Friday 17 April 2015

dhammapada/papavagga/9.2/seyyasaka

ಮತ್ತೆ ಮತ್ತೆ ಪಾಪ ಬೇಡ
ಒಬ್ಬನು (ಆಕಸ್ಮಿಕವಾಗಿ) ಪಾಪ ಮಾಡಿರಬಹುದು, ಆದರೆ ಅಂತಹ ಕಾರ್ಯವನ್ನೇ ಪುನಃ ಪುನಃ ಮಾಡದಿರಲಿ, ಅಂತಹ ಪಾಪದಲ್ಲೇ ಆನಂದಿಸದಿರಲಿ; ಏಕೆಂದರೆ ಪಾಪ ಸಂಗ್ರಹಣೆಯಿಂದಾಗಿ ದುಃಖವು ಲಭಿಸುವುದು.           (117)
ಗಾಥ ಪ್ರಸಂಗ 9:2
ಸೆಯ್ಯಸಕನ ವೃತ್ತಾಂತ

                ಸೆಯ್ಯಸಕನೆಂಬ ಭಿಕ್ಷುವು ಇದ್ದನು. ಆತನು ಬೋಧಿಸತ್ವರ ಬಾಲ್ಯದ ಗೆಳೆಯರಾದ ಪೂಜ್ಯ ಕಾಳುದಾಯಿಯ ಸ್ನೇಹಿತನಾಗಿದ್ದನು. ಆತನು ಸಹಾ ಧಮ್ಮೋತ್ತೇಜಿತನಾಗಿ ಭಿಕ್ಷುವಾಗಿದ್ದನು. ಆದರೆ ಸ್ವಲ್ಪದಿನಗಳ ನಂತರ ಆತನಿಗೆ ಧಮ್ಮ ಜೀವನದಲ್ಲಿ ಆಸಕ್ತಿ ಕಡಿಮೆಯಾಗಿ, ಅತೃಪ್ತನಾದನು. ಆತನು ಅತಿ ಹೀನವಾದ ಚಟವಾದ ಸ್ವ-ಲೈಂಗಿಕ ಪ್ರಚೋದನೆಯಲ್ಲಿ ಆನಂದಿಸತೊಡಗಿದನು. ಆತನ ಈ ಚಟ ಅತಿಯಾದಂತೆ ಸಹ ಭಿಕ್ಷುಗಳಿಗೆ ಈ ವಿಷಯ ತಿಳಿದುಹೋಯಿತು. ಬುದ್ಧರವರೆಗೆ ಈ ವಿಷಯ ತಿಳಿಯಿತು.
                ಭಗವಾನರು ಆತನಿಗೆ ಕರೆಯಿಸಿ ಹೀಗೆ ಕೇಳಿದರು: ಹೀಗೆ ಹಬ್ಬಿರುವ ಸುದ್ದಿಯು ಸತ್ಯವೇ?
                ಹೌದು ಪೂಜ್ಯರೇ.

                ಓ ಮೂರ್ಖ ವ್ಯಕ್ತಿಯೇ, ಶ್ರೇಷ್ಠ ಶಾಸನದಲ್ಲಿದ್ದರೂ, ಶ್ರೇಷ್ಠ ಪವಿತ್ರ ವ್ಯಕ್ತಿಗಳ ಒಡನಾಟದಲ್ಲಿದ್ದರೂ, ಗೌರವಯುತವಾದ ಭಿಕ್ಖು ವಸ್ತ್ರಧಾರಣೆ ಮಾಡಿಯೂ ಏಕೆ ಇಂತಹ ಅಸಂಸ್ಕೃತವಾದ, ಹೀನವಾದ, ದುಃಖಜನಕವಾಗುವಂತಹ ರೀತಿಯಲ್ಲಿ ಏಕೆ ನಡೆದುಕೊಳ್ಳುವೆ? ಇಂತಹ ಕರ್ಮದಿಂದ ದುಃಖದೆಡೆಗೆ ತಪ್ಪದೆ ತಲುಪುವೆ. ಈ ಕೃತ್ಯವು ಇಹದಲ್ಲಿ ನಿಂದನೆಗೆ ಮತ್ತು ರೋಗಕ್ಕೆ ತಳ್ಳಿ, ಪರಲೋಕದಲ್ಲೂ ದುಃಖ ತಪ್ಪಿದ್ದಲ್ಲ ಎಂದು ಹೇಳಿ ಈ ಮೇಲಿನ ಗಾಥೆ ನುಡಿದು, ಆತನನ್ನು ಯೋಗ್ಯವಾದ ಹಾದಿಯಲ್ಲಿ ನಡೆಯುವಂತೆ ಮಾಡಿದರು. ಮುಂದೆ ಸೆಯ್ಯಸಕನು ಅತ್ಯಂತ ಸಂಯಮಿಯಾಗಿ ಜೀವಿಸಿದನು.

No comments:

Post a Comment