Friday 9 October 2015

dhammapada/brahmanavagga/26.38/dhammadinna

ಲಿಪ್ತರಹಿತನೇ ಬ್ರಾಹ್ಮಣ
ಯಾರು ಪ್ರತಿಯೊಂದರ ಭೂತಕಾಲಕ್ಕಾಗಲಿ, ಭವಿಷ್ಯಕ್ಕಾಗಲಿ ಅಥವಾ
ವರ್ತಮಾನಕ್ಕಾಗಲಿ ಅಂಟಿಲ್ಲವೋ, ಆದರೂ ತನ್ನದೆಂದು
ಯಾವುದಕ್ಕೂ ಭಾವಿಸುವುದಿಲ್ಲವೋ, ಲಿಪ್ತರಹಿತನೋ
ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.               (421)



ಗಾಥ ಪ್ರಸಂಗ 26.38
ಧಮ್ಮಾದಿನ್ನ ಭಿಕ್ಷುಣಿಯ ಪ್ರಾಜ್ಞ ಉತ್ತರಗಳು

                ವಿಸಾಖನೆಂಬ ಉಪಾಸಕನು ಭಗವಾನರ ಬೋಧನೆಯನ್ನು ಆಲಿಸಿ ಅನಾಗಾಮಿ ಫಲವನ್ನು ಪಡೆದನು. ಆಗ ಆತನು ಹೀಗೆ ಯೋಚಿಸಿದನು: ನಾನು ನನ್ನ ಸಂಪತ್ತನ್ನು ನನ್ನ ಪತ್ನಿ ಧಮ್ಮಾದಿನ್ನಳಿಗೆ ನೀಡುವೆನು ಎನ್ನುತ್ತಾ ಮನೆಗೆ ಬಂದನು. ಸದಾ ಆತನು ಆಕೆಗೆ ಮುಗುಳ್ನಗುತ್ತಾ ದಿಟ್ಟಿಸುತ್ತಾ ಮನೆಗೆ ಬರುತ್ತಿದ್ದನು. ಆದರೆ ಇಂದು ಗಂಭೀರವಾಗಿ ಬಂದನು. ಆಕೆಗೆ ಇದು ಅರ್ಥವಾಗಲಿಲ್ಲ. ಆದರೂ ಊಟದ ಸಮಯದಲ್ಲಿ ಕೇಳುವೆನೆಂದುಕೊಂಡಳು. ಆದರೆ ಆತನು ಊಟದ ಸಮಯದಲ್ಲಿ ನಿಶ್ಶಬ್ದವಾಗಿಯೇ ಇದ್ದನು. ಈತನೇನಾದರೂ ಕೋಪಗೊಂಡಿರಬಹುದೇ ಎಂದು ಆಕೆ ಭಾವಿಸಿದಳು. ಆಹಾರ ಸೇವನೆಯ ನಂತರ ವಿಶಾಖನು ಆಕೆಗೆ ಹೀಗೆ ಹೇಳಿದನು: ಧಮ್ಮಾದಿನ್ನ ನನ್ನ ಎಲ್ಲಾ ಐಶ್ವರ್ಯ ಮನೆಯಲ್ಲಿದೆ, ಇದೆಲ್ಲವೂ ನಿನಗೆಯೇ ಸ್ವೀಕರಿಸು. ಆಕೆಗೆ ಅರ್ಥವಾಗದೆ ಹೀಗೆ ಕೇಳಿದಳು: ಪತಿಯೇ, ಇಂದು ನಿಮಗೆ ಏನಾಗಿದೆ?
                ಇಂದಿನಿಂದ ನಾನು ಪ್ರಾಪಂಚಿಕತೆಯಲ್ಲಿ ತೊಡಗಲಾರೆ.
                ಆಗ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆಕೆಯು ಹೀಗೆ ಉತ್ತರಿಸಿದಳು: ನೀವು ಉಗಿದಂತಹ ಎಂಜಲನ್ನು ನಾನು ಸ್ವೀಕರಿಸುವವಳೆಂದು ಭಾವಿಸಿದಿರಾ? ನಾನು ಸಹಾ ಬಿಕ್ಷುಣಿಯಾಗುವೆನು.
                ಒಳ್ಳೆಯದು, ನನ್ನ ಪ್ರಿಯ ಪತ್ನಿಯೇ ಎಂದು ಆತನು ಆಕೆಗೆ ಭಿಕ್ಷುಣಿಯಾಗುವ ಅನುಮತಿಯನ್ನು ನೀಡಿದನು. ಸಂಘಕ್ಕೆ ಸೇರಿದ ಆಕೆಯು ಅಂದಿನಿಂದ ಭಿಕ್ಷುಣಿ ಧಮ್ಮಾದಿನ್ನಳಾದಳು.
                ಆಕೆಯು ಏಕಾಂತದಲ್ಲಿ ಸಾಧನೆ ಮಾಡಿ, ಅಭಿಜ್ಞಾಸಹಿತ ಅರಹಂತತ್ವವನ್ನು ಪ್ರಾಪ್ತಿ ಮಾಡಿದಳು. ನಂತರ ಆಕೆ ಹೀಗೆ ಯೋಚಿಸಿದಳು: ಈಗ ನನ್ನಿಂದ ಪ್ರೇರಿತರಾಗಿ ನನ್ನ ಬಂಧು-ಬಾಂಧವರೆಲ್ಲಾ ಪುಣ್ಯದ ಕಾರ್ಯಗಳಲ್ಲಿ ತೊಡಗುವರು.

                ಆಕೆ ರಾಜಗೃಹಕ್ಕೆ ಹಿಂತಿರುಗಿದಳು. ಈಕೆ ಏತಕ್ಕಾಗಿ ಹಿಂತಿರುಗಿದ್ದಾಳೆ ಎಂದು ತಿಳಿಯುವುದಕ್ಕೋಸ್ಕರವಾಗಿ ಆಕೆ ಇರುವಲ್ಲಿಗೆ ವಿಸಾಖನು ಹೋದನು. ಆಕೆಗೆ ವಂದಿಸಿ ಒಂದೆಡೆ ಕುಳಿತನು. ಏತಕ್ಕಾಗಿ ಭಿಕ್ಷುಣಿ ಜೀವನದಲ್ಲಿ ಅಸಂತೃಪ್ತಳಾದೆ ಎಂದು ಕೇಳಲು ಇಚ್ಛಿಸದೆ, ಆತನು ಆಕೆಗೆ ಮಾರ್ಗ ಮತ್ತು ಫಲದ ಬಗ್ಗೆ ಪ್ರಶ್ನಿಸಿದನು. ತಕ್ಷಣ ಆಕೆಯು ಅವೆಲ್ಲಕ್ಕೂ ಉತ್ತರಿಸಿದಳು. ನಂತರ ಆತನು ನಿಬ್ಬಾಣ ಮತ್ತು ಅರಹತ್ವ ಪ್ರಾಪ್ತಿಯ ಬಗ್ಗೆ ಪ್ರಶ್ನಿಸಲು ತೊಡಗಿದಾಗ ಆಕೆಯು ಹೀಗೆ ಉತ್ತರಿಸಿದಳು: ಅದ್ಭುತ, ಸೋದರ ವಿಶಾಖ, ಆದರೆ ಅರಹತ್ವದ ಬಗ್ಗೆ ಅರಿಯಬೇಕಿದ್ದರೆ ಭಗವಾನರಿಗೆ ಸಮೀಪಿಸಿ ಅವರಲ್ಲಿ ಕೇಳಬೇಕು ಎಂದಳು. (ಇವರಿಬ್ಬರ ಸಂಭಾಷಣೆ ಮಜ್ಝಿಮ ನಿಕಾಯದ ವೇದಲ್ಲ ಸುತ್ತದಲ್ಲಿ ಸಿಗುವುದು). ಆಗ ವಿಶಾಖ ಆಕೆಗೆ ವಂದಿಸಿ, ಅಲ್ಲಿಂದ ಎದ್ದು ಭಗವಾನರ ಬಳಿಗೆ ಬಂದನು. ಭಗವಾನರಲ್ಲಿ ಆಕೆಯೊಂದಿಗೆ ನಡೆದ ಸಂಭಾಷಣೆಯೆಲ್ಲವನ್ನು ತಿಳಿಸಿದನು. ಆಗ ಭಗವಾನರು ಹೀಗೆ ಉತ್ತರಿಸಿದರು: ನನ್ನ ಮಗಳಾದ ಧಮ್ಮಾದಿನ್ನಳು ಸರಿಯಾಗಿಯೇ ಉತ್ತರಿಸಿದ್ದಾಳೆ, ಈ ಪ್ರಶ್ನೆಗಳು ನನಗೂ ಕೇಳಿದ್ದರೂ ಇದೇ ಉತ್ತರಗಳು ನನ್ನಿಂದಲೂ ಬರುತ್ತಿತ್ತು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ನಂತರ ಆಕೆಯು ಅರಹಂತಳೆಂದು ತಿಳಿಸಿದರು. 

No comments:

Post a Comment