Wednesday 1 April 2015

dhammapada/sahassavagga/8.4/anatthapuccaka

ಪರರ ಮೇಲಿನ ಜಯ ಕ್ಷುಲ್ಲಕ, ಸ್ವಜಯವು ಅಸಮಾನ
ಸ್ವಜಯ (ತನ್ನ ಮೇಲಿನ ವಿಜಯ)ವು ಪರರ ಮೇಲಿನ ಜಯಕ್ಕಿಂತ ಶ್ರೇಷ್ಠಕರ, ಯಾರು ಸದಾ ಸ್ವ-ದಮನದಲ್ಲಿ ತಲ್ಲೀನನೋ, ಯಾರು ನಿತ್ಯ ಸಂಯಮಚಾರಿಯೋ          (104)
ಅಂತಹವನ ಜಯವನ್ನು, ಅಪರಾಜಿತವನ್ನಾಗಿಸಲು ದೇವನಿಂದಾಗಲಿ ಅಥವಾ ಗಂಧರ್ವನಿಂದಾಗಲಿ ಅಥವಾ ಮಾರನಿಂದಾಗಲಿ ಅಥವಾ ಬ್ರಹ್ಮನಿಂದಾಗಲೀ ಸಾಧ್ಯವಿಲ್ಲ.            (105)
ಗಾಥ ಪ್ರಸಂಗ 8:4
ಬ್ರಾಹ್ಮಣ ಅನತ್ಥಪುಚ್ಚಕನ ಜೂಜಿನ ವಿಜಯ

ೆ       ಒಮ್ಮೆ ಅನತ್ಥಪುಚ್ಚಕನೆಂಬ ಬ್ರಾಹ್ಮಣನು ಭಗವಾನರ ಬಳಿ ಬಂದು ಹೀಗೆ ಕೇಳಿದನು: ಭಂತೆ, ನೀವು ಹಿತವನ್ನುಂಟುಮಾಡುವ, ಸುಖವನ್ನುಂಟುಮಾಡುವ ಧಮ್ಮವನ್ನು ಮಾತ್ರ ಅರಿತಿರುವಿರಿ ಎಂದು ನಾನು ಭಾವಿಸುತ್ತೇನೆ ಹೊರತು ಅಹಿತವನ್ನುಂಟುಮಾಡುವ, ಹಾನಿಯುಂಟುಮಾಡುವ ಧಮ್ಮವನ್ನು ನೀವು ಅರಿತಿಲ್ಲ ಎಂದು ಭಾವಿಸುತ್ತೇನೆ.
                ಆಗ ಭಗವಾನರು ಐಶ್ವರ್ಯ ನಾಶಮಾಡುವ ಆರು ಚಾಳಿಗಳ ಬಗ್ಗೆ ಹೇಳಿದರು. ಅವೆಂದರೆ: (1) ಸೂರ್ಯ ಉದಯಿಸಿದರೂ ಮಲಗಿರುವಿಕೆ, (2) ಸೋಮಾರಿತನದ ಚಟ (3) ಕ್ರೂರತೆ (4) ಮತ್ತನ್ನು ಮತ್ತು ಪ್ರಮಾದವನ್ನುಂಟುಮಾಡುವ ಮಾದಕ ವಸ್ತುಗಳು (5) ಅವೇಳೆಯಲ್ಲಿ ಏಕಾಂಗಿಯಾಗಿ ಬೀದಿಗಳಲ್ಲಿ ಸುತ್ತಾಡುವಿಕೆ ಮತ್ತು (6) ಅನೈತಿಕ ಮಿಥ್ಯಾಚಾರದ ಲೈಂಗಿಕತೆ.
                ಅದನ್ನು ಆಲಿಸಿದ ಬ್ರಾಹ್ಮಣನು ಬುದ್ಧರನ್ನು ಹೀಗೆ ಹೊಗಳಿದನು: ಬಹು ಚೆನ್ನಾಗಿ ವಿವರಿಸಿದಿರಿ, ಓ ಶಾಸ್ತರೇ, ಓ ಸರ್ವಜನಗಳ ನಾಯಕರೇ, ನಿಜಕ್ಕೂ ನೀವು ಲಾಭವಷ್ಟೇ ಅಲ್ಲ, ನಷ್ಟವನ್ನು ಅರಿತಿರುವಿರಿ.
                ನಂತರ ಭಗವಾನರು ಆತನಿಗೆ ಹೀಗೆ ಕೇಳಿದರು: ಬ್ರಾಹ್ಮಣ ನೀನು ಯಾವುದರಿಂದ ಜೀವನೋಪಾಯ ಮಾಡುತ್ತಿರುವೆ?
                ಭಂತೆ, ಜೂಜಿನಿಂದಾಗಿ.
                ಆದರೆ ಗೆಲ್ಲುವವರ್ಯಾರು, ನೀನೋ ಅಥವಾ ಪರವ್ಯಕ್ತಿಯೋ?
                ಕೆಲವೊಮ್ಮೆ ನಾನು, ಕೆಲವೊಮ್ಮೆ ಪರರು ಭಂತೆ.

                ಆಗ ಭಗವಾನರು ಈ ವಿಜಯವನ್ನು ಕ್ಷುಲ್ಲುಕವೆಂದು ತಿಳಿಸಿ, ಜೂಜಿನ ಅನರ್ಥಕತೆ ತಿಳಿಸಿ, ಈ ಮೇಲಿನ ಗಾಥೆಗಳನ್ನು ತಿಳಿಸಿದರು.

No comments:

Post a Comment