Friday 9 October 2015

dhammapada/brahmanavagga/26.40/devahita

ಪರಿಪೂರ್ಣತೆ ಸಾಧಿಸಿದವನೇ ಬ್ರಾಹ್ಮಣ
ಯಾರು ತನ್ನ ಹಿಂದಿನ ಜನ್ಮಗಳನ್ನು ನೋಡಿರುವವನೋ,
ಯಾರು ಸ್ವರ್ಗವನ್ನು ಮತ್ತು ಅಪಾಯ ಲೋಕಗಳನ್ನು ನೋಡಿರುವವನೋ,
ಯಾರು ಜನ್ಮಗಳ ಅಂತ್ಯಕ್ಕೆ ತಲುಪಿರುವವನೋ,
ಯಾರು ಅಭಿಜ್ಞಾಗಳನ್ನು ಸಾಧಿಸಿದ ಮುನಿಯೋ,
ಯಾರು ಭಿಕ್ಷು ಜೀವನದಲ್ಲಿ ಪರಿಪೂರ್ಣತೆ ಸಾಧಿಸಿರುವನೋ,
ಅಂತಹವನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ. (423)
ಗಾಥ ಪ್ರಸಂಗ 26.40
ದೇವಹಿತನ ದಾನ ಪ್ರಶ್ನೆ

                ಒಮ್ಮೆ ಭಗವಾನರು ವಾತದೋಷದಿಂದ ಕೂಡಿದ್ದರು. ಆಗ ಭಗವಾನರು ಭಿಕ್ಷು ಉಪವನವನ್ನು ಬ್ರಾಹ್ಮಣ ದೇವಾಂಗಿಕನ ಬಳಿಗೆ ಬಿಸಿನೀರಿಗಾಗಿ ಕಳುಹಿಸಿದರು, ಭಿಕ್ಷು ಉಪವವನು ಬ್ರಾಹ್ಮಣ ದೇವಾಂಗಿಕನ ಬಳಿಗೆ ಬಂದು ಸಂದೇಶ ತಿಳಿಸಿದನು. ಅದನ್ನು ಕೇಳಿ ಬ್ರಾಹ್ಮಣನು ಅತ್ಯಂತ ಆನಂದಭರಿತನಾದನು. ನಾನೆಷ್ಟು ಭಾಗ್ಯವಂತ! ಭಗವಾನರು ನನ್ನಲ್ಲಿಗೆ ಬಿಸಿನೀರಿಗೆ ಕಳುಹಿಸಿದ್ದಾರೆ.
                ಆಗ ಭಗವಾನರು ಬಿಸಿನೀರನ್ನು ಮತ್ತು ಹೂಜಿಯ ತುಂಬಾ ಕಾಕಂಬಿ (ಜೇನುಬೆಲ್ಲ) ಕೊಟ್ಟು ಕಳುಹಿಸಿದನು. ಆತನು ಬಿಸಿನೀರಿನ ದೊಡ್ಡ ಪಾತ್ರೆಯನ್ನು ತನ್ನ ಸೇವಕರಿಂದ ಕೊಟ್ಟು ಕಳುಹಿಸಿದನು. ಆಗ ಭಗವಾನರು ಬಿಸಿನೀರಿನ ಸ್ನಾನ ಮಾಡಿ ನಂತರ ಕಾಕಂಬಿಯನ್ನು ಬಿಸಿನೀರಿಗೆ ಬೆರೆಸಿ ಕುಡಿದಾಗ ವಾತದೋಷವು ಪರಿಹಾರವಾಯಿತು.
                ಆಗ ಬ್ರಾಹ್ಮಣನಿಗೆ ಪ್ರಶ್ನೆಯೊಂದು ಉದ್ಭವವಾಯಿತು: ಯಾರಿಗೆ ದಾನ ನೀಡಿದರೆ ಮಹತ್ಫಲ ಸಿಗುವುದು? ಇದನ್ನು ಭಗವಾನರ ಬಳಿಗೆ ಕೇಳೋಣವೆಂದು ಭಗವಾನರ ಬಳಿಗೆ ಬಂದು ಈ ಗಾಥೆಯನ್ನು ನುಡಿದನು:
                “ಯಾರಿಗೆ ಒಬ್ಬನು ದಾನ ನೀಡಬೇಕು?
                ಯಾರಿಗೆ ದಾನ ನೀಡಿದರೆ ಮಹತ್ಫಲ ಸಿಗುವುದು?
                ಹೇಗೆ ದಾನಿಗೆ ಮಹತ್ಫಲವು ಶ್ರೇಷ್ಠವಾಗುತ್ತದೆ.?”
                ಆಗ ಭಗವಾನರು ಉತ್ತರವಾಗಿ ಈ ಮೇಲಿನ ಗಾಥೆಯನ್ನು ನುಡಿದರು. (ಅಂದರೆ ಪರೋಕ್ಷವಾಗಿ ಗಾಥೆಯಲ್ಲಿ ಭಗವಾನರಿಗೆ ನೀಡಿದ ದಾನ ಮಹತ್ಫಲವೆಂದರು).
                    ಇಲ್ಲಿಗೆ ಧಮ್ಮಪದ ಗಾಥಪ್ರಸಂಗಗಳು ಮುಗಿಯಿತು.
                                              ಧನ್ಯವಾದಗಳು.



No comments:

Post a Comment