Thursday 23 April 2015

dhammapada/papavagga/9.12/suppabudda

ಸಾವಿನಿಂದ ಪಾರಾಗಲು ಸಾಧ್ಯವೇ ಇಲ್ಲ
ಅಂತರಿಕ್ಷದಲ್ಲಿಯಾಗಲಿ, ಸಮುದ್ರದ ಮಧ್ಯೆಯಾಗಲಿ ಪರ್ವತದ ಗವಿಗಳಲ್ಲಾಗಲಿ, ಈ ಭೂಮಿಯಲ್ಲಿ ಸಾವಿನಿಂದ ಪಾರಾಗಲು ಸ್ಥಳವೇ ಇಲ್ಲ.        (128)
ಗಾಥ ಪ್ರಸಂಗ 9:12
ರಾಜ ಸುಪ್ಪಬುದ್ಧನ ದಡ್ಡತನ

          ರಾಜ ಸುಪ್ಪಬುದ್ಧನು ದೇವದತ್ತ ಮತ್ತು ಯಶೋಧರೆಯ ತಂದೆಯಾಗಿದ್ದನು. ಆತನ ಮಗಳಾದ ಯಶೋಧರಳೇ ಬೋಧಿಸತ್ತ ಸಿದ್ಧಾರ್ಥ ಗೋತಮರಿಗೆ ಪತ್ನಿಯಾಗಿದ್ದಳು. ಬೋಧಿಸತ್ವರು ಬೋಧಿಪ್ರಾಪ್ತಿ ಮಾಡಲು ಸರ್ವವನ್ನು ಪರಿತ್ಯಾಗ ಮಾಡಿ ಹೋದಾಗಿನಿಂದ, ಸುಪ್ಪಬುದ್ಧರಿಗೆ ಅತೀವ ನೋವಾಗಿತ್ತು. ಜೊತೆಗೆ ಕೋಪವು ಉಂಟಾಗಿತ್ತು. ಏಕೆಂದರೆ ಮಗಳ ಜೀವನ ಅಸ್ತವ್ಯಸ್ತವಾಯಿತಲ್ಲ ಎಂದು ವಿಷಾಧತೆಯಿತ್ತು. ಆದರೆ ಪೂಜ್ಯ ಯಶೋಧರೆಗೆ ಅಪಾರ ತೃಪ್ತಿಯಿತ್ತು. ಆದರೆ ಇದನ್ನರಿಯದ ರಾಜ ಸುಪ್ಪಬುದ್ಧರಿಗೆ ತಮ್ಮ ದಡ್ಡತನದಿಂದಾಗಿ ಮಗನಾದ ದೇವದತ್ತನು ದ್ವೇಷಿಸಿದಂತೆ, ಅದೇ ಪಕ್ಷಪಾತದಿಂದ  ಬುದ್ಧರನ್ನು ಕಂಡು ಅಪ್ರಿಯವಾಗಿ ವತರ್ಿಸಲು ಆರಂಭಿಸಿದರು. ಒಮ್ಮೆ ಭಗವಾನರು ಆಹಾರಕ್ಕಾಗಿ ಹೊರಟಿರುವಾಗ, ಕುಡಿದಿದ್ದ ಸುಪ್ರಬುದ್ಧರು ಬುದ್ಧರ ದಾರಿಗೆ ಅಡ್ಡಲಾಗಿ ಬಂದರು. ಬುದ್ಧರಿಗಾಗಲಿ ಅಥವಾ ಭಿಕ್ಷುಗಳಿಗಾಗಲಿ ದಾರಿ ಬಿಡದೆ ನಾನು ಬುದ್ಧರಿಗೆ ದಾರಿಬಿಡಲಾರೆ, ಅವರು ನನಗಿಂತ ಕಿರಿಯವರು ಎಂದು ದಾರಿ ಬಿಡಲೇ ಇಲ್ಲ. ಆಗ ಬುದ್ಧರು ಮತ್ತು ಭಿಕ್ಷುಗಳು ಹಿಂತಿರುಗಿದರು. ಆಗಲೂ ಕುತೂಹಲಿಯಾದ ರಾಜ ಗೂಢಚಾರರನ್ನು ಹಿಂಬಾಲಿಸಿ ಕಳುಹಿಸಿದನು.
          ಬುದ್ಧರಿಗೆ ಅಡ್ಡಿಪಡಿಸುವುದು ಮತ್ತು ಮಾರ್ಗ ಬಿಡದಿರುವುದು ಮಹಾ ಪಾಪವಾಗಿತ್ತು. ಇದರ ಪರಿಣಾಮವನ್ನು ಆನಂದರವರು ಅರಿಯಲು ಇಚ್ಛಿಸಿದರು. ಆಗ ಭಗವಾನರು ಸುಪ್ಪಬುದ್ಧರ ಬಗ್ಗೆ ಹೀಗೆ ಭವಿಷ್ಯವಾಣಿಯನ್ನು ನುಡಿದರು: ಆನಂದ, ಇಂದಿಗೆ ಏಳನೆಯ ದಿನಕ್ಕೆ ಸುಪ್ಪಬುದ್ಧ ರಾಜನು ಭೂಮಿಯು ಸೀಳಲ್ಪಟ್ಟು, ಒಳಕ್ಕೆ ಹೂತು ಹೋಗುತ್ತಾರೆ, ಭೂಮಿಯಿಂದ ನುಂಗಿದವರಂತೆ ಕಾಣುತ್ತಾರೆ. ಅರಮನೆಯ ಗೋಪುರ ಭವನಕ್ಕೆ ಇರುವ ಮೆಟ್ಟಿಲುಗಳ ಅಡಿಯಲ್ಲಿಯೇ ಭೂಮಿಯಲ್ಲಿ ಸೇರುವ ಘಟನೆ ನಡೆಯುವುದು ಎಂದು ಸ್ಪಷ್ಟವಾಗಿ ಸ್ಥಳ, ಕಾಲ ಮತ್ತು ಘಟನೆಯನ್ನು ನುಡಿದರು. ಈ ಕರ್ಮಫಲದಿಂದ ಪಾರಾಗಲು ಸಾಧ್ಯವಿಲ್ಲವೆಂದರು.
          ಈ ವಿಷಯವನ್ನು ಗೂಢಚಾರರು ರಾಜನಿಗೆ ತಿಳಿಸಿದಾಗ, ಆತನು ಹೀಗೆ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿದನು: ಆ ಮೆಟ್ಟಿಲುಗಳ ಅಡಿಯಲ್ಲಿ ನಾನು ಹೋಗುವುದೇ ಇಲ್ಲ, ಇದರಿಂದ ಬುದ್ಧ ವಾಕ್ಯ ಸುಳ್ಳಾಗುವುದು. ಸೈನಿಕರೇ, ಆ ಮೆಟ್ಟಲುಗಳನ್ನು ತೆಗೆದುಬಿಡಿ, ನಾನು ಬಳಸುವಂತೆಯೇ ಇರುವುದಿಲ್ಲ. ನಾನು ಆ ಭಾಗದಲ್ಲಿ ಹೋಗದಂತೆ ನೀವು ತಡೆಯಿರಿ ಎಂದು ಆಜ್ಞಾಪಿಸಿದನು.
          ರಾಜನ ಮುನ್ನೆಚ್ಚರಿಕೆಯನ್ನು ಭಿಕ್ಷುಗಳು ಭಗವಾನರಿಗೆ ತಿಳಿಸಿದಾಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ! ರಾಜ ಸುಪ್ಪಬುದ್ಧರು ಗೋಪುರದ ಭವನದಲ್ಲಿ ವಾಸಿಸಲಿ ಅಥವಾ ಆಕಾಶದಲ್ಲಿ ನೆಲೆಸಲಿ ಅಥವಾ ಸಮುದ್ರ ಮಧ್ಯೆಯೇ ನೆಲೆಸಲಿ ಅಥವಾ ಪರ್ವತದ ಗುಹೆಗಳಲ್ಲಿ ನೆಲಸಲಿ, ಆದರೆ ನನ್ನ ಭವಿಷ್ಯವಾಣಿ ಸುಳ್ಳಾಗದು, ನಾನು ಹೇಳಿರುವ ಸ್ಥಳದಲ್ಲೇ, ನಾನು ಹೇಳಿರುವ ರೀತಿಯಲ್ಲೇ ಅಂತ್ಯವಾಗುವುದು ಎಂದು ವಿಷಾದದಿಂದ ನುಡಿದರು.
          ಏಳನೆಯ ದಿನದಂದು ಮಧ್ಯಾಹ್ನದ ಊಟದ ವೇಳೆಯಲ್ಲಿ ರಾಜಾಶ್ವವು ಅಗೋಚರ ಕಾರಣದಿಂದಾಗಿ ಭೀತಿಪಟ್ಟಿತು ಮತ್ತು ಜೋರಾಗಿ ಕೂಗುತ್ತ ಒದೆಯಲು ಆರಂಭಿಸಿತು. ಆ ಅಶ್ವದ ಆರ್ಭಟವನ್ನು, ಕೆರಳಿದ ರಾಜನು ತನ್ನ ಸಾಕು ಅಶ್ವವನ್ನು ಸಮಾಧಾನಿಸಲು ತನ್ನೆಲ್ಲಾ ಮುನ್ನೆಚ್ಚರಿಕೆಗಳನ್ನು ಮರೆತನು. ಬಾಗಿಲ ಬಳಿಗೆ ಬಂದನು. ಬಾಗಿಲುಗಳು ತಾವಾಗಿಯೇ ತೆರೆಯಲ್ಪಟ್ಟವು. ಯಾವ ಮೆಟ್ಟಿಲುಗಳು ತೆಗೆಯಲ್ಪಟ್ಟಿದ್ದವೋ ಅವು ಅಲ್ಲೇ ಇದ್ದವು. ಆತನ ಸೇವಕರು, ಸೈನಿಕರು ತಡೆಯಲಾರದೆ ಹೋದರು. ಯಾವಾಗ ರಾಜನು ಕೊನೆಯ ಮೆಟ್ಟಿಲಿನ ಬಳಿಗೆ ಬಂದನೋ ಆ ಕ್ಷಣದಲ್ಲೇ ಭೂಮಿಯು ಸೀಳಲ್ಪಟ್ಟು ರಾಜನು ಒಳಗೆ ಎಳೆಯಲ್ಪಟ್ಟು ನೇರವಾಗಿ ಅವೀಚಿ ನರಕಕ್ಕೆ ಬಿದ್ದನು.
          ಹೀಗಾಗಿ ಆ ದಡ್ಡ ರಾಜನು, ಎಷ್ಟೆಲ್ಲಾ ಪ್ರಯತ್ನಿಸಿದರೂ ಪಾಪಫಲದ ಮುಂದೆ ಅಸಮರ್ಥನಾದನು. ಈ ಗಾಥೆಯು ಆ ಸಂದರ್ಭದಲ್ಲಿ ಭಗವಾನರು ಹೇಳಿದ್ದರು.




No comments:

Post a Comment