Sunday 26 April 2015

dhammapada/dandavagga/10.9/santati

ಬಾಹ್ಯಸ್ವರೂಪದಿಂದಲೇ ಒಬ್ಬನು ಪವಿತ್ರನಾಗಲಾರ
ಅಲಂಕೃತನಾಗಿದ್ದೂ ಆತನು ಪರಮಶಾಂತಿಯಿಂದ ಜೀವಿಸಿದಾಗ, ಅಂತಹ ಶಾಂತನು ದಮಿಸಲ್ಪಟ್ಟವನು, ಮಾರ್ಗಗಳಲ್ಲಿ ಬ್ರಹ್ಮಚಾರಿಯು, ಸರ್ವಜೀವಿಗಳ ಹಿತಕ್ಕಾಗಿ ದಂಡಶಾಸ್ತ್ರಗಳನ್ನು ಪಕ್ಕಕ್ಕೆ ಇಟ್ಟವನು, ಅಂತಹವನು ನಿಜಕ್ಕೂ ಬ್ರಾಹ್ಮಣ, ಸಮಣ ಮತ್ತು ಭಿಕ್ಷುವೂ ಹೌದು.  (142)
ಗಾಥ ಪ್ರಸಂಗ 10:9
ಗೃಹಸ್ಥರು ನಿಬ್ಬಾಣವನ್ನು ಪಡೆಯಬಹುದು

                                ಭಗವಾನರು ಇದ್ದಾಗ ಬಹಳಷ್ಟು ಗೃಹಸ್ಥರು ನಿಬ್ಬಾಣವನ್ನು ಪಡೆದಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಈ ಕಥೆ.
                ಪಸೇನೆದಿ ರಾಜನ ಬಳಿ ಸಂತತಿ ಎಂಬ ಮಂತ್ರಿಯಿದ್ದನು. ಆತನು ರಾಜ್ಯದಲ್ಲಿ ಎದ್ದಿದ್ದ ದಂಗೆಯನ್ನು ಅಡಗಿಸಿದನು. ರಾಜ್ಯದಲ್ಲಿ ಶಾಂತಿಯನ್ನು ನೆಲೆಸಲು ಸಹಾಯಕ ನಾದನು. ರಾಜನು ಇದರಿಂದ ಸಂತುಷ್ಟನಾಗಿ ಆತನಿಗೆ ಮೌಲ್ಯಯುತ ಬಹುಮಾನಗಳಿಂದ ಸತ್ಕರಿಸಿದನು. ಜೊತೆಗೆ ಆತನಿಗೆ ನರ್ತಕಿಯೊಬ್ಬಳನ್ನು ನೀಡಿ ಕಳುಹಿಸಿದನು. ಆತನು ಪಾನಮತ್ತನಾಗಿ ಆನಂದದಿಂದ ಕೂಡಿದ್ದನು. ನಂತರ ನದಿಯಲ್ಲಿ ಸ್ನಾನ ಮಾಡಲು ಹೊರಟನು. ದಾರಿಯಲ್ಲಿ ಬುದ್ಧರನ್ನು ಕಂಡು ಬಾಗಿ ವಂದಿಸಿದನು. ಆಗ ಬುದ್ಧಭಗವಾನರು ಆನಂದನೊಂದಿಗೆ ಮುಗುಳ್ನಗೆ ಬೀರಿ ಹೀಗೆಂದರು ಆನಂದ ಈತನು ಇಂದೇ ನನ್ನನ್ನು ಭೇಟಿಯಾಗಿ, ಧಮ್ಮವನ್ನು ಆಲಿಸಿ, ಅರಹಂತನಾಗಿ ಹಾಗೆಯೇ ಪರಿನಿಬ್ಬಾಣ ಗಳಿಸುವನು.
                ಸಂತತಿ ಮತ್ತು ಇನ್ನಿತರರು ಹಗಲೆಲ್ಲಾ ಸಂತೋಷದಿಂದ ಕಾಲಕಳೆದರು. ಸಂಜೆ ನರ್ತಕಿಯು ನಾಟ್ಯವಾಡುತ್ತ ಬಳಲಿಕೆ ಮತ್ತು ಹೃದಯಾಘಾತದಿಂದ ಹಾಗೆ ಕುಸಿದಳು. ನಂತರ ಸತ್ತಳು, ಮಂತ್ರಿ ಸಂತತಿಗೆ ದುಃಖವು ತಡೆಯಲಾರದೆ ಬುದ್ಧರ ನೆನಪು ಬಂದು ಅವರಲ್ಲಿಗೆ ಬಂದನು. ಆಗ ಬುದ್ಧರು ಆತನಿಗೆ ಸಮಾಧಾನಿಸಿದರು ಓ ಮಗು, ನೀನು ಸರಿಯಾದ ಸ್ಥಳದಲ್ಲೇ ಬಂದಿದ್ದಿಯೇ ಒಬ್ಬನು ಜನ್ಮ ಪುನರ್ಜನ್ಮಗಳಲ್ಲಿ ಸಾವಿನಿಂದ ಶೋಕಿಸುವ ಕಣ್ಣೀರು ಅಳೆಯಲಾಗುವುದಿಲ್ಲ. ಅದು ಸಪ್ತ ಸಮುದ್ರವನ್ನು ಮೀರಿಸುತ್ತದೆ ಎಂದು ಹೇಳಿ ನಂತರ ಈ ಬೋಧನೆ ನೀಡುತ್ತಾರೆ.
                ಈ ಹಿಂದೆ ನೀನು ಬಯಕೆಗಳಲ್ಲಿ ಅಂಟಿದ್ದೀಯೆ, ಅವುಗಳಿಂದ ಹೊರಬಾ, ಭವಿಷ್ಯದಲ್ಲಿಯೂ ಸಹಾ ಆ ಅಂಟುವಿಕೆಯು ನಿನ್ನನ್ನು ಗುಲಾಮನನ್ನಾಗಿ ಮಾಡದಿರಲಿ, ವರ್ತಮಾನದಲ್ಲಿಯೂ ನಿನ್ನಲ್ಲಿ ಯಾವುದೇ ಅಂಟುವಿಕೆ ಸುಳಿದಾಡದಿರಲಿ (ಇಲ್ಲದಿರಲಿ), ಬಯಕೆ ಮತ್ತು ಭಾವೋದ್ರೇಕಗಳಿಂದ ಬುಡಸಮೇತ ಮುಕ್ತನಾಗು ಮತ್ತು ನೀನು ಆಗ ನಿಬ್ಬಾಣವನ್ನು ಅರ್ಥಮಾಡಿಕೊಳ್ಳುವೆ. ಈ ಧಮ್ಮದ ಆಲಿಸುವಿಕೆಯಿಂದ ಅರಹಂತನಾದನು. ಹಾಗೆಯೇ ತನ್ನ ಆಯು ವೀಕ್ಷಿಸಿ ಭಗವಾನರಿಂದ ಅಪ್ಪಣೆ ಪಡೆದು ಪರಿನಿಬ್ಬಾಣ ಪ್ರಾಪ್ತಿಮಾಡಿದನು.

                ಅರಹಂತನಾದ್ದರಿಂದಾಗಿ ಆತನಿಗೂ ಸ್ಥೂಪ ಕಟ್ಟಿಸಲಾಯಿತು. ಭಿಕ್ಷುಗಳಿಗೆ ಆತನು ಮಂತ್ರಿಯಾಗಿದ್ದು, ಮಂತ್ರಿವೇಶದಲ್ಲಿ ಅಲಂಕೃತನಾಗಿದ್ದ. ಹೇಗೆ ಅರಹಂತನಾದನು ಎಂಬ ಸಂಶಯ ಬಂದಾಗ ಭಗವಾನರು ಈ ಗಾಥೆ ನುಡಿದರು.

No comments:

Post a Comment