Wednesday 8 April 2015

dhammapada/sahassavagga/8.11/sappadasa

ಸೋಮಾರಿತನದ ಜೀವನಕ್ಕಿಂತ ಪ್ರಯತ್ನಶೀಲತೆಯ ಒಂದುದಿನ ಉತ್ತಮ
ಒಬ್ಬನು ಶತವರ್ಷಗಳ ಕಾಲ ಸೋಮಾರಿಯಾಗಿ, ಹೀನವೀರ್ಯನಾಗಿ (ಅಲ್ಪಶ್ರಮಿಯಾಗಿ) ಜೀವಿಸಬಹುದು. ಆದರೂ ದೃಢತೆಯಿಂದ ಮತ್ತು ಅಪಾರ ಪ್ರಯತ್ನಶೀಲತೆಯಿಂದ ಕೂಡಿದ ಒಂದುದಿನದ ಜೀವಿತ ಉತ್ತಮವಾಗಿರುತ್ತದೆ.     (112)
ಗಾಥ ಪ್ರಸಂಗ 8:11
ಸಪ್ಪದಾಸನ ಅರಹಂತ ಪ್ರಾಪ್ತಿ

                ಸಪ್ಪದಾಸನೆಂಬ ಭಿಕ್ಷುವು ಭಿಕ್ಷು ಜೀವನದಲ್ಲಿ ಅತೃಪ್ತನಾದನು. ಆದರೂ ಆತನಿಗೆ ಗೃಹಸ್ಥನಾಗುವುದೆಂದರೆ ಅಪಮಾನದ ಸಂಗತಿಯಾಗಿತ್ತು. ಅದರಿಂದಾಗಿ ಆತನು ಸ್ವಹತ್ಯೆ ಮಾಡುವುದಕ್ಕೆ ನಿರ್ಧರಿಸಿದನು. ಆತನು ಸಾಯುವುದಕ್ಕಾಗಿ ಹಾವಿರುವ ಮಡಿಕೆಗೆ ಕೈಹಾಕಿದನು. ಆದರೆ ಆ ಹಾವು ಆತನಿಗೆ ಕಚ್ಚಲಿಲ್ಲ. ಏಕೆಂದರೆ ಹಿಂದಿನ ಜನ್ಮದಲ್ಲಿ ಆ ಹಾವಿಗೆ ಆತನು ಯಜಮಾನನಾಗಿ ಆ ಹಾವು ಸೇವಕನಾಗಿತ್ತು. ಈ ಘಟನೆಯಿಂದಾಗಿಯೇ ಆತನಿಗೆ ಸರ್ಪದಾಸ (ಸಪ್ಪದಾಸ) ಎಂದು ಕರೆಯಲಾರಂಭಿಸಿದರು.

                ಇದಾದ ಕೆಲದಿನಗಳ ನಂತರ ಆತನು ಮತ್ತೆ ಆತ್ಮಹತ್ಯೆಗೆ ಈ ರೀತಿ ಪ್ರಯತ್ನಿಸಿದನು. ಹೇಗೆಂದರೆ ಕ್ಷೌರಗತ್ತಿಯಿಂದ ಗಂಟಲನ್ನು ಕೊಯ್ಯಲು, ಆತನು ಇನ್ನೇನು ಆತನು ಗಂಟಲನ್ನು ಸೀಳಬೇಕು, ಆಗ ಆ ಕ್ಷಣದಲ್ಲೇ ಆತನಿಗೆ ತನ್ನ ಶೀಲದ ಸುಚಾರಿತ್ರ್ಯದ ನೆನಪು ಬಂದು, ಆತನ ಇಡೀ ಶರೀರವೆಲ್ಲಾ ಆನಂದ ಮತ್ತು ಸುಖಗಳಿಂದಾಗಿ ಆವೃತವಾಗುತ್ತದೆ. ನಂತರ ಆತನು ಪೀತಿ (ಆನಂದ) ಯಿಂದ ವಿಮುಖನಾಗಿ ಅಂತರ್ದೃಷ್ಟಿಯ ಜ್ಞಾನಪಕ್ವತೆಯಲ್ಲಿ ಚಿತ್ತ ಹರಿಸುತ್ತಾನೆ. ಹಾಗೆಯೇ ಅಲ್ಪಕಾಲದಲ್ಲೇ ಅರಹಂತನಾಗುತ್ತಾನೆ. ನಂತರ ವಿಹಾರಕ್ಕೆ ಮರಳುತ್ತಾನೆ. ಆಗ ಅಲ್ಲಿನ ಭಿಕ್ಷುಗಳು ಕ್ಷೌರ ಕತ್ತಿಯನ್ನು ಏತಕ್ಕಾಗಿ ಹಿಡಿದು ತಿರುಗಾಡುತ್ತಿರುವೆ ಎಂದು ಕೇಳಿದಾಗ, ಆತನು ವಿಷಯವನ್ನೆಲ್ಲಾ ತಿಳಿಸುತ್ತಾನೆ. ಅವರಿಗೆ ಆತನ ಅರಹಂತ ಪ್ರಾಪ್ತಿಯ ಬಗ್ಗೆ ಸಂಶಯವುಂಟಾಗಿ ಭಗವಾನರಲ್ಲಿ ಬಂದು ಹೀಗೆ ಕೇಳುತ್ತಾರೆ: ಭಗವಾನ್ ಈ ಭಿಕ್ಷುವು ತಾನು ಆತ್ಮಹತ್ಯೆಗೈಯಲು ಕೌರಗತ್ತಿಯನ್ನು ಗಂಟಲಿಗೆ ಇಟ್ಟು ಅದಾದ ಕೆಲವು ಕ್ಷಣಗಳಲ್ಲೇ ಅರಹಂತ ಮಾರ್ಗದಲ್ಲಿ ಬಂದೇ ಎನ್ನುತ್ತಾನೆ, ಇದು ಸತ್ಯವೇ? ಹೀಗಾಗಲು ಸಾಧ್ಯವೇ? ಆಗ ಭಗವಾನರು ಹೀಗೆ ಉತ್ತರಿಸುತ್ತಾರೆ: ಹೌದು ಭಿಕ್ಷುಗಳೇ, ಇದು ಸಾಧ್ಯವಿದೆ. ಯಾವಾಗ ಒಬ್ಬನು ಸಮಥ ವಿಪಶ್ಶನವನ್ನು ಅಭಿವೃದ್ಧಿಗೊಳಿಸುತ್ತಾನೋ ಆಗ ಅರಹತ್ವವು ಕ್ಷಣದಲ್ಲಿ ಸಿಗುತ್ತದೆ. ಉದಾಹರಿಸುವುದಾದರೆ ಆತನು ನಡಿಗೆಯ ಧ್ಯಾನದಲ್ಲಿ ಪಾದವನ್ನು ಮೇಲೆ ಎತ್ತಿ ಕೆಳಗೆ ಇಡುವ ಮುನ್ನವೇ ಅರಹಂತತ್ವ ಪ್ರಾಪ್ತಿಯಾಗಬಹುದು ಎಂದು ಹೇಳಿ ಈ ಮೇಲಿನ ಗಾಥೆಯನ್ನು ಹೇಳಿದರು.

No comments:

Post a Comment