Wednesday 8 April 2015

dhammapada/sahassavagga/8.10/khanukondanna

ಮೂರ್ಖತ್ವದ ಜೀವನಕ್ಕಿಂತ ಪ್ರಜ್ಞಾ ಧ್ಯಾನದ ಒಂದು ದಿನ ಉತ್ತಮ
ಒಬ್ಬನು ಶತವರ್ಷಗಳಷ್ಟು ಕಾಲ ದುಷ್ಪ್ರಜ್ಞನಾಗಿ (ಮೂರ್ಖನಾಗಿ) ಅಸಮಾಹಿತನಾಗಿ (ಅನಿಯಂತ್ರಿಯ ಚಂಚಲಿಗನಾಗಿ) ಜೀವಿಸುವುದಕ್ಕಿಂತ, ಪ್ರಜ್ಞಾವಂತನಾಗಿ, ಧ್ಯಾನಿಯಾಗಿ, ಜೀವಿಸುವ ಏಕದಿನದ ಜೀವಿತವು ಶ್ರೇಷ್ಠಕರವಾದುದು.     (111)
ಗಾಥ ಪ್ರಸಂಗ 8:10
ಖಾನು-ಕೊಂಡನ್ನ ಮತ್ತು ಕಳ್ಳರು




                ಖಾನು ಕೊಂಡನ್ನರು ಬುದ್ಧ ಭಗವಾನರಿಂದ ಧ್ಯಾನ ವಿಷಯವನ್ನು ಸ್ವೀಕರಿಸಿದ ನಂತರ ಕಾಡಿಗೆ ಹೋಗಿ ಧ್ಯಾನಿಸಲು ಆರಂಭಿಸಿದರು ಮತ್ತು ಅಲ್ಲಿಯೇ ಅವರು ಅರಹಂತತ್ವವನ್ನು ಪ್ರಾಪ್ತಿಮಾಡಿದರು. ನಂತರ ಬುದ್ಧರನ್ನು ಕಾಣಲು ಅವರು ಹಿಂತಿರುಗಿತ್ತಿದ್ದಾಗ, ಬಳಲಿಕೆಯಿಂದಾಗಿ ಮಾರ್ಗ ಮಧ್ಯದಲ್ಲಿ ಪ್ರಯಾಣ ನಿಲ್ಲಿಸಿ ಸಮನಾದ ಬಂಡೆಯ ಮೇಲೆ ಕುಳಿತು ಧ್ಯಾನಿಸಲು ಆರಂಭಿಸಿದರು. ಆಳವಾದ ಧ್ಯಾನದಲ್ಲಿ ಮುಳುಗಿದರು. ಆ ವೇಳೆಯಲ್ಲಿ ಕಳ್ಳರ ಗುಂಪೊಂದು ಹಳ್ಳಿಯನ್ನು ಲೂಟಿಮಾಡಿ ಆ ಭಿಕ್ಷುವು ಇದ್ದಂತಹ ಸ್ಥಳಕ್ಕೆ ಬಂದರು. ಅವರು ಬಳಲಿದ್ದರಿಂದಾಗಿ ಆ ಸ್ಥಳದಲ್ಲಿ ವಿಶ್ರಮಿಸಲು ನಿರ್ಧರಿಸಿದರು. ಅವರು ಆ ಭಿಕ್ಷುವನ್ನು ಕಂಡು ಮರದ ಕಾಂಡವಿರಬಹುದೆಂದು ಭಾವಿಸಿದರು. ಆ ಭಿಕ್ಷುವಿನ ಮೇಲೆ ಸುತ್ತಲೂ ತಾವು ಲೂಟಿ ಮಾಡಿದ ಸಾಮಗ್ರಿಯ ಗಂಟುಗಳೆಲ್ಲಾ ಇಟ್ಟರು. ನಂತರ ನಿದ್ರಿಸಿದರು. ಮುಂಜಾನೆ ಎದ್ದು ನೋಡಿದಾಗ, ಅವರಿಗೆ ಕಾಂಡದ ಬದಲು ಭಿಕ್ಷುವನ್ನು ಕಂಡು, ಅವರು ಹೆದರಿ ದೆವ್ವವಿರಬಹುದೆಂದು ಭಾವಿಸಿ ಭಯದಿಂದ ಓಡಲು ಪ್ರಾರಂಭಿಸಿದರು.
                ಆಗ ಭಿಕ್ಷುವು ಹೀಗೆ ಕೂಗಿ ಹೇಳಿದರು: ಗೃಹಸ್ಥರೇ, ಹೆದರದಿರಿ, ನಾನು ಭಿಕ್ಷು, ಬೇರಲ್ಲ. ಆಗ ಅವರು ಬಂದು, ತಾವು ಮರದ ಬುಡವೆಂದು ಭಾವಿಸಿ, ಅವರ ಮೇಲೆ ಗಂಟುಗಳೆಲ್ಲ ಇಟ್ಟೆವು ಎಂದು ಹೇಳಿ ಕ್ಷಮೆಯಾಚಿಸಿರು. ನಂತರ ಅವರಿಗೆ ಭಿಕ್ಷುವಿನ ವರ್ತನೆ, ಮಾತಿನ ಪ್ರಭಾವದಿಂದಾಗಿ ಆ ಕಳ್ಳರ ನಾಯಕನು ಭಿಕ್ಷುವಾಗಲು ನಿರ್ಧರಿಸಿದನು. ಅದನ್ನು ಆತನು ಹೇಳಿದಾಗ, ಇತರ ಕಳ್ಳರು ಸಹಾ ಭಿಕ್ಷುಗಳಾಗಲು ನಿರ್ಧರಿಸಿದರು. ಆಗ ಭಿಕ್ಷು ಕೊಂಡನ್ನನು ಎಲ್ಲರಿಗೂ ಭಿಕ್ಷುಗಳನ್ನಾಗಿಸಿದರು.
                ಅಂದಿನಿಂದ ಕೊಂಡನ್ನರವರ ಹೆಸರು ಖಾನ (ಕಾಂಡ) ಕೊಂಡನ್ನ ಎಂದು ಆಯಿತು. ಅವರನ್ನೆಲ್ಲಾ ಕರೆದುಕೊಂಡು ಬುದ್ಧರ ಬಳಿಗೆ ಬಂದಾಗ ಭಗವಾನರು ಕೊಂಡನ್ನನಿಗೆ ಓಹ್, ಶಿಷ್ಯರನ್ನು ಪಡೆದಿರುವೆಯಾ? ಎಂದರು. ಆಗ ಅವರು ವಿಷಯವೆಲ್ಲಾ ತಿಳಿಸಿದರು, ಭಿಕ್ಷುಗಳಾಗಿದ್ದಂತಹ ಕಳ್ಳರಿಗೆ ಇದು ನಿಜವೇ? ಎಂದು ಕೇಳಿದಾಗ, ಅವರು ಹೌದು ಭಂತೆ, ನಾವೆಂದಿಗೂ ಇಂತಹ ಚಮತ್ಕಾರವನ್ನು ಕಂಡಿರಲಿಲ್ಲ ಎಂದರು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.





No comments:

Post a Comment