಿರುಗಿದರು. ಅಲ್ಲಿ ಅವರು ಸಹ ಭಿಕ್ಷುಗಳೊಡನೆ ನಡೆದ ವಿಷಯವೆಲ್ಲಾ ತಿಳಿಸಿದರು. ಆಗ ಭಿಕ್ಷುಗಳು ಆತನಿಗೆ ಹೀಗೆ ಕೇಳಿದರು: ಆ ದೇವತೆಯು ನಿಮಗೆ ಪ್ರವೇಶಿಸಲು ನಿರಾಕರಿಸಿದಾಗ ನೀವು ಕೋಪಗೊಂಡಿರಾ? ಇಲ್ಲ. ಆಗ ಆ ಭಿಕ್ಷುಗಳು ಭಗವಾನರ ಬಳಿಗೆ ಬಂದು ತಿಸ್ಸರವರು ಅರಹಂತರಾಗಿದ್ದಾರೆಯೇ ಎಂದು ಕೇಳಿದಾಗ, ಭಗವಾನರು ಹೌದೆಂದು ತಿಳಿಸಿ, ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment